ಬರಿಗೈಲಿ ಕೆಂಡ ತೂರುವ ಕೂಡ್ಲಿಗಿಯ 'ಗುಗ್ಗರಿ ಹಬ್ಬ' ನೋಡಿದ್ರಾ!
ಬಳ್ಳಾರಿ, ಫೆಬ್ರವರಿ 19: ಕರ್ನಾಟಕದಲ್ಲಿಯೇ ಅತಿ ವಿಶಿಷ್ಟ ಆಚರಣೆ ಆಗಿರುವ 'ಬೊಗ್ಗಲು ಓಬಳೇಶ್ವರ' ಜಾತ್ರೆ ಭಾನುವಾರ ರಾತ್ರಿ ಶ್ರದ್ಧೆ, ಭಕ್ತಿ ಮತ್ತು ವಿಜೃಂಭಣೆಯಿಂದ ನಡೆಯಿತು. ಭಕ್ತರು ನಿಗಿ ನಿಗಿ ಕೆಂಡವನ್ನು ಬರಿಗೈಯಿಂದ ಹೂ ತೂರಿದಂತೆ ತೂರಿ, ತಮ್ಮ ಭಕ್ತಿಯ ಪರಕಾಷ್ಠೆ ಮೆರೆದಿದ್ದಾರೆ.
ಕೂಡ್ಲಿಗಿ ಸಮೀಪದ ಹೊಸಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಅರ್ಧ ಗಂಟೆ ಕಾಲ ಭಕ್ತರು ನಿಗಿನಿಗಿ ಕೆಂಡವನ್ನು ತೂರಿದರು. ಪ್ರತಿ 3 ವರ್ಷಗಳಿಗೆ ಒಮ್ಮೆ ಈ ವಿಶಿಷ್ಟ ಜಾತ್ರೆ ನಡೆಯುತ್ತದೆ. ಕಗ್ಗತ್ತಲಲ್ಲಿ ಕೆಂಡವನ್ನು ಗಾಳಿಯಲ್ಲಿ ತೂರುವ ದೃಶ್ಯ, ಕೆಂಡದ ಮಳೆಯೇನೋ ಎಂಬಂತೆ ಭಾಸವಾಗುತ್ತದೆ.
ಮೌಢ್ಯ ನಿಷೇಧ ಕಾಯ್ದೆ ಸದನದಲ್ಲಿ ಮಂಡನೆ, ಮುಖ್ಯಾಂಶಗಳು
ಹುರಿಮೆಯ ನೀನಾದದ ಮಧ್ಯೆ ಭಕ್ತರು ಭಾವಾವೇಶದಿಂದ ಕೆಂಡ ತೂರಾಡಿದರು. ಹೊಸಹಟ್ಟಿ ಗ್ರಾಮದ ಆರಾಧ್ಯ ದೈವ ಬೊಗ್ಗುಲು ಓಬಳೇಶ್ವರ ಸ್ವಾಮಿ. ಸ್ಥಳೀಯರು ಈ ಹಬ್ಬವನ್ನು, ಜಾತ್ರೆಯನ್ನು 'ಗುಗ್ಗರಿ ಹಬ್ಬ' ಎಂದೂ ಕರೆಯುತ್ತಾರೆ. ವಾಲ್ಮೀಕಿ ಜನಾಂಗದವರೇ ಹೆಚ್ಚಾಗಿರುವ ಈ ಗ್ರಾಮದಲ್ಲಿ 'ಬೇಡ ಸಂಸ್ಕೃತಿ'ಯ ಆಚರಣೆ ಇಂದಿಗೂ ಉಳಿದುಕೊಂಡಿದೆ.
ಕೆಂಡಕ್ಕಾಗಿಯೇ ರಾಶಿ ರಾಶಿ ಕಟ್ಟಿಗೆ
ಜಾತ್ರೆಗೂ ಮೊದಲು 8 ದಿನಗಳವರೆಗೆ ಕಾಸು ಮೀಸಲು, ಗಂಗೆಪೂಜೆ ಸೇರಿ ಹತ್ತು ಹಲವಾರು ವ್ರತ, ನಿಯಮಗಳು ಸಾಂಪ್ರದಾಯಿಕವಾಗಿ ನಡೆಯುತ್ತವೆ. ಇವುಗಳನ್ನು ಪಾಲಿಸದ್ದಿದಲ್ಲಿ ಕೆಡುಕಾಗುತ್ತದೆ ಎಂಬ ನಂಬಿಕೆಯೂ ಇಲ್ಲಿ ಜಾರಿಯಲ್ಲಿದೆ. ಶಿವರಾತ್ರಿ ಅಮಾವಾಸ್ಯೆಗೆ ಮುಂಚೆ ನಡೆಯುವ ಈ ಗುಗ್ಗರಿ ಹಬ್ಬದ ಜಾತ್ರೆಯಲ್ಲಿ ರಾತ್ರಿಯ ಕೆಂಡ ತೂರುವುದಕ್ಕಾಗಿಯೇ ರಾಶಿ ರಾಶಿ ಕಟ್ಟಿಗೆಯನ್ನು ಕೂಡಿಹಾಕಿ, ಕಿಡಿ ಹಚ್ಚಿ ಕೆಂಡ ಮಾಡಲಾಗುತ್ತದೆ.
ಬೊಗಸೆಯಲ್ಲಿ ಕೆಂಡ ತೂರುವ ಜನರು
ಓಬಳೇಶ್ವರ ಸ್ವಾಮಿಯ ಪೂಜಾರಿ ಅಗ್ನಿ ಕುಂಡದ ಸ್ವಲ್ಪ ಭಾಗವನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿ ದೇವಸ್ಥಾನದ ಒಳಗಿಡುತ್ತಾರೆ. ನಂತರ ಕೆಂಡ ತೂರುವ ಹರಕೆ ಹೊತ್ತು, ಉಪವಾಸವಿರುವರು 25-30 ಜನ ಭಕ್ತರು ಗಂಗೆ ಪೂಜೆ ನೆರವೇರಿಸಿ ಬಂದು ಕೆಂಡವನ್ನು ಬೊಗಸೆಯಲ್ಲಿ ತೆಗೆದುಕೊಂಡು ಒಬ್ಬರ ಮೇಲೊಬ್ಬರು ತೂರಾಡತೊಡಗುತ್ತಾರೆ. ಇಷ್ಟೆಲ್ಲ ಕೆಂಡ ತೂರಿದರೂ ಯಾರಿಗೂ ಸುಟ್ಟ ಗಾಯಗಳಾಗುವುದಿಲ್ಲ. ಯಾರೊಬ್ಬರಿಗೂ ಬೆಂಕಿಯ ಸುಟ್ಟಗಾಯಗಳು ಆಗದೇ ಇರುವುದು ಆರಾಧ್ಯದೈವದ ಪವಾಡ ಎನ್ನುತ್ತಾರೆ ಇಲ್ಲಿಯ ಭಕ್ತಾದಿಗಳು.
ಇದ್ದಿಲು ಹೊತ್ತು ಉರಿಯುತ್ತಿತ್ತು
'ಬೊಗ್ಗುಲು' ಎಂದರೆ ತೆಲುಗಿನಲ್ಲಿ ಇದ್ದಿಲು. ಬೆಂಕಿಯ ಕೆಂಡಗಳಿಂದ ಆಗುವ ಇದ್ದಿಲು. ಸ್ಥಳೀಯ ಪೂಜಾರಿ ಮನೆತನದವರು ಕಾಡಿನಲ್ಲಿ ಕಟ್ಟಿಗೆ ಕಡಿದು, ರಾತ್ರಿ ಸುಟ್ಟು ಬರುತ್ತಿದ್ದರು. ಬೆಳಗಿನಲ್ಲಿ ಇದ್ದಿಲುಗಳನ್ನು ಒಯ್ದು ಮಾರುತ್ತಿದ್ದರು. ಇದು ಇದ್ದಿಲು ಮಾರುವವರ ವೃತ್ತಿ. ಒಮ್ಮೆ, ಬೆಳಗ್ಗೆ ಇದ್ದಿಲು ತರಲು ಕಾಡಿಗೆ ಹೋದಾಗ, ಇದ್ದಿಲಿನ ರಾಶಿಗೇ ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು.
ದೇವರು ಪ್ರತ್ಯಕ್ಷ ಆಗಿದ್ದು ಇಲ್ಲೇ
ತಮ್ಮ ದೇವರು ಇಲ್ಲಿಯೇ ಪ್ರತ್ಯಕ್ಷವಾಗಿದ್ದಾನೆಂಬ ನಂಬಿಕೆಯಿಂದ ಭಕ್ತರು ಕೆಂಡ ತೂರುವ ಸೇವೆಯನ್ನು ಆರಂಭಿಸಿದರು ಎಂದು ಪೂಜಾರಿ ಮನೆತನದ ಚಿನ್ನಪಲ್ಲಿ ಓಬಯ್ಯ, ಪಾಲಯ್ಯ ತಿಳಿಸುತ್ತಾರೆ. ಕುರಿಹಟ್ಟಿ, ಕರಡಿಹಳ್ಳಿ, ಹುಲಿಕುಂಟೆ, ಭೀಮಸಮುದ್ರ, ಮಡಕಲಕಟ್ಟೆ, ಓಬಳಶೆಟ್ಟಿಹಳ್ಳಿ ಗ್ರಾಮಗಳ ಸಾವಿರಾರು ಭಕ್ತರು ಈ ಗುಗ್ಗರಿ ಹಬ್ಬದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.