ವಿಜಯನಗರ: ಮಹಾತ್ಮ ಗಾಂಧೀಜಿ ಪ್ರತಿಮೆ ಭಗ್ನ; ಹೇಳೋರಿಲ್ಲ, ಕೇಳೋರಿಲ್ಲ!
ವಿಜಯನಗರ, ಆಗಸ್ಟ್ 14: ಬೆಳಗಾದರೆ (ಭಾನುವಾರ) ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿವೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹಾತ್ಮ ಗಾಂಧೀಜಿ ಅತೀ ಪ್ರಮುಖವಾದದ್ದು. ಗಾಂಧೀಜಿಯವರನ್ನು ದೇಶ ರಾಷ್ಟ್ರಪಿತ ಅಂತಲೇ ಸಂಬೋಧಿಸುತ್ತದೆ.
ಇಡೀ ರಾಷ್ಟ್ರವೇ ಮಹಾತ್ಮ ಗಾಂಧೀಜಿಗೆ ಗೌರವ ನೀಡುತ್ತಿದೆ. ಆದರೆ ಇಲ್ಲಿ ಮಾತ್ರ ಕಳೆದ 7 ರಿಂದ 8 ವರ್ಷಗಳಿಂದ ಗಾಂಧೀಜಿ ಪ್ರತಿಮೆಯ ಕೋಲು, ಕೈ ಮುರಿದು ಭಗ್ನವಾಗಿದ್ದರೂ, ಇಲ್ಲಿ ಯಾರು ಕೇಳುವವರು ಇಲ್ಲವಾಗಿದೆ. ಇದು ದೃಶ್ಯ ಕಂಡುಬಂದಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ.
ಹನುಮನಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರತ್ಯೇಕವಾಗಿ ಒಂದು ರೂಂ ತರಹ ಮಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಪ್ರತಿಮೆ ಇರಿಸಲಾಗಿದೆ. ಗಾಂಧಿ ಪ್ರತಿಮೆಯ ಎಡಗೈಯಲ್ಲಿರುವ ಕೋಲು ಮುರಿದು ಹೋಗಿದ್ದು ಜತೆಗೆ ಮುಂಗೈ ಸಹ ಇಲ್ಲವಾಗಿದೆ. ಬಲಗೈಯಲ್ಲಿರುವ ಪುಸ್ತಕವನ್ನು ವಿರೂಪಗೊಳಿಸಲಾಗಿದೆ. ಎಡಗಾಲು ಮತ್ತು ಬಲಗಾಲು ಹಾಗೂ ಮೂಗನ್ನು ಸಹ ಕಲ್ಲಿನಿಂದ ಚಚ್ಚಿ ವಿರೂಪಗೊಳಿಸಲಾಗಿದೆ.
ಗಾಂಧಿ ಪ್ರತಿಮೆಗೆ ಭದ್ರತೆ ಇಲ್ಲ
ಶಾಲೆಯ ಆವರಣದಲ್ಲಿರುವ ಈ ಗಾಂಧಿ ಪ್ರತಿಮೆಗೆ ಪ್ರತ್ಯೇಕವಾಗಿ ಮೇಲ್ಛಾವಣಿ ಕಟ್ಟಿಸಿ, ಸಿಮೆಂಟ್ ಶೀಟ್ನ್ನು ಹಾಕಲಾಗಿದೆ. ಜತೆಗೆ ಸುತ್ತಲೂ ಕಬ್ಬಿಣದ ಪರದೆಯನ್ನು ಹಾಕಲಾಗಿದೆ.
ಮೊದಲು ಹನುಮನಹಳ್ಳಿ ಗ್ರಾಮದ ಮಧ್ಯೆ, ಗ್ರಂಥಾಲಯದ ಪಕ್ಕದಲ್ಲಿ ಇದನ್ನು ಇರಿಸಲಾಗಿತ್ತು. ಆದರೆ ಗ್ರಾಮದಲ್ಲಿ ಕೆಲ ಪುಢಾರಿಗಳು ಗಾಂಧಿ ಪ್ರತಿಮೆಯ ಬಳಿ ಕುಡಿಯುವುದು, ಕಟ್ಟೆಯ ಮೇಲೆ ಮಲಗುವುದು, ಕಲ್ಲಿನಿಂದ ಕಟೆದು ವಿರೂಪಗೊಳಿಸಿದ್ದರು. ಶಾಲೆಯ ಆವರಣದಲ್ಲಿ ಈ ಪ್ರತಿಮೆಯನ್ನು ಇರಿಸಿದರೆ ಸೂಕ್ತ ಎಂದು ಗ್ರಾಮದ ಮುಖಂಡರು ತೀರ್ಮಾನ ಮಾಡಿ, ಪ್ರತಿಮೆಯನ್ನು ಶಾಲೆಯಲ್ಲಿ ಸುತ್ತಲೂ ಕಟ್ಟೆ ಕಟ್ಟಿಸಿ ಮೇಲ್ಛಾವಣಿ ಹಾಕಿ ನಿಲ್ಲಿಸಲಾಯಿತು. ಅಂದಿನಿಂದ ಶಾಲೆಯವರು ನೋಡಿಕೊಂಡು ಹೋಗುತ್ತಿದ್ದರು.ಕಿಡಿಗೇಡಿಗಳಿಂದ ಕಳ್ಳತನ
ಶಾಲೆಯ ಆವರಣದಲ್ಲಿ 10 ರಿಂದ 12 ವರ್ಷಗಳ ಹಿಂದೆ ಈ ಪ್ರತಿಮೆಯನ್ನು ಸ್ಥಳಾಂತರಿಸಲಾಗಿತ್ತು. ಶಾಲೆ ನಡೆಯುವ ಸಮಯದಲ್ಲಿ ಶಿಕ್ಷಕರು ನೋಡಿಕೊಳ್ಳುತ್ತಿದ್ದರು. ಆದರೆ ರಾತ್ರಿಯಾಗುತ್ತಿದ್ದಂತೆ ಸ್ಥಳೀಯ ಮದ್ಯ ವ್ಯಸನಿಗಳು, ಪುಢಾರಿಗಳು ರಾತ್ರೋರಾತ್ರಿ ಕಬ್ಬಿಣದ ಜಾಲ್ ಡ್ರಿಯನ್ನು ಕುಡಿಯುವುದಕ್ಕೆ ಕದ್ದು ಮಾರಾಟ ಮಾಡಿದ್ದಾರೆ. ಮೇಲ್ಛಾವಣಿಗೆ ಹಾಕಿದ್ದ ಸಿಮೇಂಟ್ ಶೀಟ್ ಹೊಡೆದು ಹೋಗಿ ರಂಧ್ರವಾಗಿದೆ.
ಈಗ ಗಾಂಧಿ ಪ್ರತಿಮೆ ಭದ್ರತೆ ಇಲ್ಲದೇ ಅನಾಥವಾಗಿ ನಿಂತಿದೆ.ಹನುಮನಹಳ್ಳಿ ಪ್ರಾಥಮಿಕ ಶಾಲೆಯ ಆವರಣ ಸುಮಾರು 3 ರಿಂದ 4 ಎಕರೆ ವಿಶಾಲವಾದ ಸ್ಥಳದಲ್ಲಿ ಈ ಪ್ರತಿಮೆಯನ್ನು ಇರಿಸಲಾಗಿದೆ. ಸಾಕಷ್ಟು ವಿಶಾಲವಾಗಿರುವುದರಿಂದ ಇಲ್ಲಿ ಗಿಡಗಂಟೆಗಳು ಬೆಳೆದಿವೆ. ಹಾಗಾಗಿ ಇಲ್ಲಿ ಜನರು ಬಹಿರ್ದೆಸೆಗೆ ಬರುತ್ತಾರೆ.
ಶಾಲೆ ಸಿಬ್ಬಂದಿಯವರಿಂದ ನಿರ್ಲಕ್ಷ್ಯ
ಮಕ್ಕಳಿಗೆ ಸಾರ್ವಜನಿಕ ಆಸ್ತಿಗಳನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡಬೇಕು ಎಂದು ಶಿಕ್ಷಕರು ಹೇಳುತ್ತಾರೆ. ಈ ಹನುಮನಹಳ್ಳಿ ಶಾಲೆಯ ಶಿಕ್ಷಕರಿಗೆ ಇದು ಅನ್ವಯಿಸುವುದಿಲ್ಲ. ಯಾಕೆಂದರೆ ಗಾಂಧಿ ಪ್ರತಿಮೆ ಬಳಿ ಸ್ವಚ್ಛತೆಯನ್ನುವುದು ಮರೀಚಿಕೆಯಾಗಿದೆ. ಪ್ರತಿಮೆ ಬಗ್ಗೆ ವಿಚಾರಿಸಿದರೆ, ""ನಾವೇನು ಮಾಡೋಣ ಸಾರ್, ನಮ್ಮ ಕೆಲಸಗಳನ್ನು ಮಾಡಿದರೆ ಸಾಕು, ಅದನ್ನೆಲ್ಲ ಎಲ್ಲಿ ಮಾಡೋಕೆ ಆಗುತ್ತದೆ ಎಂದು ಇಲ್ಲಿಯ ಶಿಕ್ಷಕ ಸಿಬ್ಬಂದಿಯವರು ಹೇಳುತ್ತಾರೆ. ಗಾಂಧಿ ಪ್ರತಿಮೆ ಭಗ್ನವಾಗಿ 7ರಿಂದ 8 ವರ್ಷಗಳು ಕಳೆದರೂ ಮೇಲಾಧಿಕಾರಿಗಳಿಗೆ ಇದುವರೆಗೂ ಒಂದು ಪತ್ರ ಸಹ ಬರೆದಿಲ್ಲ. ಇಲ್ಲಿಯೇ ಗೊತ್ತಾಗುತ್ತದೆ ಇವರ ಕಾಳಜಿ ಏನು ಅಂತ.
ಆರೋಪ ಪ್ರತ್ಯಾರೋಪ
ನಮ್ಮ ಕೈಯಲ್ಲಿ ಗಾಂಧಿ ಪ್ರತಿಮೆಯ ಸುತ್ತಲೂ ಸ್ವಚ್ಛತೆ ಮಾಡುವುದು ಬಿಟ್ಟರೆ, ನಮ್ಮಿಂದ ಏನು ಮಾಡುವುದಕ್ಕೆ ಆಗುವುದಿಲ್ಲ. ಇದರ ಬಗ್ಗೆ ಢಣಾಪುರ ಗ್ರಾಮ ಪಂಚಾಯಿತಿಗೆ ಗಾಂಧಿ ಪ್ರತಿಮೆ ಭಗ್ನವಾಗಿರುವ ಕುರಿತು ತಿಳಿಸಿದ್ದೇವೆ ಎಂದು ಶಾಲಾ ಆಡಳಿತ ಮಂಡಳಿಯವರು ಹೇಳುತ್ತಾರೆ. ಆದರೆ ಗ್ರಾಮ ಪಂಚಾಯಿತಿ ಪಿಡಿಒ "ಇಷ್ಟು ವರ್ಷಗಳಿಂದ ನಮ್ಮ ಗಮನಕ್ಕೆ ಬಂದಿರಲಿಲ್ಲ, ಶಾಲೆಯವರಾದರೂ ನಮ್ಮ ಗಮನಕ್ಕೆ ತಂದಿಲ್ಲ ಎಂದು ಶಾಲೆ ಸಿಬ್ಬಂದಿ ಮೇಲೆ ಆರೋಪ ಮಾಡುತ್ತಾರೆ. ಈಗ ನಮ್ಮ ಗಮನಕ್ಕೆ ಬಂದಿದೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರುತ್ತೇವೆ," ಎಂದರು.
ತಹಶೀಲ್ದಾರರ ಗಮನಕ್ಕೆ ತಂದಿದ್ದೇವೆ
"ಸುಮಾರು ವರ್ಷಗಳಿಂದ ಈ ಗಾಂಧಿ ಪ್ರತಿಮೆ ಭಗ್ನಗೊಂಡು ಹಾಗೆ ಇದೆ. ನಾವು ಗ್ರಾ.ಪಂ ಸದಸ್ಯರಾದ ಮೇಲೆ ಪಿಡಿಓ ಮತ್ತು ಶಾಲೆಯ ಮುಖ್ಯ ಶಿಕ್ಷಕರಿಗೆ, ತಹಶೀಲ್ದಾರರ ಗಮನಕ್ಕೆ ತಂದಿದ್ದೇವೆ. ಆಗಸ್ಟ್ 15 ಬರುತ್ತಿದೆ, ಅದರೊಳಗಾಗಿ ಈ ಪ್ರತಿಮೆಯನ್ನು ಸರಿಪಡಿಸಿ ಎಂದು ತಿಳಿಸಿತ್ತು. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ," ಎಂದು 114 ಡಣಾಪುರ ಗ್ರಾ.ಪಂ ಸದಸ್ಯ ಚೌಟ್ಗಿ ನಾಗರಾಜ ಹೇಳಿದ್ದಾರೆ.
ನಾವು ಸ್ವಚ್ಛತೆಯನ್ನು ಮಾತ್ರ ಮಾಡಬಹುದು
"ನಮ್ಮ ಶಾಲೆ ಹಂತದಲ್ಲಿ ನಾವು ಸ್ವಚ್ಛತೆಯನ್ನು ಮಾತ್ರ ಮಾಡಬಹುದು. ನಾವು ಆಗಾಗ ಗಾಂಧಿ ಪ್ರತಿಮೆ ಬಳಿ ಸುತ್ತಲೂ ಸ್ವಚ್ಛತೆಯನ್ನು ಮಾಡುತ್ತಿರುತ್ತೇವೆ. ನಮ್ಮ ಮೇಲಿನ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದೇವೆ, ಅವರು ಕ್ರಮ ಕೈಗೊಳ್ಳುತ್ತಾರೆ ನೋಡೋಣವೆಂದು," ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮನಹಳ್ಳಿ ಮುಖ್ಯ ಶಿಕ್ಷಕ ಮಂಜುನಾಥ ತಿಳಿಸಿದರು.
ಏನು ಸೂಚನೆ ಕೊಡುತ್ತಾರೋ ಅದನ್ನು ಮಾಡುತ್ತೇವೆ
"ಹನುಮನಹಳ್ಳಿಯ ಶಾಲಾ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಭಗ್ನವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವರು ಏನು ಸೂಚನೆ ಕೊಡುತ್ತಾರೋ ಅದನ್ನು ಮಾಡುತ್ತೇವೆ," ಎಂದು 114 ಢಣಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀರಳ್ಳಿ ಮಂಜುನಾಥ ಹೇಳಿದರು.