ಕೋವಿಶೀಲ್ಡ್ ಲಸಿಕೆಯಿಂದ ಹಲವು ಕಾಯಿಲೆಗಳು ಗುಣಮುಖ!
ವಿಜಯನಗರ, ಜೂನ್ 19: ಕಳೆದ 10 ವರ್ಷಗಳಿಂದ ವಾಸಿಯಾಗದ ಕಾಯಿಲೆ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ಬಳಿಕ ಗುಣಮುಖವಾದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ.
ಗುಡೇಕೋಟೆ ಗ್ರಾಮದಲ್ಲಿ ಪಾಲಾಕ್ಷ( 49), ಬಸವೇಶ(50) ಕೀಲುನೋವು ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ ವ್ಯಕ್ತಿಗಳಾಗಿದ್ದರು. ಕೋವಿಶೀಲ್ಡ್ ಹಾಕಿಸಿಕೊಂಡ ಬಳಿಕ 10 ವರ್ಷಗಳಿಂದ ವಾಸಿಯಾಗದ ಕಾಯಿಲೆ ವ್ಯಾಕ್ಸಿನ್ ಪಡೆದ ಬಳಿಕ ಕಾಯಿಲೆ ಇಲ್ಲವಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬಸವೇಶ ಎಂಬುವರಲ್ಲಿ ಹಲವು ವರ್ಷದಿಂದ ಕೀಲುನೋವು ಕಾಣಿಸಿಕೊಂಡಿತ್ತು. ಈ ಕಾಯಿಲೆಯಿಂದ ಮೈ- ಕೈ ನೋವು ಸಮಸ್ಯೆಯಿಂದ ನರಳುತ್ತಿದ್ದರು.
ಮೈ, ಕೀಲು ನೋವು ವಾಸಿಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೂ ಸಹ ಕಾಯಿಲೆ ವಾಸಿಯಾಗಿರಲಿಲ್ಲ. ದಾವಣಗೆರೆ ಆಸ್ಪತ್ರೆ, ಸಂಡೂರು, ಹೊಸಪೇಟೆ ಆಸ್ಪತ್ರೆಗಳಿಗೆ ಹೀಗೆ ನಾನಾ ಕಡೆ ಸಾಕಷ್ಟು ಬಾರಿ ಆಸ್ಪತ್ರೆಗೆ ತೋರಿಸಿದರೂ ವಾಸಿಯಾಗಿರಲಿಲ್ಲ.
ಕೊರೊನಾ ವೈರಸ್ಗಾಗಿ ಹಾಕಿಸಿದ ಎಪ್ರಿಲ್ 05 ರಂದು ಫಸ್ಟ್ ಡೋಸ್ ಕೋವಿಶಿಲ್ಡ್ ಲಸಿಕೆ ಪಡೆದ ಬಳಿಕ ಕಾಯಿಲೆ ವಾಸಿಯಾಗಿದೆ. ಈ ಕುರಿತು ಒನ್ಇಂಡಿಯಾ ಕನ್ನಡದೊಂದಿಗೆ ಡಿಎಚ್ಒ ಜನಾರ್ಧನ್ ಮಾತನಾಡದರು.
"ಬಸವೇಶ ಎನ್ನುವವರಿಗೆ ಕಾಯಿಲೆಗಳು ಗುಣಮುಖರಾಗಿರುವುದು ಸಂತಸ ಸಂಗತಿಯಾಗಿದೆ. ಆದರೆ, ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಕಾಯಿಲೆ ಗುಣಮುಖವಾಗಿರುವುದು ವೈಜ್ಞಾನಿಕ ಪುರಾವೆಗಳು ಇಲ್ಲ. ಪಾಲಕ್ಷ ಎನ್ನುವವರಿಗೂ ಸಹ ಕಾಯಿಲೆ ಗುಣಮುಖವಾಗಿವೆ ಎಂದು ಹೇಳಲಾಗುತ್ತಿದೆ. ಕೋವಿಶೀಲ್ಡ್ನಿಂದ ಗುಣಮುಖವಾಗಿರುವುದರ ಬಗ್ಗೆ ಸಂಶೋಧನೆಯಿಂದ ಖಚಿತತೆಗೊಳ್ಳಬೇಕಾಗಿದೆ. ಬಸವೇಶ, ಪಾಲಾಕ್ಷ ಅವರಿಂದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ, ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಬಳಿಕ ಈ ಕುರಿತು ತಿಳಿಯಲಿದೆ," ಎಂದು ಹೇಳಿದರು.
Recommended Video