ಲಾಕ್ಡೌನ್ ಪರಿಣಾಮ: ಡೋಲಾಯಮಾನ ಸ್ಥಿತಿಯಲ್ಲಿ ಆಟೋ ಚಾಲಕರ ಬದುಕು
ವಿಜಯನಗರ, ಮೇ 10: ಲಾಕ್ ಡೌನ್ ಸಂಕಷ್ಟದಲ್ಲಿ ಆಟೋ ಚಾಲಕರಿಗೆ ದುಡಿಮೆ ಇಲ್ಲದೆ, ನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಹಣವಿಲ್ಲದೆ ಬದುಕು ಬೀದಿ ಪಾಲಾಗಿದೆ.
ಹೌದು. ಇದು ವಿಜಯನಗರ ಜಿಲ್ಲೆಯ ಹೊಸಪೇಟೆ ಕೇಂದ್ರ ಸ್ಥಾನ ಮತ್ತು ಎಲ್ಲಾ ತಾಲ್ಲೂಕುಗಳ ಆಟೋ ಚಾಲಕರ ದುಸ್ಥಿತಿಯಾಗಿದೆ. ಕಳೆದ ವರ್ಷ ಮಾ.24ರಂದು ಲಾಕ್ಡೌನ್ ಘೋಷಣೆ ಮಾಡಿದ್ದನ್ನು ಚೇತರಿಸಿಕೊಳ್ಳುವುದರೊಳಗೆ ಈಗ ಮತ್ತೆ ಲಾಕ್ಡೌನ್ ಮಾಡಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊರೊನಾ ಮಾಹಾಮಾರಿಯಿಂದ ಅದೇಷ್ಟೊ ಜನರು ಪ್ರಾಣ ಕಳೆದುಕೊಂಡರೆ, ಅದೆಷ್ಟೋ ಜನರು ಬೀದಿಗೆ ಬಿದ್ದಿದ್ದಾರೆ. ಅದರಲ್ಲೂ ಸಾಲ ಮಾಡಿ ತಿಂಗಳ ಕಂತು ಕಟ್ಟುವವರ ಪರಿಸ್ಥಿತಿಯಂತೂ ಯಾರಿಗೂ ಹೇಳತೀರದಾಗಿದೆ.
ಮನೆ ಮುಂದೆ ನಿಲ್ಲಿಸುವುದು ಅನಿವಾರ್ಯ
ಈ ಕೊರೊನಾ ಸುಳಿಯಲ್ಲಿ ಸಿಕ್ಕ ಆಟೋ ಚಾಲಕರ ಬದುಕು ಹೊರತೇನಿಲ್ಲ. ದಿನಕ್ಕೆ ನೂರೋ, ಇನ್ನೋರೋ ರೂಪಾಯಿ ಸಂಪಾದನೆ ಮಾಡಿ, ಅದರಲ್ಲಿ ಸಾಲದ ಬಡ್ಡಿ, ಅಸಲು ಕಟ್ಟಿ ಕುಟುಂಬವೆಂಬ ಬಂಡಿಯನ್ನು ಸಾಗಿಸುವ ಆಟೋ, ಟ್ಯಾಕ್ಸಿ ಚಾಲಕರ ಬದುಕು ಲಾಕ್ಡೌನ್ನಿಂದ ಡೋಲಾಯಮಾನಾಗಿದೆ.
ಒಂದು ಕಡೆ ದುಡಿಮೆ ಇಲ್ಲದೆ ಖಾಲಿ ಕುಳಿತಿರುವ ಚಾಲಕರಿಗೆ ಕುಟುಂಬ ನಿರ್ವಹಣೆ ಹೇಗೆ ಮಾಡಬೇಕು ಎಂಬ ಚಿಂತೆ ಕಾಡುತ್ತಿದೆ. ರೈಲ್ವೆ ನಿಲ್ದಾಣದಿಂದ ಟಿಕೆಟ್ ಹೊಂದಿದ ಪ್ರಯಾಣಿಕರನ್ನು ಕರೆದುಕೊಂಡು ಬರುವುದಕ್ಕೆ ಹಾಗೂ ಯಾರಿಗಾದರೂ ಆರೋಗ್ಯದ ತುರ್ತು ಸೇವೆ ಸಂದರ್ಭದಲ್ಲಿ ಮಾತ್ರ ಆಟೋವನ್ನು ರಸ್ತೆಗೆ ಇಳಿಸುವ ಚಾಲಕರು, ಆಟೋವನ್ನು ಮನೆ ಮುಂದೆ ನಿಲ್ಲಿಸುವುದು ಅನಿವಾರ್ಯವಾಗಿದೆ.
ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ಆಟೋಗಳ ಸಂಖ್ಯೆ
ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರ ಆಟೋಗಳಿವೆ. ವಿಜಯನಗರ ಜಿಲ್ಲಾ ಕೇಂದ್ರ ಸ್ಥಾನವಾದ ಹೊಸಪೇಟೆಯಲ್ಲಿ ಸುಮಾರು 3500 ಕ್ಕೂ ಹೆಚ್ಚು ಇವೆ. ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹೂವಿನಹಡಗಲಿ, ಕೊಟ್ಟೂರು ಕೂಡ್ಲಿಗಿ ಸೇರಿದಂತೆ ಸರಿ ಸುಮಾರು 11,500 ಆಟೋಗಳಿವೆ. ಎಲ್ಲಾ ಆಟೋ ಚಾಲಕರ ಬವಣೆ ಒಂದೇ ಆಗಿದ್ದು, ಕಳೆದ ಬಾರಿಯ ಲಾಕ್ ಡೌನ್ ಹೊಡೆತದಿಂದ ತತ್ತರಿಸಿ ಹೋಗಿದ್ದ ಆಟೋ ಚಾಲಕರು, ಈಗ ರಾಜ್ಯಯ ಸರ್ಕಾರ ವಿಧಿಸಿರೋ ಜನತಾ ಕರ್ಫ್ಯೂನಿಂದ ಕಂಗಾಲಾಗಿದ್ದಾರೆ.
ಆಟೋ ಚಾಲಕರ ಮಾತು
ನಾನಾ ಕಾರಣಗನ್ನು ಮುಂದಿಡದೆ ಲೈಸೆನ್ಸ್ ಆಧಾರದ ಮೇಲೆ ಆಟೋ, ಚಾಲಕರಿಗೆ ಪರಿಹಾರ ನೀಡಬೇಕು. ಬ್ಯಾಂಕ್, ಫೈನಾನ್ಸ್ ಗಳು ಯಾವುದೇ ರೀತಿಯ ಬಡ್ಡಿ ಇಲ್ಲದೆ, ಕಂತುಗಳನ್ನು ಲಾಕ್ಡೌನ್ ಅವಧಿ ಮುಗಿಯುವ ವರೆಗೆ ಮುಂದೂಡುವಂತೆ ಸರ್ಕಾರ ಆದೇಶಿಸಬೇಕು. ಇನ್ಸುರೆನ್ಸ್ (ವಿಮೆ)ಯನ್ನು ಮುಂದೂಡಬೇಕು, ಸಾಲ ಕಟ್ಟುವಂತೆ ಬ್ಯಾಂಕ್, ಫೈನಾನ್ಸ್ನವರು ಒತ್ತಡ ಹಾಕದಂತೆ ಕ್ರಮವಹಿಸಬೇಕು. ಈ ರೀತಿ ಮಾಡುವುದರಿಂದಾದರೂ ಸಂಕಷ್ಟದಲ್ಲಿರುವ ಚಾಲಕರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಚಾಲಕರು.
ಆಟೋ ಚಾಲಕರ ಆರೋಪ
ಇನ್ನು ಕಳೆದ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ರಾಜ್ಯದ 7.74 ಲಕ್ಷ ಆಟೋ, ಟ್ಯಾಕ್ಸಿ ಚಾಲಕರಿಗೆ ಕೋವಿಡ್ ಪರಿಹಾರ ಕೊಡುವುದಾಗಿ ವ್ಯಾಪಕ ಪ್ರಚಾರ ಮಾಡಿದ ಸರ್ಕಾರ, 2.34 ಲಕ್ಷ ಚಾಲಕರಿಗೆ ಮಾತ್ರ 5 ಸಾವಿರ ರೂ.ದಂತೆ ಪರಿಹಾರ ನೀಡಿದೆ.
2020 ಮಾ.24ಕ್ಕೆ ಚಾಲ್ತಿಯಲ್ಲಿರುವ ಲೈಸೆನ್ಸ್ ಮತ್ತು ಬ್ಯಾಡ್ಜ್ ಹೊಂದಿದ ಚಾಲಕರಿಗೆ ಮಾತ್ರ ಈ ಪರಿಹಾರ ದೊರೆಯಲಿದೆ ಎಂದು ಸರ್ಕಾರ ಸೂಚಿದ್ದರಿಂದ ಬ್ಯಾಡ್ಜ್ ಇಲ್ಲದವರಿಗೆ ಪರಿಹಾರ ದೊರೆಯಲಿಲ್ಲ.
ಆಟೋ ಚಾಲಕರ ಬೇಡಿಕೆ
ಇನ್ನುಳಿದ ಚಾಲಕರಿಗೆ ಪರಿಹಾರ ಕೈ ಸೇರಿಲ್ಲ. ಪರಿಹಾರಕ್ಕಾಗಿ ಕಳೆದ ಬಾರಿ ರಾಜ್ಯಾದ್ಯಂತ ಸಲ್ಲಿಸಿದ್ದ ಇನ್ನೂ 30 ರಿಂದ 40 ಸಾವಿರ ಅರ್ಜಿಗಳು ಆಧಾರ್ ಲಿಂಕ್ ಸಮಸ್ಯೆ, ವಾಹನದ ಚಾಸಿ ನಂಬರ್ ಹೊಂದಾಣಿಕೆಯಾಗದ ಕಾರಣ ಅರ್ಜಿಗಳು ಬಾಕಿ ಇವೆ. ಇಂತಹ ತಾಂತ್ರಿಕ ಕಾರಣದಿಂದಾಗಿ ಹೊಸಪೇಟೆಯ 1200 ಚಾಲಕರಿಗೆ ಮಾತ್ರ ಕಳೆದ ಬಾರಿ ಪರಿಹಾರ ದೊರೆತಿದೆ. ಇನ್ನುಳಿದವರಿಗೆ ಪರಿಹಾರ ಕೈಸೇರಲಿಲ್ಲ. ಇದರ ಬಗ್ಗೆ ಯಾರೂ ಗಮನ ಹರಿಸಿಲ್ಲ ಎಂಬುದು ಚಾಲಕರ ಆರೋಪವಾಗಿದೆ.
ಈಗಾಗಲೇ ರಾಜ್ಯ ಸರ್ಕಾರ ಲಾಕ್ ಡೌನ್ ಮಾದರಿಯ ಟೈಟ್ ಜನತಾ ಕರ್ಫ್ಯೂ ಜಾರಿ ಮಾಡಿದ್ದು, ಇದು ಮುಗಿಯುವವರೆಗೆ ಪ್ರತಿ ತಿಂಗಳ 10 ಸಾವಿರ ರೂ. ಪರಿಹಾರ ಹಣ ಚಾಲಕರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಪಡಿತರದಲ್ಲಿ ಅಕ್ಕಿ ದೊರೆಯುತ್ತಿದ್ದು, ಇದರ ಜತೆಗೆ ಬೇಳೆ, ಸಕ್ಕರೆ, ಬೆಲ್ಲ ಅಗತ್ಯ ವಸ್ತುಗಳನ್ನು ರೇಷನ್ ಕಾರ್ಡ್ ಮುಖಾಂತರವೇ ವಿತರಿಸಬೇಕು ಎಂಬುದು ಆಟೋ ಚಾಲಕರ ಬೇಡಿಕೆಯಾಗಿದೆ.