'ಮುತ್ತಿನ ರಾಶಿ ಮೂರು ಭಾಗ ಆದಿತಲೇ ಪರಾಕ್': ಏನಿದು ಮೈಲಾರಲಿಂಗನ ಭವಿಷ್ಯ?
ವಿಜಯನಗರ, ಮಾರ್ಚ್ 1: ಕೊರೊನಾ ವೈರಸ್ ಆತಂಕ ಹಾಗೂ ಕಟ್ಟುನಿಟ್ಟಿನ ಪಾಲನೆ ನಡುವೆ ಈ ಬಾರಿಯ ಪ್ರಸಿದ್ಧ ಮೈಲಾರದ ಮೈಲಾರಲಿಂಗೇಶ್ವರ ಕಾರ್ಣಿಕ ನಡೆಯಿತು.
ವಿಜಯನಗರ ಜಿಲ್ಲೆ (ಈ ಹಿಂದೆ ಬಳ್ಳಾರಿ ಜಿಲ್ಲೆ) ಹೂವಿನಹಡಗಲಿ ತಾಲ್ಲೂಕಿನ ಪ್ರಸಿದ್ಧ ಮೈಲಾರ ಕ್ಷೇತ್ರದಲ್ಲಿ ಪ್ರತಿ ವರ್ಷ ಅದ್ಧೂರಿ ಜಾತ್ರೋತ್ಸವ ನಡೆಯುತ್ತಿತ್ತು. ಆದರೆ ಕೊರೊನಾ ಆತಂಕದಿಂದಾಗಿ ಬಳ್ಳಾರಿ ಜಿಲ್ಲಾಡಳಿತ ಅದ್ಧೂರಿ ಜಾತ್ರೋತ್ಸವ ಹಾಗೂ ಭಕ್ತರಿಗೆ ನಿಷೇಧ ಹೇರಿತ್ತು.
ಕಾರಣಿಕಕ್ಕೂ ಮುನ್ನ ಅಪಶಕುನ: ಮುನಿಸಿಕೊಂಡ ಮೈಲಾರಲಿಂಗೇಶ್ವರ? ಭಕ್ತರಲ್ಲಿ ಶುರುವಾಯ್ತು ಆತಂಕ!
ಈ ನಡುವೆ ಸೋಮವಾರ ತ್ರಿಶೂಲ ಅವಘಡ ಸಂಭವಿಸಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದರೂ ಈ ವರ್ಷದ ಕಾರ್ಣಿಕ ಸರಳವಾಗಿ ನಡೆದಿದೆ.
"ಮುತ್ತಿನ ರಾಶಿ ಮೂರು ಭಾಗ ಆದಿತಲೇ ಪರಾಕ್' ಎಂದು ರಾಮಪ್ಪ ಗೊರವಯ್ಯ ನಾಡಿನ ಭವಿಷ್ಯ ನುಡಿದಿದ್ದಾರೆ. ಮುತ್ತಿನ ರಾಶಿ ಮೂರು ಭಾಗ ಆದಿತಲೇ ಪರಾಕ್ ಎಂದರೆ ನಾಡಿನ ಮೂರು ಭಾಗದಲ್ಲಿ ಸಮೃದ್ಧ ಮಳೆ-ಬೆಳೆ ಆಗಲಿದ್ದು, ಉಳಿದ ಒಂದು ಭಾಗದಲ್ಲಿ ಮಳೆ-ಬೆಳೆಯ ಸಮಸ್ಯೆ ಆಗಲಿದೆ ಎಂದು ಭಕ್ತರು ಭವಿಷ್ಯವನ್ನು ಅರ್ಥೈಸಿಕೊಂಡಿದ್ದಾರೆ.
ಈ ದೈವ ವಾಣಿಯನ್ನು ಬೇರೆ ಬೇರೆ ಕ್ಷೇತ್ರಗಳಿಗೆ ಬೇರೆ ಬೇರೆ ಅರ್ಥ ಕಲ್ಪಿಸಿಕೊಳ್ಳುತ್ತಾರೆ. ಕೃಷಿ, ಮಳೆ, ರಾಜಕೀಯ ಧೃವೀಕರಣ ಮತ್ತು ರಾಜಕೀಯ ನಾಯಕರ ಭವಿಷ್ಯದ ಕುರಿತು ಮುಂದಿನ ಒಂದು ವರ್ಷದ ಅವಧಿಗೆ ಅಂದಾಜಿಸಲಾಗುತ್ತದೆ.
ಅಲ್ಲದೆ ಈ ಬಾರಿ ರಾಜಕೀಯವಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಮುನ್ನುಡಿ ಆಗಲಿದೆ. ಈಗಿನಿಂದಲೇ ಸಮ್ಮಿಶ್ರ ಸರ್ಕಾರ ರಚಿಸಲು ರಾಜಕೀಯ ಪಕ್ಷಗಳು ತಯಾರಿ ಮಾಡುತ್ತಿವೆ ಎಂಬರ್ಥ ಎಂದು ಭಕ್ತರು ಚರ್ಚೆ ಆರಂಭಿಸಿದ್ದಾರೆ.
ಸೋಮವಾರ ಬೆಳಗ್ಗೆ ಉತ್ಸವ ಮೂರ್ತಿ ಹೊರಡುವಾಗ ಶಾರ್ಟ್ ಸರ್ಕ್ಯೂಟ್ ಆಗಿ ಮೈಲಾರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿರುವ ಶಿಬಾರ ಕಟ್ಟೆಯ ತ್ರಿಶೂಲ ಮುರಿದು ಬಿದ್ದು, ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ನಂತರದ ಕಾರ್ಯಕ್ರಮಗಳು ಸರಾಗವಾಗಿ ನಡೆದವು.