ಸಂಡೂರಿನಲ್ಲಿ ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿ ಸೀಜ್; ಕಾರಣ ಏನು?
ಬಳ್ಳಾರಿ, ಮಾರ್ಚ್ 3: ಹೆಚ್ಚಿನ ಪ್ರಮಾಣದ ಹೊಗೆ ಸೂಸುತ್ತಾ, ದೂಳಿನಿಂದಾಗಿ ಪರಿಸರ ಹಾಳು ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸುಲ್ತಾನಪುರ ಗ್ರಾಮದ ಸಮೀಪದ ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗಮುದ್ರೆ ಜಡಿಯಲಾಗಿದೆ.
ಸುಲ್ತಾನಪುರ ಗ್ರಾಮದ ಯುವಕ ಕೆ.ಎಸ್.ಜಂಬಯ್ಯ ಎಂಬುವರು ನೀಡಿದ್ದ ದೂರಿನ ಮೇರೆಗೆ ಆ ಗ್ರಾಮದ ಹೊರವಲಯದಲ್ಲಿದ್ದ ಪದ್ಮಾವತಿ ಸ್ಪಾಂಜ್ ಐರನ್ ಮತ್ತು ಜೆಎಸ್ ಡಬ್ಲ್ಯು ಪ್ರಾಜೆಕ್ಟ್ ಫ್ಯಾಕ್ಟರಿಗಳಿಗೆ ಸಂಡೂರು ತಹಶೀಲ್ದಾರ್ ಎಚ್.ಜೆ.ರಶ್ಮಿ ನೇತೃತ್ವದ ತಂಡ ಪರಿಶೀಲನೆ ನಡೆಸಿ ಬೀಗ ಜಡಿದಿದೆ. ಪರಿಶೀಲನೆಯಲ್ಲಿ ಈ ಫ್ಯಾಕ್ಟರಿಗಳಿಂದ ಪರಿಸರ ಮಾಲಿನ್ಯ ಉಂಟಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದ ಕಾರಣ ಬೀಗಮುದ್ರೆ ಹಾಕಲಾಗಿದೆ.
ಹುಳು ಹಿಡಿದ ಅಕ್ಕಿ, ಬೇಳೆಯಲ್ಲೇ ಬಿಸಿಯೂಟ; ಶಾಲೆಗೆ ಬೀಗ ಜಡಿದ ಬಗ್ಗನಾಡು ಗ್ರಾಮಸ್ಥರು
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಸೂಚನೆ ಮೇರೆಗೆ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಹಾಗೂ ಸಂಡೂರು ತಹಶೀಲ್ದಾರ್ ರಶ್ಮಿ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ, ಫ್ಯಾಕ್ಟರಿಗಳನ್ನು ಸೀಜ್ ಮಾಡಲು ಮುಂದಾಗಿರುವುದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆಯೂ ಸರ್ಕಾರ ಈ ಮಾಲಿನ್ಯಕಾರಕ ಕಾರ್ಖಾನೆಗಳನ್ನು ತೆರೆಯಲು ಅವಕಾಶ ಕೊಡಬಾರದು. ಈಗಾಗಲೇ ಈ ಕಾರ್ಖಾನೆಗಳಿಂದ ಇಲ್ಲಿನ ಪರಿಸರ, ಬೆಳೆಗಳು, ಜನರ ಆರೋಗ್ಯದ ಮೇಲೆ ಉಂಟಾಗಿರುವ ದುಷ್ಪರಿಣಾಮಗಳ ಬಗ್ಗೆ ಪರಿಶೀಲಿಸಲು ಸರ್ಕಾರ ಕೂಡಲೇ ತಜ್ಞರ ತಂಡ ರಚಿಸಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಲ್ತಾನಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.