ಹೊಸಪೇಟೆ: ರೈಲ್ವೆ ಇಲಾಖೆಯ 18 ಸಿಬ್ಬಂದಿಗೆ ಕೊರೊನಾ ವೈರಸ್ ಪತ್ತೆ
ವಿಜಯನಗರ, ಮಾರ್ಚ್ 9: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ರೈಲ್ವೆ ಜಂಕ್ಷನ್ನ 18 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲರೂ ಹುಬ್ಬಳ್ಳಿ, ಗದಗ, ಬೆಂಗಳೂರಿನಿಂದ ಹೊಸಪೇಟೆ ರೈಲ್ವೆ ಜಂಕ್ಷನ್ಗೆ ವರ್ಗಾವಣೆಯಾಗಿ ಬಂದಿದ್ದಾರೆ ಎನ್ನಲಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ರೈಲ್ವೆ ಜಂಕ್ಷನ್ನ 18 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಉಪ ವಿಭಾಗಾಧಿಕಾರಿ ಸಿದ್ಧರಾಮೇಶ್ವರ ಹೇಳಿದ್ದಾರೆ. ಈ ಎಲ್ಲ 18 ಕೊರೊನಾ ಸೋಂಕಿತರು ಒಂದೇ ಕಟ್ಟಡದಲ್ಲಿ ವಾಸವಾಗಿದ್ದಾರೆ. ಈ ಕಟ್ಟಡವನ್ನು 14 ದಿನಗಳ ಕಾಲ ಕಂಟೈನ್ಮೆಂಟ್ ವಲಯವನ್ನಾಗಿ ಒಳಪಡಿಸಲಾಗಿದೆ.
ಕರ್ನಾಟಕದಲ್ಲಿ ಒಂದೇ ದಿನ 590 ಮಂದಿಗೆ ಕೊರೊನಾವೈರಸ್
ಉಪವಿಭಾಗಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ವಿಭಾಗಾಧಿಕಾರಿ ಸಿದ್ಧರಾಮೇಶ್ವರ, "ರೈಲ್ವೆ ಇಲಾಖೆಯ ಇಲ್ಲಿನ 22 ಸಿಬ್ಬಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಿದಾಗ 18 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ' ಎಂದು ಮಾಹಿತಿ ನೀಡಿದರು.
"ರೈಲ್ವೆ ಮೂಲಕ ಬರುವ ಪ್ರಯಾಣಿಕರ ಸುರಕ್ಷತೆಗೂ ಕ್ರಮಕೈಗೊಳ್ಳಲು ಆಡಳಿತ ತೀರ್ಮಾನಿಸಿದ್ದು, ಹೊಸಪೇಟೆ ನಗರ ಪ್ರವಾಸಿ ಕೇಂದ್ರವಾಗಿರುವುದರಿಂದ ಸ್ಥಳೀಯರು ಸೇರಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ಶಾಲೆ, ಕಾಲೇಜು ಸೇರಿ ಇತರ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲಿಸಬೇಕು' ಎಂದು ಸಲಹೆ ನೀಡಿದ್ದಾರೆ.
ಈ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಹೊಸಪೇಟೆ ತಹಸೀಲ್ದಾರ್ ಎಚ್.ವಿಶ್ವನಾಥ, ಹೊಸಪೇಟೆ ತಾಲೂಕು ವೈದ್ಯಾಧಿಕಾರಿ ಭಾಸ್ಕರ್, ವೈದ್ಯ ನಾಗೇಂದ್ರ ಇದ್ದರು.