ವಿಜಯನಗರ: ಎಸ್ಎಲ್ಆರ್ ಕಾರ್ಖಾನೆಯಿಂದ ಕೊರೊನಾ ಮಾರ್ಗಸೂಚಿ ಉಲ್ಲಂಘನೆ
ವಿಜಯನಗರ, ಮೇ 21: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಎಸ್ಎಲ್ಆರ್ ಕಾರ್ಖಾನೆಯ ಕಂಪನಿಯು ನಿತ್ಯ ನೂರಾರು ಕಾರ್ಮಿಕರನ್ನು ತಮ್ಮ ಬಸ್ಗಳಲ್ಲಿ ಕರೆದುಕೊಂಡು ಹೋಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಲೋಕಪ್ಪನಹೊಲದ ಗ್ರಾಮದಲ್ಲಿರುವ ಈ ಕಾರ್ಖಾನೆಯಲ್ಲಿ ನೂರಾರು ಜನ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಇಲ್ಲಿ ಕೆಲಸ ಮಾಡುವವರು ಮರಿಯಮ್ಮನಹಳ್ಳಿ, ಢಣಾಪುರ, ಹನುಮನಹಳ್ಳಿ, ಡಣನಾಯಕನಕೆರೆ, ಮರಬ್ಬಿಹಾಳು, ವರದಾಪುರ ಹಗರಿಬೊಮ್ಮನಹಳ್ಳಿ ಹೀಗೆ ಹಲವಾರು ಹಳ್ಳಿಗಳಿಂದ ಬಂದು ಕೆಲಸ ಮಾಡುತ್ತಿದ್ದಾರೆ.
ಅವಳಿ ನಗರಗಳಾದ ಹೊಸಪೇಟೆ ಮತ್ತು ಬಳ್ಳಾರಿ ನಗರಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಕಠಿಣ ಲಾಕ್ಡೌನ್ ಜಾರಿ ಮಾಡಿದೆ. ಕೊರೊನಾ ಮಾರ್ಗಸೂಚಿ ಪ್ರಕಾರ ಕಾರ್ಮಿಕರನ್ನು ಹೊರಗಡೆಯಿಂದ ಕರೆದುಕೊಂಡು ಬರುವಂತಿಲ್ಲ, ಕಾರ್ಮಿಕರನ್ನು ಕಾರ್ಖಾನೆಯ ಒಳಗಡೆ ವಾಸ್ತವ್ಯ ಮಾಡಿಸಬೇಕೆಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಮಾಡಿದೆ.
ಆದರೆ, ಎಸ್ಎಲ್ಆರ್ ಕಾರ್ಖಾನೆಯವರು ಮಾತ್ರ ಜಿಲ್ಲಾಡಳಿತದ ಆದೇಶಕ್ಕೆ ಕ್ಯಾರೆ ಎನ್ನದೇ ನಿತ್ಯ ಕಾರ್ಮಿಕರನ್ನು ತಮ್ಮ ಕಾರ್ಖಾನೆಯಲ್ಲಿ ಒಂದೆಡೆ ಸೇರಿಸುತ್ತಾರೆ. ಕೆಲಸ ಮಾಡಿಸಿಕೊಂಡು ಪುನಃ ಅವರನ್ನು ಹೊರಗಡೆ ಬಿಡುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ಪ್ರಕರಣಗಳನ್ನು ಉತ್ಪಾದಿಸುವ ಕೇಂದ್ರವಾಗಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕು ಆಡಳಿತ ಮಾತ್ರ ಇದನ್ನು ನೋಡಿಯೂ ನೋಡದಂತೆ ಮೌನ ವಹಿಸಿದೆ. ತಾಲೂಕು ಆಡಳಿತ ಇನ್ನು ಮುಂದಾದರೂ ಕಾರ್ಖಾನೆಗೆ ಬೀಗ ಜಡಿದು ಮುಚ್ಚುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಹಗರಿಬೊಮ್ಮನಹಳ್ಳಿ ತಾ.ಪಂ ಸದಸ್ಯರು ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ಜನಸಾಮಾನ್ಯರಿಗೆ ಒಂದು ನ್ಯಾಯ, ಕಾರ್ಪೋರೆಟ್ ಸಂಸ್ಥೆಗಳಿಗೆ ಒಂದು ನ್ಯಾಯ ಎನ್ನುವಂತಾಗಿದೆ ಎಂದರು.