ಬಳ್ಳಾರಿಯಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು
ಬಳ್ಳಾರಿ, ಅಕ್ಟೋಬರ್ 20: ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ಇಂದು ನಡೆದಿದೆ.
ಬೈರಾಪೂರ ಗ್ರಾಮದ ಕವಿತಾ ಮತ್ತು ಗಂಗಮ್ಮ ಘಟನೆಯಲ್ಲಿ ಮೃತಪಟ್ಟವರು. ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬೈರಾಪುರ ಗ್ರಾಮದ ಹೊರವಲಯದಲ್ಲಿರುವ ಹೊಲದಲ್ಲಿ ಈ ಇಬ್ಬರು ಮಹಿಳೆಯರು ಕೆಲಸ ಮಾಡುತ್ತಿದ್ದರು. ಇಂದು ಮಧ್ಯಾಹ್ನದ ವೇಳೆಗೆ ಮಳೆ ಆರಂಭವಾಗಿ ಬಿರುಸು ಪಡೆದುಕೊಂಡಿದೆ. ಈ ಸಮಯದಲ್ಲಿ ಸಿಡಿಲು ಬಡಿದು ಇಬ್ಬರೂ ಮೃತಪಟ್ಟಿದ್ದಾರೆ.
ಕೊಪ್ಪಳದಲ್ಲಿ ಸಿಡಿಲು ಬಡಿದು ಓರ್ವ ಬಾಲಕಿ ಸಾವು: ಕೊಪ್ಪಳ ಜಿಲ್ಲೆಯಲ್ಲಿಯೂ ಇಂದು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಓರ್ವ ಬಾಲಕಿ ಹಾಗೂ 2 ಕುರಿಗಳು ಸಾವನ್ನಪ್ಪಿವೆ. ಯಲಬುರ್ಗಾ ತಾಲೂಕಿನ ಗೆದಗೇರಿ ತಾಂಡಾದಲ್ಲಿಂದು ಮಧ್ಯಾಹ್ನ ಸಿಡಿಲು ಬಡಿದು ರೂಪಾ ಚವ್ಹಾಣ (14) ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಜಮೀನಿನಲ್ಲಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದು, ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಯಲಬುರ್ಗಾ ತಾಲೂಕಿನ ಸಾಲಭಾವಿ ಗ್ರಾಮದಲ್ಲಿ ಸಿಡಿಲಿಗೆ ಎರಡು ಕುರಿಗಳು ಬಲಿಯಾಗಿವೆ.