ಹೊಸಪೇಟೆಯಲ್ಲಿ ಮಳೆಯಲ್ಲೇ ಸೋಂಕಿತನ ಶವ ಬಿಟ್ಟು ಹೋದ ಸಿಬ್ಬಂದಿ; ಡಿಸಿ ಸ್ಪಷ್ಟನೆ
ಬಳ್ಳಾರಿ, ಜುಲೈ 2: ಬಳ್ಳಾರಿಯಲ್ಲಿ ಗುಂಡಿಯೊಂದಕ್ಕೆ ಕೊರೊನಾ ಸೋಂಕಿತರ ಮೃತದೇಹಗಳನ್ನು ಎಸೆದ ವಿಡಿಯೋವೊಂದು ಎರಡು ದಿನಗಳ ಹಿಂದೆ ವೈರಲ್ ಆಗಿತ್ತು. ಈ ರೀತಿ ಅಮಾನವೀಯವಾಗಿ ಅಂತ್ಯಸಂಸ್ಕಾರ ನಡೆಸಿದ ರೀತಿಗೆ ಎಲ್ಲೆಡೆ ಆಕ್ರೋಶವೂ ವ್ಯಕ್ತಗೊಂಡಿತ್ತು.
Recommended Video
ಇದೀಗ ಅಂಥದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಮಳೆಯಲ್ಲೇ ಕೊರೊನಾ ಸೋಂಕಿತನ ಮೃತದೇಹವನ್ನು ಆಸ್ಪತ್ರೆ ಬಳಿ ಆರೋಗ್ಯ ಇಲಾಖೆ ಸಿಬ್ಬಂದಿ ಬಿಟ್ಟು ಹೋಗಿದ್ದು, ಆ ಘಟನೆಯನ್ನು ಆಟೋ ಚಾಲಕರೊಬ್ಬರು ವಿಡಿಯೋ ಮಾಡಿದ್ದಾರೆ. ಆರೋಗ್ಯ ಇಲಾಖೆ ಕುರಿತು ಆಕ್ರೋಶ ವ್ಯಕ್ತಗೊಂಡಿದೆ. ಆದರೆ ಇದು ಉದ್ದೇಶಪೂರ್ವಕವಾಗಿ ಮಾಡಿರುವ ವಿಡಿಯೋ, ಯಾವುದೇ ತಪ್ಪು ನಡೆದಿಲ್ಲ ಎಂದು ತಿಳಿಸಿದ್ದಾರೆ ಜಿಲ್ಲಾಧಿಕಾರಿ ನಕುಲ್. ಈ ಘಟನೆ ಕುರಿತ ವಿವರ ಇಲ್ಲಿದೆ...
ಹೊಸಪೇಟೆ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ
ಹೊಸಪೇಟೆ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದರು. ಅವರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ತಿಳಿದುಬಂದಿತ್ತು. ಜೂನ್ 30ರಂದು ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ನಡೆದಿತ್ತು. ಆದರೆ ಮಳೆ ಬರುತ್ತಿದ್ದಂತೆ ಶವವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಅಲ್ಲೇ ಬಿಟ್ಟಿದ್ದಾರೆ.
ಕೊರೊನಾ ರೋಗಿಗಳ ಶವಸಂಸ್ಕಾರ ವಿಡಿಯೋ; ತನಿಖೆಗೆ ಬಳ್ಳಾರಿ ಡಿಸಿ ಆದೇಶ
ಮಳೆಯಲ್ಲಿ ಶವ ಬಿಟ್ಟ ಸಿಬ್ಬಂದಿ
ಮಳೆ ಆರಂಭವಾಗುತ್ತಿದ್ದಂತೆ ಆಸ್ಪತ್ರೆ ಆವರಣದಲ್ಲೇ ಸೋಂಕಿತನ ಮೃತದೇಹವನ್ನು ಬಿಟ್ಟು ಹೋಗಿದ್ದಾರೆ. ಪ್ರತಿನಿತ್ಯ ಈ ಆಸ್ಪತ್ರೆಗೆ ಗರ್ಭಿಣಿಯರು ಸೇರಿದಂತೆ ಅನೇಕರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಹೀಗಿದ್ದರೂ ಸಿಬ್ಬಂದಿ ಶವವನ್ನು ಅಲ್ಲೇ ಬಿಟ್ಟಿದ್ದಾರೆ. ಸಿಬ್ಬಂದಿ ಪಿಪಿಇ ಕಿಟ್ ಹಾಕಿರಲಿಲ್ಲ. ಕೆಲ ಗಂಟೆಗಳ ಬಳಿಕ ಮೃತದೇಹಕ್ಕೆ ಪಿಪಿಇ ಕಿಟ್ ಹಾಕಿ ಮುಚ್ಚಿದ್ದಾರೆ ಎಂದು ವಿಡಿಯೋ ಮಾಡಿರುವ ಆಟೋ ಚಾಲಕ ತಿಳಿಸಿದ್ದಾರೆ. ಕೊರೊನಾ ವೈರಸ್ ಪರೀಕ್ಷಾ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಸಚಿವ ಆನಂದ್ ಸಿಂಗ್ ಅವರಿಗೆ ಇದೇ ಆಟೋ ಚಾಲಕ ಮನವಿ ಮಾಡಿದ್ದಾರೆ.
ಆಟೋ ಚಾಲಕನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ, "ಆಸ್ಪತ್ರೆಯ ವೈದ್ಯರು ತುಂಬಾ ಜಾಗರೂಕತೆಯಿಂದ ಕೆಲಸ ಮಾಡಿದ್ದಾರೆ. ಕೇವಲ ಐದು ನಿಮಿಷಗಳ ಕಾಲ ಶವ ಹೊರಗೆ ಬಿಟ್ಟಿದ್ದಾರೆ. ಹೊಸಪೇಟೆ ಸರ್ಕಾರಿ ಆಸ್ಪತ್ರೆ ಫುಲ್ ಟೈಮ್ ಕೊರೊನಾ ಆಸ್ಪತ್ರೆ ಅಲ್ಲ. ಹೀಗಾಗಿ ವೈದ್ಯರು ಪಿಪಿಇ ಕಿಟ್ ಹಾಕಿಕೊಂಡಿರಲ್ಲ. ಅಷ್ಟರಲ್ಲಿ ಆಟೋ ಚಾಲಕ ಈ ವಿಡಿಯೋ ಮಾಡಿ ಕೆಟ್ಟದಾಗಿ ಬಿಂಬಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ಈ ವಿಡಿಯೋ ಮಾಡಿದ್ದಾರೆ. ಆಟೋ ಚಾಲಕನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ತಿಳಿಸಿದ್ದಾರೆ.
ವೈರಲ್ ಆಯ್ತು ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಶವಸಂಸ್ಕಾರದ ವಿಡಿಯೋ
ಸೈಕಲ್ ಮೇಲೆ ಶವ ಸಾಗಿಸಿ ಸಂಸ್ಕಾರ
ಕೊರೊನಾ ಸೋಂಕಿನಿಂದ ಸಾವಿಗೀಡಾದ ವ್ಯಕ್ತಿಯ ಮೃತದೇಹವನ್ನು ಸೈಕಲ್ ನಲ್ಲಿ ಸಾಗಿಸಿ ಸಂಸ್ಕಾರ ನಡೆಸಿದ ಸಂಗತಿಯೂ ನಿನ್ನೆ ಸಂಜೆ ನಡೆದಿದೆ. ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಬಸ್ ಡಿಪೊ ಬಳಿ ಇರುವ ಕಬರಸ್ಥಾನದಲ್ಲಿ ಹೀಗೆ ಸೈಕಲ್ ನಲ್ಲಿ ಶವವನ್ನು ಸಾಗಿಸಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಈ ಸಂಗತಿಗಳೆಲ್ಲೂ ಇಲ್ಲಿನ ಜನರಲ್ಲಿ ಆತಂಕವನ್ನು ಉಂಟು ಮಾಡುತ್ತಿವೆ.