ಬಳ್ಳಾರಿ ವಿಭಜನೆ; ವಿಜಯನಗರ ಜಿಲ್ಲಾ ರಚನೆ ಹೋರಾಟದ ಚಿತ್ರಣ
ಬಳ್ಳಾರಿ, ನವೆಂಬರ್ 18 : ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚನೆ ಮಾಡಬೇಕು ಎಂಬ ಬೇಡಿಕೆ ಈಡೇರಿದೆ. ಕರ್ನಾಟಕ ಸರ್ಕಾರ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ರಚನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
2007ರಲ್ಲಿ ಮೊದಲ ಬಾರಿಗೆ ವಿಜಯನಗರ ಜಿಲ್ಲೆಯನ್ನು ರಚನೆ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಹೋರಾಟವೂ ಆರಂಭವಾಗಿತ್ತು. ಆದರೆ, ಪರ-ವಿರೋಧ ಹೋರಾಟ ಕೆಲವು ಕಾಲ ನಡೆದು, ಬಳಿಕ ಅದು ತಣ್ಣಗಾಗಿತ್ತು.
ವಿಜಯನಗರ ಜಿಲ್ಲೆ ರಚನೆಗೆ ಒಪ್ಪಿಗೆ; ಆನಂದ್ ಸಿಂಗ್ ಹೇಳಿದ್ದೇನು?
2018ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ವಿಜಯನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಆನಂದ್ ಸಿಂಗ್ ವಿಜಯನಗರ ಪ್ರತ್ಯೇಕ ಜಿಲ್ಲೆಯ ಹೋರಾಟವನ್ನು ಆರಂಭಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ವಿಜಯನಗರ ಜಿಲ್ಲಾ ರಚನೆಯೇ ನನ್ನ ಗುರಿ ಎಂದು ಘೋಷಣೆ ಮಾಡಿದರು.
ವಿಜಯನಗರ ಜಿಲ್ಲೆ ಸ್ಥಾಪನೆಗೆ ಅಸ್ತು ಎಂದ ಸಚಿವ ಸಂಪುಟ
2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಿಲ್ಲಾ ವಿಚಾರವನ್ನೇ ಪ್ರಮುಖವಾಗಿಟ್ಟುಕೊಂಡು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ಬಂದರು. ಬಿಜೆಪಿ ಸರ್ಕಾರ ರಚನೆಯಾದಾಗ ಅರಣ್ಯ ಸಚಿವರೂ ಆದರು. ಜಿಲ್ಲಾ ರಚನೆ ಹೋರಾಟಕ್ಕೆ ಮತ್ತಷ್ಟು ಚುರುಕು ಮುಟ್ಟಿಸಿದರು.
ವಿಜಯನಗರ ಜಿಲ್ಲೆ ರಚನೆಗೆ ಕಂಪ್ಲಿ ಶಾಸಕ ಜೆ.ಎನ್ ಗಣೇಶ ಸ್ವಾಗತ
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲಾ ರಚನೆಗೆ ಅಧಿಕೃತ ಒಪ್ಪಿಗೆ ಸಿಕ್ಕಿದೆ. ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಆನಂದ್ ಸಿಂಗ್ಗೆ ಗೆಲವು ಸಿಕ್ಕಿದೆ. ಸರ್ಕಾರ ಜಿಲ್ಲಾ ರಚನೆ ಕುರಿತು ಅಧಿಕೃತ ಆದೇಶ ಹೊರಡಿಸುವುದು ಬಾಕಿ ಇದೆ.
ತಾಲೂಕುಗಳ ವಿವರ; ಬಳ್ಳಾರಿ ಜಿಲ್ಲೆ ವಿಭಜನೆ ಅಗತ್ಯವಿತ್ತೇ? ಎಂಬ ಪ್ರಶ್ನೆಗೆ ಹೌದು ಎಂಬ ಉತ್ತರ ಬರುತ್ತದೆ. ಪ್ರಸ್ತುತ 11 ತಾಲೂಕುಗಳನ್ನು ಒಳಗೊಂಡಿರುವ ಬಹುದೊಡ್ಡ ಜಿಲ್ಲೆ ಬಳ್ಳಾರಿ. ಹೂವಿನಹಡಗಲಿ, ಹರಪನಹಳ್ಳಿ ತಾಲೂಕುಗಳು ಬಳ್ಳಾರಿ ಜಿಲ್ಲಾ ಕೇಂದ್ರದಿಂದ ದೂರದಲ್ಲಿವೆ. ಕಚೇರಿ ಕೆಲಸಗಳಿಗೆ ಜಿಲ್ಲಾ ಕೇಂದ್ರಕ್ಕೆ ಪ್ರಯಾಣ ಮಾಡುವುದು ಜನರಿಗೆ ಸಮಸ್ಯೆಯಾಗಿತ್ತು.
ಹೊಸಪೇಟೆಯನ್ನು ಕೇಂದ್ರವಾಗಿ ಮಾಡಿಕೊಂಡು ವಿಜಯನಗರ ಜಿಲ್ಲೆ ರಚನೆ ಮಾಡಬೇಕು. ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳನ್ನು ಹೊಸ ಜಿಲ್ಲೆ ವ್ಯಾಪ್ತಿಗೆ ತರಬೇಕು ಎಂಬುದು ಬೇಡಿಕೆಯಾಗಿತ್ತು. ಯಾವ ತಾಲೂಕು ಸೇರಬೇಕು ಎಂದು ಸರ್ಕಾರ ಅಂತಿಮ ಆದೇಶವನ್ನು ಇನ್ನು ಹೊರಡಿಸಬೇಕಿದೆ.
ವಿಜಯನಗರ ಜಿಲ್ಲೆ; ಹೊಸಪೇಟೆಯನ್ನು ಕೇಂದ್ರ ಸ್ಥಾನವಾಗಿ ಮಾಡಿ ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳನ್ನು ವಿಜಯನಗರ ಜಿಲ್ಲೆಗೆ ಸೇರಿಸಬೇಕು ಎಂಬುದು ಪ್ರಸ್ತಾವನೆಯಾಗಿದೆ.
ಹೊಸ ಜಿಲ್ಲೆ ರಚನೆಯಾದರೆ ಈಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ಕೇಂದ್ರ ಸ್ಥಾನವಾಗಲಿದೆ. ಬಳ್ಳಾರಿ, ಸಂಡೂರು, ಸಿರಗುಪ್ಪ, ಕೂಡ್ಲಗಿ ಮತ್ತು ಕುರುಗೋಡು ಬಳ್ಳಾರಿ ಜಿಲ್ಲೆಯಲ್ಲಿ ಉಳಿಯಲಿವೆ.