ವಿಜಯನಗರ ಪ್ರತ್ಯೇಕ ಜಿಲ್ಲೆಗೆ ವಿರೋಧ; ಯಾರು, ಏನು ಹೇಳಿದರು?
ಬಳ್ಳಾರಿ, ಅಕ್ಟೋಬರ್ 01 : ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತ್ಯೇಕ ಜಿಲ್ಲೆ ಮಾಡುವ ವಿರುದ್ಧ ಇಂದು ಬಳ್ಳಾರಿ ಬಂದ್ಗೆ ಕರೆ ನೀಡಲಾಗಿದೆ.
ಶಾಸಕ ಸೋಮಶೇಖರ ರೆಡ್ಡಿ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ಶಾಸಕ ಜಿ. ಕರುಣಾಕರ ರೆಡ್ಡಿ ವಿಜಯನಗರ ಜಿಲ್ಲಾ ರಚನೆಯನ್ನು ವಿರೋಧಿಸಿದ್ದಾರೆ. ಜಿಲ್ಲಾ ರಚನೆ ವಿರೋಧ ಮಾಡುತ್ತಿರುವ ವಿವಿಧ ಸಂಘಟನೆಗಳು ಸಮಿತಿಯೊಂದನ್ನು ರಚನೆ ಮಾಡಿಕೊಂಡು ಹೋರಾಟ ಆರಂಭಿಸಿವೆ.
ಉಪ ಚುನಾವಣೆ ಎದುರಿಸುತ್ತಿರುವ ವಿಜಯನಗರ ಪರಿಚಯ
ವಿಜಯನಗರ ಕ್ಷೇತ್ರದ ಅನರ್ಹ ಶಾಸಕ ಆನಂದ್ ಸಿಂಗ್ ಪ್ರತ್ಯೇಕ ಜಿಲ್ಲೆಯ ಬೇಡಿಕೆ ಇಟ್ಟಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಒತ್ತಡಕ್ಕೆ ಮಣಿದು ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲು ತರಾತುರಿಯಲ್ಲಿ ಆದೇಶ ಹೊರಡಿಸಿದ್ದಾರೆ ಎಂಬುದು ಶಾಸಕರ ಆರೋಪವಾಗಿದೆ. ಜಿಲ್ಲೆಯ ನಾಲ್ಕು ಬಿಜೆಪಿ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿಲ್ಲ ಎಂದು ದೂರಿದ್ದಾರೆ.
ಬಳ್ಳಾರಿ ರಾಜಕೀಯ; ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಬಿಜೆಪಿಗೆ?
ಪ್ರಸ್ತಾವನೆಯಂತೆ ವಿಜಯನಗರ ಪ್ರತ್ಯೇಕ ಜಿಲ್ಲೆಯಾದರೆ ಹೊಸಪೇಟೆ ಕೇಂದ್ರ ಸ್ಥಾನವಾಗಲಿದೆ. ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳು ಹೊಸ ಜಿಲ್ಲೆಗೆ ಸೇರ್ಪಡೆಯಾಗಲಿವೆ.
ಹೊಸ ಜಿಲ್ಲೆ ರಚನೆಗೆ ಯಡಿಯೂರಪ್ಪ ಆಸಕ್ತಿ, ಅಧಿಕೃತ ಆದೇಶ ಬಾಕಿ
ಕರುಣಾಕರ ರೆಡ್ಡಿ ವಿರೋಧ
ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಕರುಣಾಕರ ರೆಡ್ಡಿ ನೂತನ ಜಿಲ್ಲಾ ರಚನೆ ವಿರೋಧಿಸಿದ್ದಾರೆ. "ಕೆಲವರ ಒತ್ತಡಕ್ಕೆ ಮಣಿದು, ಅವರ ಸ್ವಹಿತಾಸಕ್ತಿಗಾಗಿ ಮುಖ್ಯಮಂತ್ರಿಗಳು ನೂತನ ಜಿಲ್ಲೆ ರಚನೆಗೆ ಮುಂದಾಗಿರುವುದು ಸರಿಯಲ್ಲ. ಜಿಲ್ಲೆಯ ನಾಲ್ಕು ಬಿಜೆಪಿ ಶಾಸಕರ ಅಭಿಪ್ರಾಯವನ್ನು ಮುಖ್ಯಂತ್ರಿಗಳು ಪಡೆಯಬಹುದಿತ್ತು. ಆದರೆ, ಈ ಘಟನೆಯಿಂದಾಗಿ ನಿಜಕ್ಕೂ ನಾವು ಬಿಜೆಪಿಯ ಶಾಸಕರೇ ಎಂಬ ಪ್ರಶ್ನೆ ಕೇಳಿಕೊಳ್ಳುವಂತಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.
ಬಳ್ಳಾರಿ ವಿಭಜನೆ ವಿರೋಧಿಸುತ್ತಿರುವವರು ಆಂಧ್ರದವರು
ಸಾಹಿತಿ ಕುಂ. ವೀರಭದ್ರಪ್ಪ ಬಳ್ಳಾರಿ ವಿಭಜನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಬಳ್ಳಾರಿ ವಿಭಜನೆಯನ್ನು ವಿರೋಧಿಸುತ್ತಿರುವ ರೆಡ್ಡಿಗಳು ಆಂಧ್ರದವರು. ವಿಭಜನೆಯಿಂದ ಜನಸಾಮಾನ್ಯರಿಗಾಗುವ ಪ್ರಯೋಜನವೇನು ಎಂಬುದು ಅವರಿಗೆ ತಿಳಿದಿಲ್ಲ. ಅಧಿಕಾರ ವಿಕೇಂದ್ರಿಕರಣಕ್ಕಾಗಿ ಆಂಧ್ರ ಮತ್ತು ತೆಲಂಗಾಣದಲ್ಲಿ ಚಿಕ್ಕ ಜಿಲ್ಲೆಗಳನ್ನು ಮಾಡಲಾಗುತ್ತಿದೆ. ಬಳ್ಳಾರಿ ವಿಭಜಿಸುವುದರಲ್ಲಿ ತಪ್ಪಿಲ್ಲ" ಎಂದು ಹೇಳಿದರು.
ಡಾ. ಸಿ. ಎನ್. ಅಶ್ವತ್ಥ ನಾರಾಯಣ್
"ಒಳ್ಳೆಯ ಉದ್ದೇಶದಿಂದಲೇ ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆಯನ್ನು ರೂಪಿಸಲಾಗುತ್ತಿದೆ. ಈ ವಿಭಜನೆ ಅಲ್ಲಿನ ಜನರ ಬಹುದಿನಗಳ ಬೇಡಿಕೆಯೂ ಆಗಿದೆ. ಇದನ್ನು ಯಾರೂ ವಿರೋಧಿಸಬಾರದು. ಜಿಲ್ಲೆ ರಚನೆ ವಿಚಾರದಲ್ಲಿ ಒಮ್ಮತ ಅಗತ್ಯ. ಆದರೆ, ಇದರ ಬಗ್ಗೆ ಅನಪೇಕ್ಷಿತ ಮಾತುಗಳು ಕೇಳಿ ಬರುತ್ತಿವೆ" ಎಂದು ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ ನಾರಾಯಣ್ ಹೇಳಿದರು.
ಸೋಮಶೇಖರ ರೆಡ್ಡಿ ಹೇಳಿಕೆ
ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಜಿಲ್ಲೆಯನ್ನು ವಿಭಜಿಸುವ ವಿಚಾರ ಸಚಿವ ಸಂಪುಟ ಅನುಮೋದನೆಯಾದರೆ ಬೆಂಕಿ ಹೊತ್ತಿಕೊಳ್ಳುತ್ತದೆ. ಸಭೆ ನಡೆದರೂ ಬಿ. ಶ್ರೀರಾಮುಲು ಜಿಲ್ಲೆ ರಚನೆಗೆ ವಿರೋಧ ವ್ಯಕ್ತಪಡಿಸಲಿದ್ದಾರೆ" ಎಂದು ಹೇಳಿದರು.