ಬಳ್ಳಾರಿಯಲ್ಲಿ ಧಾರಾಕಾರ ಮಳೆ: ಜೀವಕಳೆ ಪಡೆದ 'ಮಾನಸ ಸರೋವರ'
ಬಳ್ಳಾರಿ, ಸೆಪ್ಟೆಂಬರ್ 13: ಬಳ್ಳಾರಿಯಲ್ಲಿ ಕಳೆದ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಬಿಟ್ಟುಬಿಡದೇ ಸುರಿಯುತ್ತಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ಮಳೆಯಿಂದಾಗಿ ಮಾನಸ ಸರೋವರ ಮತ್ತೆ ಜೀವಕಳೆ ಪಡೆದಿದೆ.
ಬರೋಬ್ಬರಿ ಒಂದು ದಶಕದ ಬಳಿಕ ಸಂಡೂರಿನ ನಾರಿಹಳ್ಳ ಜಲಾಶಯ ಭರ್ತಿಯಾಗಿದ್ದರಿಂದ, ಉತ್ತರ ಕರ್ನಾಟಕದ ಮಲೆನಾಡು ಅಂತಲೇ ಖ್ಯಾತಿ ಪಡೆದಿರುವ ಸಂಡೂರಿನ ಸೊಬಗು ಇಮ್ಮಡಿಯಾಗಿದೆ.
ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಎರಡು ದಿನ ಆರೆಂಜ್ ಅಲರ್ಟ್
ಗಿರಿಶೃಂಗಗಳ ಮಧ್ಯದಲ್ಲಿ ತುಂಬಿಕೊಂಡಿರುವ ನಾರಿಹಳ್ಳದ ದೃಶ್ಯ ಮನಮೋಹಕವಾಗಿದ್ದು, ಮಳೆಗೆ ಮೈದುಂಬಿ ಹರಿಯುತ್ತಿರುವ ನಾರಿಹಳ್ಳವನ್ನು ಕಂಡು ಸಂಡೂರಿನ ಜನ ಹರ್ಷಚಿತ್ತರಾಗಿದ್ದಾರೆ.
ತಡರಾತ್ರಿಯಿಂದಲೇ ಬಿಟ್ಟುಬಿಡದೇ ಸುರಿದ ಮಳೆಯಿಂದಾಗಿ ಬಳ್ಳಾರಿಯ ಕುಡಿತಿನಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಕ್ಲಿಯರ್ ಗಾಗಿ ಪಿಎಸ್ಐ ಮಹಮ್ಮದ್ ರಫೀ ನೇತೃತ್ವದ ತಂಡ ರಸ್ತೆಗಿಳಿದಿದೆ.
ಗಣಿ ಜಿಲ್ಲಾದ್ಯಂತ ವರಣು ಅರ್ಭಟ ಜೋರಾಗಿದ್ದು, ಇದರಿಂದ ವಾಹನ ಸಂಚಾರಕ್ಕೂ ಅಡ್ಡಿಯುಂಟು ಮಾಡಿದ್ದಲ್ಲದೇ, ಜನಜೀವನವೂ ಅಸ್ತವ್ಯಸ್ತಗೊಂಡಿದೆ. ನಿನ್ನೆ ಸಂಜೆಯೊತ್ತಿಗೆ ಆರಂಭವಾದ ಈ ಮಳೆಯು ಭಾನುವಾರ ಬೆಳಿಗ್ಗೆಯೂ ಕೂಡ ಮುಂದುವರಿದಿದೆ.
ಜಿಲ್ಲೆಯ ಸಂಡೂರು-ಹೊಸಪೇಟೆ ಸೇರಿದಂತೆ ನಾನಾ ಭಾಗಗಳಲ್ಲಿನ ಗುಡ್ಡಗಾಡು ಪ್ರದೇಶಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ತನ್ನ ಸೌಂದರ್ಯವನ್ನು ಹೊರಸೂಸುತ್ತಿವೆ. ಅವುಗಳ ಇದೀಗ ನೋಡುಗರ ವಿಶೇಷ ಗಮನ ಸೆಳೆಯುತ್ತಿವೆ.