ಬಳ್ಳಾರಿ ಅಪಘಾತ ಪ್ರಕರಣ; ತನಿಖೆಗೆ ಮೂರು ತಂಡ ರಚನೆ
ಬಳ್ಳಾರಿ, ಫೆಬ್ರವರಿ 14: ಫೆಬ್ರವರಿ 10ರಂದು ಬಳ್ಳಾರಿಯ ಹೊಸಪೇಟೆಯ ಹೊರವಲಯದಲ್ಲಿರುವ ಮರಿಯಮ್ಮನಹಳ್ಳಿ ಬಳಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಸೋಮವಾರ ನಡೆದ ಅಪಘಾತ ಪ್ರಕರಣ ಎರಡು ದಿನಗಳ ನಂತರ ಭಾರೀ ಚರ್ಚೆಗೆ ಒಳಗಾಗಿತ್ತು. ಕಂದಾಯ ಸಚಿವ ಆರ್ ಅಶೋಕ್ ಮಗ ಅಪಘಾತವಾದ ಆ ಕಾರಿನಲ್ಲಿದ್ದರು, ಅಪಘಾತವಾಗುತ್ತಿದ್ದಂತೆ ಅವರನ್ನು ಬೇರೆ ಕಾರಿನಲ್ಲಿ ಕಳುಹಿಸಿ ಪ್ರಕರಣದಿಂದ ತಪ್ಪಿಸಿಕೊಳ್ಳುವಂತೆ ಮಾಡಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿದ್ದವು.
ಅಪಘಾತವಾದ ಕಾರಿನಲ್ಲಿದ್ದರೇ ಆರ್.ಅಶೋಕ್ ಪುತ್ರ? ಉತ್ತರ ಸಿಗದ ಪ್ರಶ್ನೆಗಳು
ಇದಕ್ಕೆ ಸಂಬಂಧಿಸಿದಂತೆ ನಿನ್ನೆ ಜಿಲ್ಲಾ ಎಸ್ಪಿ ಸಿ.ಕೆ ಬಾಬಾ ಹೇಳಿಕೆ ನೀಡಿದ್ದರು. "ರಾಹುಲ್ ಎಂಬ ಯುವಕ ಕಾರು ಚಾಲನೆ ಮಾಡುತ್ತಿದ್ದ. ಈ ಕಾರಿನಲ್ಲಿ ಸಚಿವ ಆರ್ ಅಶೋಕ ಅವರ ಪುತ್ರ ಇರಲಿಲ್ಲ. ಯಾವುದೇ ಕಾರಣಕ್ಕೂ ನಾವು ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಮಾಡಿಲ್ಲ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ, ಕಾರಿನಲ್ಲಿ ಐವರಿದ್ದು, ಅವರ ಪೈಕಿ ಓರ್ವ ಮೃತಪಟ್ಟಿದ್ದಾನೆ" ಎಂದಿದ್ದರು.
ಬಳ್ಳಾರಿಯಲ್ಲಿ ಕಾರು ಅಪಘಾತ; "ಪ್ರಕರಣ ಮುಚ್ಚಿಹಾಕಲು ಬಿಡುವುದಿಲ್ಲ" ಎಂದ ರವಿ ನಾಯ್ಕ್ ಅಜ್ಜಿ
ಇದೀಗ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತನಿಖಾ ತಂಡಗಳನ್ನು ರಚಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಅಪಘಾತವಾದ ಕಾರಿನ ಚಲನವಲನ ಗಮನಿಸಲು ಸಮೀಪದ ಟೋಲ್ ಗಳನ್ನು ಪರಿಶೀಲಿಸಲಾಗುವುದು. ಜೊತೆಗೆ ಆ ಕಾರಿನ ಅಪಘಾತದಲ್ಲಿ ಬದುಕುಳಿದವರ ಮಾಹಿತಿ ಕಲೆ ಹಾಕಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರಿನಿಂದ ಅವರು ಯಾಕೆ ಇಲ್ಲಿಗೆ ಬಂದಿದ್ದರು, ಅಪಘಾತ ಹೇಗೆ ಸಂಭವಿಸಿತು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.