ಅಮೆರಿಕ, ಇರಾನ್ ಯುದ್ಧ ಸನ್ನಿವೇಶ; ರಾಜ್ಯದ ರೈತರಿಗೆ ಸಂಕಷ್ಟ
ಬಳ್ಳಾರಿ, ಜನವರಿ 14: ಇರಾನ್ ಮತ್ತು ಅಮೇರಿಕಾ ನಡುವಿನ ಯುದ್ದಕ್ಕೂ, ಗಣಿ ನಾಡು ಬಳ್ಳಾರಿಗೂ ಏನು ಸಂಭಂದ. ಇರಾನ್ ನಲ್ಲಿ ಯುದ್ದ ಆರಂಭ ಆದ್ರೆ ಇಲ್ಲಿನ ರೈತರು ಬೀದಿಗೆ ಬೀಳ್ಳುವ ಸ್ಥಿತಿ ಎದುರಾತ್ತಾ.? ಹೌದು ಹಾಗೇನಾದ್ರೂ ಆದ್ರೆ ಯುದಕ್ಕೂ ಇಲ್ಲಿನ ರೈತರಿಗೆ ಹೇಗೆ ಸಂಬಂಧ ಗೊತ್ತಾ...?
ಇರಾನ್ ಹಾಗೂ ಅಮೆರಿಕ ನಡುವಣ ಉದ್ವಿಗ್ನ ಸ್ಥಿತಿ ಭಾರತದ ಮೇಲೆ ಹಲವು ರೀತಿಯಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ. ತೈಲ ಸಂಪದ್ಭರಿತವಾದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಬಿಕ್ಕಟ್ಟು, ಭಾರತಕ್ಕೆ ಕೇವಲ ಪೆಟ್ರೋಲಿಯಂ ಉತ್ಪನ್ನಗಳು ಮಾತ್ರವಲ್ಲದೆ, ಹಲವು ವಹಿವಾಟುಗಳಿಗೂ ಹೊಡೆತ ನೀಡುತ್ತಿದೆ.
ಪೆಟ್ರೋಲಿಯಂ, ಆಟೋಮೊಬೈಲ್, ರಾಸಾಯನಿಕಗಳು, ಪೆಯಿಂಟ್, ಪ್ಲಾಸ್ಟಿಕ್, ಪ್ಯಾಕಿಂಗ್ ಸಾಮಗ್ರಿ, ದಿನ ಬಳಕೆ ವಸ್ತುಗಳೂ ಸೇರಿದಂತೆ ಹಲವು ಉದ್ಯಮಗಳು ಕಳೆದ ಹಲವು ದಿನಗಳಿಂದ ಕುಸಿತ ಕಂಡಿವೆ.
ಯುದ್ಧ ಕಾರ್ಮೋಡದಿಂದ ಅಕ್ಕಿ ರಫ್ತು ನಿಷೇಧ
ಭಾರತದಿಂದ ಬಾಸುಮತಿ ಅಕ್ಕಿಯನ್ನು ಖರೀದಿಸಿಸುವ ಪ್ರಮುಖ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇರಾನ್ಗೆ ಬಾಸುಮತಿ ಅಕ್ಕಿಯನ್ನು ರಫ್ತು ಮಾಡಲು ಸಾಧ್ಯವಿಲ್ಲ.
ಸದ್ಯದ ಪರಿಸ್ಥಿತಿಯು ತಿಳಿಯಾಗುವವರೆಗೂ ರಫ್ತು ಬೇಡಿಕೆ ಸ್ವೀಕರಿಸಬೇಡಿ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ತನ್ನ ಸದಸ್ಯರಿಗೆ ಮನವಿ ಮಾಡಿದೆ. ಇನ್ನು ಬಳ್ಳಾರಿಯ ಕಂಪ್ಲಿಯಲ್ಲಿ ಬೆಳೆಯುವ ಬಾಸುಮತಿ ಮತ್ತು ಸೋನಾ ಮಸೂರಿ ಅಕ್ಕಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇದೆ.
ಮುಂಬೈ ಮೂಲಕ ರಫ್ತಾಗುವ ಅಕ್ಕಿ
ಹೀಗಾಗಿ ಇರಾನ್ ಮತ್ತು ದುಬೈನಲ್ಲಿ ಇಲ್ಲಿ ಬೆಳೆಯುವ ಅಕ್ಕಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಪ್ರತಿ ಕೆಜಿ ಗೆ 105 ರೂಪಾಯಿ ಬೆಲೆ ಇದ್ದು, ಆದ್ರೆ ಕೇವಲ ಒಂದು ವಾರದೊಳಗೆ ಬೆಲೆಯಲ್ಲಿ ಭಾರಿ ಇಳಿಕೆ ಆಗಿದ್ದು, ಪ್ರತಿ ಕೆಜಿಗೆ 63 ರೂಪಾಯಿ ಇಳಿಕೆ ಆಗಿದೆ .
ಪ್ರತಿ ವರ್ಷ ಇಲ್ಲಿ ಬೆಳೆದ ಅಕ್ಕಿಗೆ ಒಳ್ಳೆಯ ಬೆಲೆ ಸಿಗುತಿತ್ತು. ಕಳೆದ ವರ್ಷ 68 ಮೆಟ್ರಿಕ್ ಟನ್ ಅಕ್ಕಿ ಕೇವಲ ಬಳ್ಳಾರಿಯಿಂದಲೇ ರಫ್ತಾಗಿತ್ತು. ಹೀಗಾಗಿ ಈ ಬಾರಿ ಇರಾನ್ ಗೆ ಅಕ್ಕಿ ರಫ್ತಾಗುವುದನ್ನು ಬಹುತೇಕ ನಿಲ್ಲಿಸಲಾಗಿದೆ .
ರಫ್ತು ಸ್ಥಗಿತಗೊಂಡರೆ ಅಕ್ಕಿ ದಾಸ್ತಾನು ಹೆಚ್ಚಳ
ಇನ್ನು ಇಲ್ಲಿ ಬೆಳೆದ ಅಕ್ಕಿಯನ್ನು ರೈತರು ಮುಂಬೈ ಮಾರ್ಗವಾಗಿ ದುಬೈ, ಇರಾನ್ ಗೆ ಕಳಿಸಲಾಗುತ್ತೆ. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಯಾವುದೇ ಸಾಗಾಣಿಕೆ ಪಾವತಿ ಹಲವಾರು ತಿಂಗಳುಗಳ ಕಾಲ ವಿಳಂಬವಾಗುವುದು ಖಚಿತ.
ಬಾಸುಮತಿ ಅಕ್ಕಿ ರಫ್ತು ಸ್ಥಗಿತಗೊಂಡರೆ ದೇಶದಲ್ಲಿನ ಸಂಗ್ರಹ ಹೆಚ್ಚಳಗೊಳ್ಳುವ ಆತಂಕ ರೈತರದು. ಆದ್ದರಿಂದ ಬೆಲೆ ಅಗ್ಗವಾಗಿ ಬೆಳೆಗಾರರ ಆದಾಯಕ್ಕೆ ಹೊಡೆತ ಬೀಳಲಿದೆ ಎಂಬುದು ಇಲ್ಲಿನ ರೈತರವಾದ.
ಇರಾನ್ ಅಕ್ಕಿ ಆಮದು ಮಾಡಿಕೊಳ್ಳುವ ಪ್ರಮುಖ ದೇಶ
ರಫ್ತು ರದ್ದಾಗಿರುವುದು ರೈತರನ್ನು ಚಿಂತೆಗೆ ದೂಡಿದೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಉತ್ತಮ ಇಳುವರಿ ಬಂದಿದೆ. ಜೊತೆಗೆ ಹಿಂಗಾರು ಬೆಳೆ ಕೂಡಾ ಉತ್ತಮವಾಗಿ ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ . ಕಾರಣ ತುಂಗಭದ್ರಾ ಜಲಾಶಯ ಸಂಪೂರ್ಣವಾಗಿ ತುಂಬಿದೆ.
ದೇಶದ ಬಾಸುಮತಿ ಅಕ್ಕಿಗೆ ಇರಾನ್ ಪ್ರಮುಖ ರಫ್ತು ದೇಶವಾಗಿದೆ. ಒಟ್ಟು ರಫ್ತಿನಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಇರಾನ್ ಖರೀದಿಸುತ್ತದೆ. ಆದರೆ ಈಗ ರಫ್ತಿಗೆ ತಡೆ ಬೀಳುವ ಸಾಧ್ಯತೆ ಹಿನ್ನೆಲೆ ಬಾಸುಮತಿ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ.