ಅಧಿಕಾರಿಗಳ ಪ್ರಮಾದ: ಹೊಸಪೇಟೆ ನಗರಸಭೆ ವೆಬ್ಸೈಟ್ನಲ್ಲಿ ಚನ್ನಪಟ್ಟಣದ ಚಿತ್ರಗಳು
ವಿಜಯನಗರ. ಜೂನ್ 9: ಹೊಸಪೇಟೆ ನಗರಸಭೆಯ ಅಧಿಕೃತ ವೆಬ್ಸೈಟ್ನಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸ್ವಾಗತ ಕೋರುವ ಚಿತ್ರಗಳು ಸಿಗುತ್ತಿವೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆಯ ಅಧಿಕೃತ ವೆಬ್ಸೈಟ್ನಲ್ಲಿ ತಾಂತ್ರಿಕ ಕಾರಣ ಅಥವಾ ನಿರ್ಲಕ್ಷ್ಯದಿಂದ ಬೊಂಬೆನಾಡು ಚನ್ನಪಟ್ಟಣಕ್ಕೆ ಸ್ವಾಗತ ಎಂದು ರಸ್ತೆಗೆ ಹಾಕಿರುವ ಸ್ವಾಗತ ಕಮಾನು ಕಾಣಿಸುತ್ತದೆ.
ಗ್ಯಾಲರಿ 2 ಎನ್ನುವ ಪೇಜ್ನಲ್ಲಿ ಬೊಂಬೆನಾಡು ಚನ್ನಪಟ್ಟಣಕ್ಕೆ ಸ್ವಾಗತ ಬೋರ್ಡ್, ಚನ್ನಪಟ್ಟಣದ ರೈಲ್ವೆ ಸ್ಟೇಶನ್, ಐತಿಹಾಸಿಕ ದೊಡ್ಡಮಲ್ಲೂರಿನ ಅಪ್ರಮೇಯ ಸ್ವಾಮಿ ದೇವಸ್ಥಾನ, ಜಿಯಾರತ್ ಇ ಹಜರತ್ ಮಹೊಮ್ಮದ್ ಅದಿಲ್ ಷಾ ಕ್ವಾದ್ರಿ, ಮಸೀದಿ, ಚನ್ನಪಟ್ಟಣ ಕ್ರಾಫ್ಟ್ಸ್ ಪಾರ್ಕ್, ಕಣ್ವ ಜಲಾಶಯ ಒಳಗೊಂಡಂತೆ ಇನ್ನಿತರ ಚಿತ್ರಗಳನ್ನು ಹಾಕಲಾಗಿದೆ.
ಹೊಸಪೇಟೆ ನಗರಸಭೆಯ ಇತಿಹಾಸ
ಹೊಸಪೇಟೆ ನಗರಸಭೆಯು 1913 ಲ್ಲಿ ಸ್ಥಾಪನೆಗೊಂಡಿದ್ದು, ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಆಗಿನ ಜನಸಂಖ್ಯೆಗೆ ಅನುಗುಣವಾಗಿ ಪುರಸಭೆಯನ್ನಾಗಿ ರಚನೆ ಮಾಡಲಾಯಿತು. ನಂತರ 1963ರಲ್ಲಿ ನಗಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಇಂತಹ ಇತಿಹಾಸ ಹೊಂದಿರುವ ನಗರಸಭೆಗೆ ತನ್ನದೇ ಆದ ಅಸ್ತಿತ್ವವನ್ನು ಹೊಂದಿದೆ. ಇದು ಮೊದಲು ಹೈದರಾಬಾದ್ ಪ್ರಾಂತ್ಯಕ್ಕೆ ಒಳಪಟ್ಟಿತ್ತು, ಭಾಷಾವಾರು ರಾಜ್ಯಗಳ ವಿಂಗಡಣೆ ಮಾಡಿದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಯಿತು.
ತುಂಗಭದ್ರಾ ನದಿ ಹಾದು ಹೋಗಿದೆ
ನಗರಸಭೆಯ ವ್ಯಾಪ್ತಿಯಲ್ಲಿ ಕಾರಿಗನೂರು, ಕೊಂಡನಾಯಕನಹಳ್ಳಿ, ಚಿತ್ತವಾಡಿಗಿ, ತುಂಗಭದ್ರಾ ಡ್ಯಾಂ ಸೇರಿದಂತೆ ಒಟ್ಟು 35 ವಾರ್ಡ್ಗಳನ್ನು ಒಳಗೊಂಡಿದೆ. ತುಂಗಭದ್ರಾ ನದಿಯು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾಗಿದ್ದು, ತುಂಗಾ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಸೇರಿ, ನಂತರ ತುಂಗಭದ್ರಾ ನದಿ ಪ್ರಾರಂಭವಾಗುತ್ತದೆ. ಮುಂದೆ ಇದು ಆಂಧ್ರಪ್ರದೇಶದ ಕರ್ನೂಲು ಬಳಿ ಇದಕ್ಕಿಂತ ದೊಡ್ಡದಾದ ಕೃಷ್ಣಾ ನದಿಯನ್ನು ಸೇರುತ್ತದೆ. ಐತಿಹಾಸಿಕವಾಗಿರುವ ನದಿಯು ಹೊಸಪೇಟೆಯಿಂದ ಹಾದು ಹೋಗುತ್ತದೆ. ಇಂತಹ ನದಿಯ ಚಿತ್ರಗಳನ್ನು ಹಾಕದೆ ಇಲ್ಲಿನ ಜನತೆಯ ಕೆಂಗಣ್ಣಿಗೆ ಅಧಿಕಾರಿಗಳು ಗುರಿಯಾಗಿದ್ದಾರೆ.
ಐತಿಹಾಸಿಕ ಹಂಪಿ
ಹಂಪಿಯು ಯುನೆಸ್ಕೋ ಪಟ್ಟಿಯಲ್ಲಿ ಸೇರಿದೆ ಮತ್ತು ವಿಶ್ವವಿಖ್ಯಾತಿಯನ್ನು ಪಡೆದಿರುವ ಹಂಪಿಯಲ್ಲಿ ಸಾಕಷ್ಟು ಐತಿಹಾಸಿಕ ಇರುವ ಸ್ಮಾರಕಗಳಿವೆ. ಅದರಲ್ಲಿ ಹಂಪಿ ವಿರೂಪಾಕ್ಷ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನ, ಕಲ್ಲಿನ ರಥ, ರಾಣಿ ಸ್ನಾನ ಗೃಹ, ಕಮಲ ಮಹಲ, ಆನೆ ಸಾಲು, ಮಹಾನವಮಿ ದಿಬ್ಬ ಹೀಗೆ ಹಲವಾರು ಸ್ಮಾರಕಗಳಿವೆ ಜತೆಗೆ ತುಂಗಭದ್ರಾ ಜಲಾಶಯ ಮತ್ತು ಕರಡಿಧಾಮ ಹಾಗೂ ಅಟಲ್ ಬಿಹಾರಿ ವಾಜಪೇಯಿ ಜಿಯೊಲಾಜಿಕಲ್ ಪಾರ್ಕ್ ಹೀಗೆ ಹಲವಾರು ಪ್ರವಾಸೋದ್ಯಮ ಪಟ್ಟಿಯಲ್ಲಿರುವ ಸ್ಥಳಗಳಿವೆ. ಇಂತಹ ಸ್ಥಳಗಳನ್ನು ಹೊಸಪೇಟೆ ನಗರಸಭೆ ಅಧಿಕೃತ ವೆಬ್ಸೈಟ್ನಲ್ಲಿ ಹಾಕದೇ, ಚನ್ನಪಟ್ಟಣದ ತಾಲ್ಲೂಕಿನಲ್ಲಿರುವ ಸ್ಮಾರಕಗಳ ಚಿತ್ರಣಗಳನ್ನು ಹಾಕಲಾಗಿದೆ.
ನಾಮಕವಾಸ್ತೆ ವೆಬ್ಸೈಟ್
ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳ ಅಲೆದಾಟ ತಪ್ಪಿಸುವ ಸಲುವಾಗಿ ಆನ್ಲೈನ್ ಸೇವೆಗಳನ್ನು ತೆರೆದಿದೆ. ಸರ್ಕಾರಿ ಮಾಹಿತಿಗಳನ್ನು ತಾವು ಇರುವ ಸ್ಥಳದಲ್ಲಿಯೇ ಮಾಹಿತಿ ಪಡೆಯುವುದಕ್ಕೆ ಆಯಾ ಇಲಾಖೆಯ ಅಧಿಕೃತ ವೆಬ್ಸೈಟ್ಗಳಲ್ಲಿ ತಮ್ಮ ಇಲಾಖೆಯ ಮಾಹಿತಿ ಮತ್ತು ಸೇವೆಗಳನ್ನು ಹಾಕಿರುತ್ತವೆ. ಆದರೆ ಹೊಸಪೇಟೆಯ ಅಧಿಕೃತ ವೆಬ್ಸೈಟ್ನಲ್ಲಿ ನಗರಸಭೆಗೆ ಸಂಬಂಧಿಸಿದ ಕೆಲ ಮಾಹಿತಿಗಳಿದ್ದು, ಕೊನೆಯ ಅಪ್ಡೇಟ್ ಜ.28 ಸಂಜೆ 4.01 ನಿಮಿಷಕ್ಕೆ ಅಂತ ಅಪ್ಡೇಟ್ ಇದೆ. 2021ರ ಅರ್ಧ ವರ್ಷ ಕಳೆದರೂ ಇನ್ನು ವೆಬ್ಸೈಟ್ ಅಪ್ಡೇಟ್ ಆಗಿಲ್ಲ.
ನಿಮ್ಮ ಸದಸ್ಯರನ್ನು ತಿಳಿದುಕೊಳ್ಳಿ
ಈ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿದರೆ ಸುದ್ದಿ 1, ಸುದ್ದಿ 2 ಹೀಗೆ ನಾಲ್ಕರ ತನಕ ಬರುತ್ತದೆ. ಆದರೆ, ಸುದ್ದಿ 1 ಅದರ ಮೇಲೆ ಕ್ಲಿಕ್ ಮಾಡಿದರೆ ಯಾವುದೇ ಮಾಹಿತಿ ಲಭ್ಯವಾಗುವುದಿಲ್ಲ. ಈ ಅಪ್ಲಿಕೇಶನ್ನಲ್ಲಿ ನಗರಸಭೆಯ ಸದಸ್ಯರುಗಳ ಹೆಸರು ಮತ್ತು ಮಾಹಿತಿ ಲಭ್ಯವಿರುವುದಿಲ್ಲ, ಕಳೆದ ಎರಡು ವರ್ಷಗಳಿಂದ ಪೌರಾಯುಕ್ತರ ಆಡಳಿತ ನಡೆಯುತ್ತಿರುವುದರಿಂದ ಸದಸ್ಯರುಗಳ ಹೆಸರು ಇಲ್ಲ. ಅಲ್ಲದೆ ಈ ಅಪ್ಲಿಕೇಶನ್ನಲ್ಲಿ ನಗರಸಭೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಹಾಕಿಲ್ಲ.
ಮಾಹಿತಿ ಹಕ್ಕು ಅಪ್ಲಿಕೇಶನ್
ಸರ್ಕಾರ ಪಾರದರ್ಶಕತೆ ಆಡಳಿತಕ್ಕಾಗಿ ಯಾವುದೇ ಪ್ರಜೆಯು ಸರ್ಕಾರದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯುವ ಸಲುವಾಗಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತಂದಿದೆ. ಆದರೆ ಈ ವೆಬ್ಸೈಟ್ನಲ್ಲಿ ಮಾಹಿತಿ ಹಕ್ಕಿನ ಅಡಿ ಎಷ್ಟು ಅರ್ಜಿಗಳು ಬಂದಿವೆ ಅನ್ನುವುದನ್ನು ಪ್ರಕಟಿಸಬೇಕಿತ್ತು, ಅದೂ ಇಲ್ಲದಂತಾಗಿದೆ.
ಕೂಡಲೇ ವೆಬ್ಸೈಟ್ ಅಪ್ಡೇಟ್ ಮಾಡಲು ಒತ್ತಾಯ
ತಮ್ಮ ನಗರಸಭೆಯಲ್ಲಿ ಆಗುವಂತಹ ಭ್ರಷ್ಟಾಚಾರಗಳನ್ನು ಮುಚ್ಚಿಡುವುದಕ್ಕಾಗಿ ಮಾಹಿತಿಗಳನ್ನು ವೆಬ್ಸೈಟ್ನಲ್ಲಿ ಹಾಕುವುದಿಲ್ಲ. ಟೆಂಡರ್ ಕರೆದಿದ್ದು ಮತ್ತು ಓಪನ್ ಆಗಿದ್ದು, ಕ್ಲೋಸ್ ಆಗಿದ್ದು ಮಾತ್ರ ಹಾಕುತ್ತಾರೆ. ಯಾರಿಗೆ ಆಗಿದೆ, ಎಷ್ಟು ರೂ.ಗಳಿಗೆ ಆಗಿದೆ, ಕಾಮಗಾರಿ ಸ್ಥಿತಿಗತಿಯ ಬಗ್ಗೆ ಹಾಕುವುದಿಲ್ಲ. ಸಾರ್ವಜನಿಕರಿಗೆ ಗೊತ್ತಾಗಬಾರದು ಅಂತಾನೇ ಮಾಹಿತಿಯನ್ನು ಹಾಕುವುದಿಲ್ಲ. ಈ ಮುಂಚೆ ರಮೇಶ್ ಕುಮಾರ ಪೌರಾಯಕ್ತರಾಗಿದ್ದ ಸಂದರ್ಭದಲ್ಲಿ ಸಾಫ್ಟ್ವೇರ್ ಅಪ್ಡೇಟ್ ಮಾಡಿ ಅಂತ ಮನವಿ ಪತ್ರ ಕೊಡಲಾಗಿತ್ತು. ಸ್ವಲ್ಪ ದಿನಗಳವರೆಗೆ ಮಾತ್ರ ವೆಬ್ಸೈಟ್ ಅಪ್ಡೇಟ್ ಮಾಡಿದರೂ ಮತ್ತೆ ಮಾಡಿಲ್ಲ. ಈ ಕೂಡಲೇ ಅದನ್ನು ಅಪ್ಡೇಟ್ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಡಿವೈಎಫ್ವೈ ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್ ತಿಳಿಸದರು.
ಹೊಸಪೇಟೆ ನಗರಸಭೆಯ ಪೌರಾಯುಕ್ತ ಮನ್ಸೂರ್ ಅಲಿಯವರು ಸುಮಾರು 8 ರಿಂದ 10 ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಪತ್ರಕರ್ತರ ಮೊಬೈಲ್ನಿಂದ ಕಾಲ್ ಮಾಡಿದರೂ ಕರೆ ಸ್ವೀಕರಿಸಲಿಲ್ಲ, ಇನ್ನು ಜನಸಾಮಾನ್ಯರ ಕರೆ ಹೇಗೆ ಸ್ವೀಕರಿಸುತ್ತಾರೆ?