ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ನೀರು; ಕಂಪ್ಲಿ ಸೇತುವೆ ಸಂಚಾರ ಬಂದ್
ಬಳ್ಳಾರಿ, ಸೆಪ್ಟೆಂಬರ್ 21: ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷಕ್ಕಿಂತ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕಂಪ್ಲಿ ಸೇತುವೆಯ ಮೇಲೆ ಸಂಚಾರವನ್ನು ನಿಷೇಧಿಸಲಾಗಿದೆ. ಹೀಗಾಗಿ ವಾಹನಗಳು ಬುಕ್ಕಸಾಗರ ಸೇತುವೆ ಮೂಲಕ ಸಂಚಾರ ಮಾಡಲು ಸೂಚಿಸಲಾಗಿದೆ.
ಕಂಪ್ಲಿ ಸೇತುವೆಯು ಬಳ್ಳಾರಿ-ಗಂಗಾವತಿ ಗಂಗಾವತಿ ಸಂಪರ್ಕಕ್ಕೆ ಅನುವಾಗಿದೆ. ಈಗ ಸೇತುವೆ ಮುಳುಗಡೆಯಾಗುವ ಹಂತಕ್ಕೆ ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರವನ್ನು ತಾಲೂಕು ಆಡಳಿತ ಬಂದ್ ಮಾಡಿದೆ. ಕಂಪ್ಲಿ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ, ಜನರನ್ನು ಸೇತುವೆ ಮೇಲೆ ತಿರುಗಾಡದಂತೆ ಕಟ್ಟೆಚ್ಚರ ವಹಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಪೊಲೀಸರು ಕಂಪ್ಲಿ ಸೇತುವೆ ಬಳಿ ಬ್ಯಾರಿಕೇಡ್ಗಳನ್ನು ಹಾಕಿ ವಾಹನಗಳು ಸಂಚರಿಸದಂತೆ ನೋಡಿಕೊಳ್ಳುತ್ತಿದ್ದಾರೆ.
ಬಳ್ಳಾರಿ; ತುಂಗಭದ್ರಾ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
ಬುಕ್ಕ ಸಾಗರ ಮೂಲಕ ವಾಹನ ಸಂಚಾರ
ಪರ್ಯಾಯವಾಗಿ ಬುಕ್ಕ ಸಾಗರ ಮೂಲಕ ವಾಹನಗಳ ಸಂಚಾರ ಸಾಗಿದೆ. ನದಿಯ ಹರಿವು ಹೆಚ್ಚಾಗಿದ್ದರಿಂದ ಬುಕ್ಕಸಾಗರಕ್ಕೆ ಹೊಂದಿಕೊಂಡಿರುವ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಬಾಳೆ, ಕಬ್ಬು ಹಾಗೂ ಭತ್ತದ ಬೆಳೆಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಮುಳುಗಡೆಯಾಗಿರುವ ಹಂಪಿ ಸ್ಮಾರಕಗಳು
ತುಂಗಭದ್ರಾ ಜಲಾಶಯದಿಂದ ನದಿಗೆ 1ಲಕ್ಷ 20 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡಲಾಗಿದೆ. ಹೀಗಾಗಿ ಹಂಪಿಯ ಬಹುತೇಕ ಸ್ಮಾರಕಗಳು ಈಗಾಗಲೇ ಮುಳುಗಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನದಿಪಾತ್ರದ ಜನರಿಗೆ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ. ವಿಶ್ವವಿಖ್ಯಾತ ಹಂಪಿಯ ಪುರಂದರ ದಾಸರ ಮಂಟಪ ಸಾಲಯ ಮಂಟಪ ಯಂತ್ರೋಧಾರಕ ಕೋಟಿ ಲಿಂಗ ಕರ್ಮ ಮಂಟಪ ಈಗಾಗಲೇ ಮುಳುಗಿವೆ. ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಇದ್ದು ಹಂಪಿಯ ಬಹುತೇಕ ಸ್ಮಾರಕ ಮುಳಗಡೆಯ ಭೀತಿ ಎದುರಾಗಿದೆ. ತುಂಗಭದ್ರಾ ಜಲಾಶಯದಿಂದ ಇನ್ನೂ ಹೆಚ್ಚಿನ ನೀರು ಬಿಡುಗಡೆ ಸಾಧ್ಯತೆ ಇದೆ.
ವಿಜಯಪುರದಲ್ಲೂ ಮಳೆ ಹಾವಳಿ
ವಿಜಯಪುರದ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕನ್ನೂರು 74.2, ಹೊರ್ತಿ 58.4, ಸಿಂದಗಿ 30, ಕುಮಟಗಿ 21.4, ಡವಳಗಿ 20, ಬಸವನಬಾಗೇವಾಡಿ 3.2, ಆಲಮಟ್ಟಿ 0.8, ಹೂವಿನ ಹಿಪ್ಪರಗಿ 4.6, ಅರೇಶಂಕರ 2.4, ಮಟ್ಟಿಹಾಳ 2, ವಿಜಯಪುರ4.8, ನಾಗಠಾಣ 6.1, ಭೂತನಾಳ 13.8, ಹಿಟ್ನಳ್ಳಿ 4, ತಿಕೋಟಾ 4.2 ಇಂಡಿ 17.5, ಅಗರಖೇಡ 4.3, ಹಲಸಂಗಿ 5, ಚಡಚಣ 3.4, ಝಳಕಿ 5.1, ಮುದ್ದೇಬಿಹಾಳ 49, ನಾಲತವಾಡ 19.6, ತಾಳಿಕೋಟಿ 6.5, ಆಲಮೇಲ 8.5, ಸಾಸಾಬಾಳ 3.3, ರಾಮನಗಹಳ್ಳಿ 4.8, ಕಡ್ಲೇವಾಡ 15, ದೇವರ ಹಿಪ್ಪರಗಿ 18, ಕೊಂಡಗೂಳಿ 5.5 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
ಯಾದಗಿರಿಯಲ್ಲಿ ಪ್ರವಾಹ ಭೀತಿ
ಯಾದಗಿರಿಯ ಶಹಾಪುರ ಹಾಗೂ ವಡಗೇರಾ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಭೀಮಾ ನದಿಗೆ 64 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಶಹಾಪುರದ 10 ಹಾಗೂ ವಡಗೇರಾ ತಾಲೂಕಿನ 14 ಹಳ್ಳಿಗಳು ಭೀಮಾ ನದಿ ದಂಡೆಯ ವ್ಯಾಪ್ತಿಗೆ ಬರುತ್ತವೆ. ಜನರಿಗೆ ಮುನ್ನಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.