ಟಪಾಲ್ ಗಣೇಶ್ ಹತ್ಯೆಗೆ ಸುಪಾರಿ, ಪೊಲೀಸ್ ರಕ್ಷಣೆಗೆ ಮನವಿ
ಬಳ್ಳಾರಿ, ಅ.22 : ಗಣಿ ಉದ್ಯಮಿ ಟಪಾಲ್ ಗಣೇಶ್ ಪೊಲೀಸ್ ಭದ್ರತೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 'ತಮ್ಮನ್ನು ಹತ್ಯೆ ಮಾಡಲು ಕಂಪ್ಲಿ ಶಾಸಕ ಸುರೇಶ್ ಬಾಬು ಸುಪಾರಿ ಕೊಟ್ಟಿದ್ದಾರೆ' ಎಂದು ಅವರು ಆರೋಪಿಸಿದರು.
ಮಂಗಳವಾರ ಟಪಾಲ್ ಗಣೇಶ್ ಬಳ್ಳಾರಿ ಎಸ್ಪಿ ಆರ್.ಚೇತನ್ ಅವರಿಗೆ ತಮಗೆ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಹತ್ತು ದಿನದಲ್ಲಿ ನನ್ನ ಮೇಲೆ ಹಲ್ಲೆ ನಡೆಯಬಹುದು ಅಥವ ಹತ್ಯೆ ಯತ್ನ ನಡೆಯಬಹುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗಾಲಿ ರೆಡ್ಡಿ ಬದ್ಧವೈರಿ ಟಪಾಲ್ ಗಣೇಶ್ ಈಗ 'ಆಮ್ ಆದ್ಮಿ'
'ಕಂಪ್ಲಿ ಕೇತ್ರದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕ ಸುರೇಶ್ ಬಾಬು ತಮ್ಮ ಹತ್ಯೆಗೆ ಸುಪಾರಿ ಕೊಟ್ಟಿದ್ದಾರೆ. ಸೋಮವಾರ ರಾತ್ರಿ ಈ ಕುರಿತು ನನಗೆ ಆಪ್ತರೊಬ್ಬರು ಕರೆ ಮಾಡಿ ಹೇಳಿದ್ದಾರೆ. ಹತ್ತು ದಿನ ಮನೆಯಿಂದ ಹೊರಹೋಗದಂತೆ ಸಲಹೆ ಕೊಟ್ಟಿದ್ದಾರೆ' ಎಂದು ಟಪಾಲ್ ಗಣೇಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
'2009ರಲ್ಲಿಯೂ ನನಗೆ ಈ ತರಹದ ದೂರವಾಣಿ ಕರೆ ಬಂದಿತ್ತು, ಮರುದಿನ ನನ್ನ ಮೇಲೆ ಹಲ್ಲೆ ನಡೆದಿತ್ತು. ಸೋಮವಾರ ರಾತ್ರಿಯೂ ಕರೆ ಬಂದಿದೆ. ಆದ್ದರಿಂದ, ರಕ್ಷಣೆಗಾಗಿ ಮನವಿ ಮಾಡಿದ್ದೇನೆ' ಎಂದು ಟಪಾಲ್ ಗಣೇಶ್ ಹೇಳಿದರು.
ರೆಡ್ಡಿ ನೈಜ ಬಣ್ಣ ಬಯಲು ಮಾಡಲಿರುವ ಟಪಾಲ್ !