ವಿಜಯನಗರ: ಕೊರೊನಾ ಸೋಂಕಿತ 27 ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ
ವಿಜಯನಗರ, ಜೂನ್ 8: ವಿಜಯನಗರ ಜಿಲ್ಲೆ ಹೊಸಪೇಟೆಯ 100 ಹಾಸಿಗೆ ಆಸ್ಪತ್ರೆಯ ವೈದ್ಯರು ಕೊರೊನಾ ಸೋಂಕಿತ 27 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
Recommended Video
ಇಂದಿನ ಕೊರೊನಾ ಸೋಂಕು ಅಂತ ಕಷ್ಟ ಕಾಲದಲ್ಲಿ ಅವರನ್ನು ಮುಟ್ಟಿದರೆ ಸೋಂಕು ತಗಲುತ್ತದೆ ಎನ್ನುವ ದಿನಗಳಿವೆ. ಆದರೆ, ಹೊಸಪೇಟೆಯ ವೈದ್ಯರು ಕೊರೊನಾ ಸೋಂಕಿತ ಗರ್ಭಿಣಿಯರಿಗೆ 14 ಸಾಮಾನ್ಯ ಹೆರಿಗೆ ಮಾಡಿಸಿದ್ದಾರೆ ಮತ್ತು 13 ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿದ್ದಾರೆ.
ಆಸ್ಪತ್ರೆಗೆ ಹೋಗುವುದಕ್ಕೆ ನಿರ್ಲಕ್ಷ್ಯ
ಕೊರೊನಾ ಎರಡನೇ ಅಲೆಯಲ್ಲಿ ಬೆಡ್, ಆಕ್ಸಿಜನ್ ಸಿಗದೇ ನರಳಾಡಿ ಅದೇಷ್ಟೋ ಸಾವು, ನೋವುಗಳು ಸಂಭವಿಸಿವೆ. ಇಂತಹ ಸಂದರ್ಭದಲ್ಲಿ ಗರ್ಭಿಣಿಯರಿಗೆ ಹೊರತೇನಾಗಿಲ್ಲ. ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಕೊರೊನಾ ಬಂತು ಅಂದರೆ ಸಾಕು, ಭಯ ಬಿದ್ದು ಆಸ್ಪತ್ರೆಗೆ ಹೋಗುವುದು ಯಾಕೆ ಬೇಕು ಅಂತ ನಿರ್ಲಕ್ಷ್ಯ ಮಾಡುತ್ತಾರೆ. ತಾಯಿಯರಿಗೆ ಕೊರೊನಾ ಪಾಸಿಟಿವ್ ಇದ್ದರೂ ಸಹ ಅದೃಷ್ಠವಶಾತ್ ಜನಿಸಿದ ಯಾವ ಮಕ್ಕಳಿಗೂ ಕೊರೊನಾ ಸೋಂಕು ತಗುಲಿಲ್ಲ.
ಗರ್ಭಿಣಿಯರಿಗೆ ವೈದ್ಯರಿಂದ ಧೈರ್ಯ ತುಂಬುವ ಕೆಲಸ
ಕೊರೊನಾ ಸೋಂಕು ಬಂದರೆ ಸಾಕು ಅವರು ಸತ್ತೇ ಹೋಗುತ್ತಾರೆ ಅಂತ ಭಯ ಪಡುವ ದಿನವಿದು. ಅಂತಹದರಲ್ಲಿ ಇಲ್ಲಿನ ವೈದ್ಯರು ತಮ್ಮ ಪ್ರಾಣದ ಹಂಗು ತೊರೆದು ಕೊರೊನಾ ಬಂದರೆ ಸಾಯುವ ಕಾಯಿಲೆ ಅಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಂಡರೆ ವಾಸಿಯಾಗುತ್ತದೆ. ನೀವು ಸರಿಯಾದ ಸಮಯಕ್ಕೆ ಬಂದಿದ್ದೀರಿ ನಿಮಗೆ ಏನು ಆಗುವುದಿಲ್ಲ ಅಂತ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಆದ್ರೆ ವಾಸ್ತವದಲ್ಲಿ ಕೊನೆ ಹಂತದಲ್ಲಿ ಆಸ್ಪತ್ರೆಗೆ ಬಂದಿರುವ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಧೈರ್ಯ ತುಂಬಿ ತಮ್ಮ ಜೀವ ರಿಸ್ಕ್ನಲ್ಲಿಟ್ಟು ವೈದ್ಯರು ಹೆರಿಗೆ ಮಾಡಿಸಿದ್ದಾರೆ. 9 ತಿಂಗಳ ತುಂಬು ಗರ್ಭಿಣಿಯರನ್ನು ಹೆರಿಗೆ ಮಾಡಿಸುವುದು ಸಾಹಸದ ಕೆಲಸ, ಅದರಲ್ಲೂ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದು ಕಷ್ಟವೇ ಸರಿ ಎನ್ನುತ್ತಾರೆ ವೈದ್ಯರು.
ಐದು ದಿನ ಮನೆಯಲ್ಲಿಯೇ ಹೋಮ್ ಐಸೋಲೇಷನ್
ಸಾಮಾನ್ಯ ಹೆರಿಗೆಯಾದರೆ ಆಸ್ಪತ್ರೆಯಲ್ಲಿ ಎರಡು ದಿನ ಇಟ್ಟುಕೊಳ್ಳುತ್ತೇವೆ, ಶಸ್ತ್ರಚಿಕಿತ್ಸೆ ಮಾಡಿದರೆ ನಾಲ್ಕರಿಂದ ಐದು ದಿನಗಳವರೆಗೆ ಇಲ್ಲಿಯೇ ಇಟ್ಟುಕೊಳ್ಳುತ್ತೇವೆ. ಪಾಸಿಟಿವ್ ಇದ್ದ ಗರ್ಭಿಣಿಯರಿಗೆ ಹತ್ತು ದಿನಗಳವರೆಗೆ ಆಸ್ಪತ್ರೆಯಲ್ಲಿಟ್ಟುಕೊಂಡು ಚಿಕಿತ್ಸೆ ನೀಡುತ್ತೇವೆ. ನಂತರ ಇನ್ನು ಐದು ದಿನ ಮನೆಯಲ್ಲಿಯೇ ಹೋಮ್ ಐಸೋಲೇಷನ್ನಲ್ಲಿ ಇರಬೇಕು ಎಂದು ಸ್ತ್ರೀರೋಗ ತಜ್ಞೆ ಹೊಸಪೇಟೆಯ ಡಾ.ಪ್ರಿಯಾಂಕ ಹೇಳಿದರು.
ಮುನ್ನಚ್ಚೆರಿಕೆಯ ಕ್ರಮಗಳನ್ನು ವಹಿಸಬೇಕು
ಇನ್ನೂ ಕೊರೊನಾ ಸೊಂಕಿತ ಗರ್ಭಿಣಿಯರಿಗೆ ಹೆರಿಗೆಯಾದ ನಂತರ ಮಕ್ಕಳಿಗೆ ಸೋಂಕಿತ ತಾಯಿ ಹಾಲು ಕುಡಿಸುವುದರಿಂದ ಸೊಂಕು ಹರಡುತ್ತದೆ. ತಾಯಿ-ಮಗು ಜೊತೆಗಿದ್ದರೂ ಸೋಂಕು ತಗಲುತ್ತದೆ ಎಂಬ ಮಾತುಗಳಿಗೆಲ್ಲ ಕಿವಿಗೊಡಬಾರದು. ಹುಟ್ಟುವ ಪ್ರತಿಯೊಬ್ಬ ಮಗುವಿಗೂ ತಾಯಿಯ ಎದೆಹಾಲು ಶ್ರೇಷ್ಠವಾಗಿರುತ್ತದೆ. ಕನಿಷ್ಠ ಆರು ತಿಂಗಳುಗಳ ಕಾಲ ಎದೆ ಹಾಲು ಕುಡಿಸಬೇಕು. ಹಾಲು ಕುಡಿಸುವಾಗ ಕೆಲ ಮುನ್ನಚ್ಚೆರಿಕೆಯ ಕ್ರಮಗಳನ್ನು ವಹಿಸಬೇಕು ಎಂದು ಮಕ್ಕಳ ತಜ್ಞ ವೈದ್ಯರು ಎಂದು ತಿಳಿಸಿದರು.
ಸಂಪೂರ್ಣ ಗುಣಮುಖರಾದ ನಂತರವೇ ಮನೆಗೆ
ಹೊಸಪೇಟೆಯ ಮಕ್ಕಳ ತಜ್ಞ ಡಾ. ಶ್ರೀನಿವಾಸ್ ಮಾತನಾಡಿ, ""ಹೊಸಪೇಟೆಯ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ 27 ಜನ ಸೋಂಕಿತರಿಗೆ ಹೆರಿಗೆ ಮಾಡಿಸಲಾಗಿದೆ. ಆದರೆ ಒಂದೇ, ಒಂದು ಮಗುವಿಗೂ ಸಹ ಕೊರೊನಾ ಪಾಸಿಟಿವ್ ಕಂಡು ಬಂದಿಲ್ಲ, ತಾಯಿ ಮತ್ತು ಮಗು ಸಂಪೂರ್ಣ ಗುಣಮುಖರಾದ ನಂತರವೇ ಮನೆಗೆ ಕಳಿಸಲಾಗುತ್ತಿದೆ'' ಎಂದು ವೈದ್ಯರು ಹೇಳುತ್ತಾರೆ. ಹೊಸಪೇಟೆಯ ವೈದ್ಯರ ಸಾಹಸಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.