ಸರ್ಕಾರಿ ಕಡತಗಳಲ್ಲಿ ವಿಜಯನಗರ ಜಿಲ್ಲೆ ಬಳಕೆಗೆ ಸೂಚನೆ
ಬಳ್ಳಾರಿ, ಮಾರ್ಚ್ 02; ವಿಜಯನಗರ ಜಿಲ್ಲೆಗೆ ಮೂಲ ಸೌಕರ್ಯ ಕಲ್ಪಿಸುವಿಕೆ, ಇಲಾಖೆಗಳ ಆಸ್ತಿ ಹಂಚುವಿಕೆ ಮತ್ತು ಜಿಲ್ಲಾಮಟ್ಟದ ಕಚೇರಿಗಳ ಸ್ಥಾಪನೆ ಸೇರಿದಂತೆ ಜಿಲ್ಲೆ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ನೀಲನಕ್ಷೆ ತಯಾರಿಕೆಗೆ ಅಗತ್ಯ ಮಾಹಿತಿ ನೀಡಲು ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಜಯನಗರ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಕಚೇರಿಗಳ ಕಾರ್ಯನಿರ್ವಹಣೆ ಕುರಿತ ಸಭೆ ನಡೆಯಿತು. ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆಯಲ್ಲಿ ಹೊಸದಾಗಿ ಕಚೇರಿಗಳು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ನಮೂನೆಗಳನ್ನು ಭರ್ತಿ ಮಾಡಿ ನೀಡುವಂತೆ ಸಭೆಯಲ್ಲಿ ಸೂಚನೆ ನೀಡಲಾಯಿತು.
ವಿಜಯನಗರ ಜಿಲ್ಲೆ; ಎಲ್ಲಿ ಸ್ಥಾಪನೆಯಾಗಲಿದೆ ಡಿಸಿ ಕಚೇರಿ?
ಸಭೆಯಲ್ಲಿ ಪಾಲ್ಗೊಂಡಿದ್ದ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಮಾತನಾಡಿ, "ಹೊಸ ಜಿಲ್ಲೆಯ ಕೆಲಸ ಕಾರ್ಯಗಳ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಲು ಡಿಸಿ ಕಚೇರಿಯಲ್ಲಿ ಪ್ರತ್ಯೇಕ ನಿಯಂತ್ರಣ ಕೋಶ ಸ್ಥಾಪಿಸಲಾಗುವುದು" ಎಂದು ಹೇಳಿದರು.
ನೂತನ ವಿಜಯನಗರ ಜಿಲ್ಲೆಗೆ 371ಜೆ ಸೌಲಭ್ಯ:ಆನಂದ್ ಸಿಂಗ್ ಹರ್ಷ
ವಿಜಯನಗರ ಜಿಲ್ಲೆ ಹೆಸರು ನಮೂದಿಸಿ: ವಿಜಯನಗರ ಜಿಲ್ಲೆಗಳಲ್ಲಿರುವ 6 ತಾಲೂಕುಗಳಲ್ಲಿ ಸರ್ಕಾರಿ ಸಂಬಂಧಿಸಿದ ಯಾವುದೇ ರೀತಿಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ವಿಜಯನಗರ ಜಿಲ್ಲೆ ಅಂತ ಹೆಸರನ್ನು ನಮೂದಿಸಬೇಕು ಎಂದು ಸೂಚನೆ ಕೊಡಲಾಗಿದೆ.
ವಿಜಯನಗರ ಜಿಲ್ಲೆ ರಚನೆ; ಪರ, ವಿರೋಧ ಆಕ್ಷೇಪಣೆಗಳು ಎಷ್ಟು?
ಫೆಬ್ರವರಿ 8ರಿಂದ ವಿಜಯನಗರ ಜಿಲ್ಲೆಗೂ ಬಳ್ಳಾರಿ ಜಿಲ್ಲಾಧಿಕಾರಿಗಳೇ ಪ್ರಭಾರಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು,ಅದರಂತೆ ಎಲ್ಲರೂ ಕಾರ್ಯನಿರ್ವಹಿಸಬೇಕು. ಆ ಭಾಗದ ಸರ್ಕಾರಿ ಕಡತಗಳಲ್ಲಿಯೂ ಕಡ್ಡಾಯವಾಗಿ ವಿಜಯನಗರ ಜಿಲ್ಲೆ ಅಂತ ನಮೂದು ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಕಚೇರಿಗಳನ್ನು ಆರಂಭಿಸುವ ನಿಟ್ಟಿನಲ್ಲಿ ಹೊಸಪೇಟೆಯಲ್ಲಿ ದೊಡ್ಡ ದೊಡ್ಡ ಕಾಂಪ್ಲೆಕ್ಸ್ಗಳನ್ನು ಗುರುತಿಸಿ ವರದಿ ನೀಡುವಂತೆ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಅವರು ಸಹಾಯಕ ಆಯುಕ್ತರಿಗೆ ಸೂಚಿಸಿದರು.