ಹಂಪೆಯ ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು
ಬಳ್ಳಾರಿ, ಮೇ. 23 : ಆಂಧ್ರದ ಕಡಪ ಜಿಲ್ಲೆಯ ಪೊದ್ದಟೂರು ಗ್ರಾಮದಿಂದ ಹತ್ತು ದಿನಗಳ ಕಾಲ ಧಾರ್ಮಿಕ ಪ್ರವಾಸಕ್ಕೆ ಬಂದಿದ್ದ ಇಬ್ಬರು ಯುವಕರು ಹಂಪೆಯ ತುಂಗಭದ್ರಾ ನದಿಯಲ್ಲಿ ಬುಧವಾರ ಸ್ನಾನ ಮಾಡುವಾಗ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ವಸಂತಕುಮಾರ್ (16), ವಿನಯ್ ಕುಮಾರ್ (21) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮುಳುಗುತ್ತಿರುವಾಗ ಅವರನ್ನು ರಕ್ಷಿಸಲು ಓರ್ವ ಯತ್ನಿಸಿದರೂ ವಿಫಲವಾಗಿಲ್ಲ. ಆದರೆ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊದ್ದಟೂರು ಗ್ರಾಮಸ್ಥರು ಒಟ್ಟಾಗಿ ಬೇಸಿಗೆಯನ್ನು ಕಳೆಯಲಿಕ್ಕಾಗಿ 10 ದಿನಗಳ ಕಾಲ ಧಾರ್ಮಿಕ ಕ್ಷೇತ್ರಗಳ ಭೇಟಿಯ ಪ್ರವಾಸವನ್ನು ಮೂರು ದಿನಗಳ ಹಿಂದೆಯೇ ಪ್ರಾರಂಭಿಸಿದ್ದರು. ಮಂಗಳವಾರ ರಾತ್ರಿ ಹಂಪೆಯಲ್ಲಿ ತಂಗಿದ್ದ ಪ್ರವಾಸಿಗರು, ಬುಧವಾರ ಬೆಳಗ್ಗೆ ಸ್ನಾನಕ್ಕಾಗಿ ತುಂಗಭದ್ರಾ ನದಿಗೆ ತೆರಳಿದ್ದರು.
ಸ್ನಾನ ಮಾಡುವಾಗ ಯುವಕರಿಬ್ಬರು ನೀರಿನ ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮೃತ ಯುವಕರ ತಾಯಂದಿರು, ಸಹೋದರರು, ಸಂಬಂಧಿಗಳು ಎಲ್ಲರೂ ಈ ಪ್ರವಾಸದಲ್ಲಿದ್ದಾರೆ.
ಹಂಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶವಗಳನ್ನು ಹುಡುಕುವಲ್ಲಿ ನಿರತರಾಗಿದ್ದಾರೆ. ಮುಳುಗು ತಜ್ಞರನ್ನು ಕರೆಸಿ, ಸ್ಥಳೀಯ ಈಜುಪಟುಗಳ ನೆರವಿನಲ್ಲಿ ಶವಗಳನ್ನು ಹುಡುಕುತ್ತಿದ್ದಾರೆ.