ವಿಜಯನಗರ ಜಿಲ್ಲೆ ರಚನೆ: ಬಳ್ಳಾರಿ ಬಂದ್ ವಿಫಲ
ಬಳ್ಳಾರಿ, ನವೆಂಬರ್ 26: ಗಣಿನಾಡು ಬಳ್ಳಾರಿ ಜಿಲ್ಲೆ ಇಬ್ಭಾಗ ಮಾಡಿರುವುದನ್ನು ಖಂಡಿಸಿ, ಅಖಂಡ ಬಳ್ಳಾರಿ ಜಿಲ್ಲೆಯ ಉಳಿವಿಗಾಗಿ ಒತ್ತಾಯಿಸಿ, ಇಂದು ಬಳ್ಳಾರಿ ಬಂದ್ಗೆ ಕರೆ ನೀಡಲಾಗಿತ್ತು.
ಬಳ್ಳಾರಿಯ ಸುಮಾರು 62 ಕ್ಕೂ ಹೆಚ್ಚು ಸಂಘಟನೆಗಳು ಇಂದು ಬಂದ್ಗೆ ಕರೆ ನೀಡಿದ್ದವು. ಆದರೆ ಸಂಘಟನೆಯ ಕೊರತೆಯಿಂದಾಗಿ ಬಳ್ಳಾರಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಬಳ್ಳಾರಿ ಬಂದ್: ಸರ್ಕಾರದ ವಿರುದ್ಧ ಘೋಷಣೆ
ಬಳ್ಳಾರಿ ನಗರದ ರಾಯಲ್ ಸರ್ಕಲ್ ಹೊರತುಪಡಿಸಿ ಉಳಿದಂತೆ ಜನ ಜೀವನ ಎಂದಿನಂತೆ ಇದ್ದು, ಅಲ್ಲದೆ ರಾಯಲ್ ಸರ್ಕಲ್ ಹೊರತುಪಡಿಸಿ ಬೇರೆ ಯಾವುದೇ ರಸ್ತೆ ಬಂದ್ ಆಗಿಲ್ಲ.
ಇನ್ನು ಕರೆ ನೀಡಿದ್ದ ಬಂದ್ ಕೇವಲ ಸಾಂಕೇತಿಕ ಪ್ರತಿಭಟನೆಗೆ ಮಾತ್ರ ಸೀಮಿತವಾಗಿದೆ. ನಗರದ 62 ಸಂಘಟನೆಯಿಂದ ಬಂದ್ಗೆ ಕರೆ ನೀಡಿದ್ದರೂ, ಕೇವಲ ಆಯಾ ಸಂಘಟನೆಯ ನಾಯಕರಿಗೆ ಮಾತ್ರ ಬಂದ್ ಸೀಮಿತವಾಗಿದೆ.
ಈ ಹಿಂದೆ ಜಿಲ್ಲೆ ವಿಭಜನೆಗೆ ಘಟಾನುಘಟಿ ನಾಯಕರು ವಿರೋಧ ಮಾಡಿದ್ದರು, ಆದರೆ ಈಗ ಕರೆ ನೀಡಿದ ಬಂದ್ಗೆ ಜಿಲ್ಲೆಯ ರಾಜಕೀಯ ಮುಖಂಡರು ದೂರು ಉಳಿದಿದ್ದಾರೆ. ಹೀಗಾಗಿ ಸಂಘಟನೆಯ ಕೊರತೆಯಿಂದಾಗಿ ಇಂದಿನ ಬಂದ್ ಸಂಪೂರ್ಣವಾಗಿ ವಿಫಲವಾಗಿದೆ ಎಂದೇ ಹೇಳಬಹುದು.
ಇಂದು ಗುರುವಾರ ಬೆಳಿಗ್ಗೆ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ಕೈಗೊಂಡಿದ್ದ ಬಳ್ಳಾರಿ ಬಂದ್ ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಸಿಎಂ ಬಿ.ಎಸ್ ಯಡಿಯೂರಪ್ಪ ಭಾವಚಿತ್ರ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.