2016ರ ಯುಪಿಎಸ್ಸಿ ಟಾಪರ್ ಈಗ ಬಳ್ಳಾರಿ ಜಿ.ಪಂ ಸಿಇಒ ಆಗಿ ನೇಮಕ
ಬಳ್ಳಾರಿ, ಆಗಸ್ಟ್ 25: ಯುಪಿಎಸ್ಸಿ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದ ನಂದಿನಿ ಕೆ.ಆರ್ ಅವರು ಗಣಿನಾಡು ಬಳ್ಳಾರಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಯಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
Recommended Video
ಮೂಲತಃ ಕೋಲಾರ ಜಿಲ್ಲೆಯ ಕೆಂಬೋಡಿ ಗ್ರಾಮದವರಾದ ನಂದಿನಿ ಕೆ.ಆರ್ ಅವರು, 2016ರ ಬ್ಯಾಚ್ ನ ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಉತ್ತೀಣರಾಗಿ, ಇಡೀ ದೇಶದ ಗಮನ ಸೆಳೆದಿದ್ದರು.
ಕನ್ನಡ ಮಾಧ್ಯಮದಲ್ಲಿ ಓದಿದ ಕೆಆರ್ ನಂದಿನಿ ಐಎಎಸ್ ಮುಕುಟ ಮಣಿ
ಕಡು ಬಡತನದ ಹಿನ್ನೆಲೆಯಿಂದ ಬಂದ ನಂದಿನಿ ಅವರು, ಇದೀಗ ಬಳ್ಳಾರಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವುದು ಬಳ್ಳಾರಿ ಜಿಲ್ಲೆಯ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ.
ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದ ನಂದಿನಿ, ಮೂಡಬಿದರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ಹಾಗೂ ಬೆಂಗಳೂರಿನ ಎಂ.ಎಸ್ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದರು. ಕನ್ನಡ ಸಾಹಿತ್ಯವನ್ನು ಅತೀವ ಆಸಕ್ತಿಯಿಂದ ಓದುವ ಇವರಿಗೆ ವಾಲಿಬಾಲ್ ಕ್ರೀಡೆ ಅಂದರೆ ಅಚ್ಚುಮೆಚ್ಚು.
ಐಎಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿ ಆಯ್ಕೆಯಾಗಿರುವ ನಂದಿನಿ ಅವರಿಗೆ ಮುಂಚೂಣಿಯಾಗಿ ಸಿಇಒ ಹುದ್ದೆಯನ್ನು ಅಲಂಕರಿಸಲು ಬಳ್ಳಾರಿ ಜಿಲ್ಲಾ ಪಂಚಾಯಿತಿ ಒಂದು ರೀತಿ ಸ್ಪೂರ್ತಿದಾಯಕವಾಗಿದೆ.
ಈ ಹಿಂದೆ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕೆ.ನಿತೀಶ್ ಅವರು ಆಯ್ಕೆಯಾಗಿದ್ದರು. ಅವರ ಕಾರ್ಯವೈಖರಿ ಅಷ್ಟೊಂದು ಸಮಂಜಸ ಅನಿಸಿರಲಿಲ್ಲ ಎಂದು ಜಿಲ್ಲೆ ಜನರು ಮಾತು.
ನಿತೀಶ್ ಅವರ ಹಿಂದೆ ಸಿಇಒ ಆಗಿ ಕೆಲಸ ನಿರ್ವಹಿಸಿದ್ದ ಡಾ.ಕೆ.ವಿ ರಾಜೇಂದ್ರ ಅವರ ಕಾರ್ಯವೈಖರಿ ಜನಮನ್ನಣೆ ಗಳಿಸಿತ್ತು. ಇದೀಗ ನಂದಿನಿ ಅವರು ಕೂಡ ತಮ್ಮ ಕಾರ್ಯವೈಖರಿಯಿಂದ ಜನಮನ್ನಣೆ ಗಳಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.