ಈ ಬಾರಿ ಸರಳ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ
ಬಳ್ಳಾರಿ, ಅಕ್ಟೋಬರ್ 23: ಕೋವಿಡ್-19 ಹಾಗೂ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಅ.31 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ನ.1 ರಂದು ಸಾಂಕೇತಿಕವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುವುದು ಎಂದು ಹೊಸಪೇಟೆ ತಹಶೀಲ್ದಾರ್ ಎಚ್.ವಿಶ್ವನಾಥ್ ಹೇಳಿದರು.
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಆಚರಣೆಯ ಸಲುವಾಗಿ ಶುಕ್ರವಾರದಂದು ತಾಲೂಕು ಕಚೇರಿ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಬಳ್ಳಾರಿಯಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು
ರಾಜ್ಯದಲ್ಲಿ ಇರುವ ಕೋವಿಡ್-19 ಸಾಂಕ್ರಾಮಿಕ ಹರಡುವಿಕೆ ಹಾಗೂ ಚುನಾವಣೆ ನೀತಿ ಸಂಹಿತೆ ನ.05 ರವರೆಗೂ ಜಾರಿಯಲ್ಲಿರುವ ಕಾರಣದಿಂದ ಗೌರವ ಪೂರ್ವಕವಾಗಿ ಆಚರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಕಡ್ಡಾಯ ಮಾಸ್ಕ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
ನಾಲ್ಕು ವರ್ಷಗಳಿಂದ ಆಚರಿಸುತ್ತಿರುವ ವಾಲ್ಮೀಕಿ ಜಯಂತಿಯು ಏನಾದರೊಂದು ಕಾರಣಗಳಿಂದ ಸರಳವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಕೋವಿಡ್-19 ಹಾಗೂ ಚುನಾವಣಾ ನೀತಿ ಸಂಹಿತೆ ಕಾರಣ ಸರಳವಾಗಿ ಆಚರಿಸಲಾಗುವುದು. ಕೋವಿಡ್ ಸಾಂಕ್ರಾಮಿಕದಿಂದ ಕ್ರಮೇಣವಾಗಿ ಸಾಧಾರಣ ಜೀವನ ಶೈಲಿಗೆ ಮರಳುತ್ತಿದ್ದೇವೆ ಎಂದು ತಿಳಿಸಿದರು.
ನ.1 ರಂದು ತಾಲೂಕು ಕಚೇರಿ ಆವರಣದಲ್ಲಿ ಸಹಾಯಕ ಆಯುಕ್ತರಿಂದ ಬೆಳಿಗ್ಗೆ 09 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು 50 ಜನರ ಸಮ್ಮುಖದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುವುದು. ನಂತರ ಕನ್ನಡ ನಾಡು ನುಡಿ ಕುರಿತುಂತೆ ವಿಶೇಷ ಉಪನ್ಯಾಸ ನೀಡುವ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸುವ ಕುರಿತಂತೆ ಮಾಹಿತಿ ಹಾಗೂ ಸಲಹೆ ಪಡೆದರು.
ಪ್ರತಿವರ್ಷ ಹಂಪಿಯಿಂದ ವಿಕಾಸ ಯುವಕರ ಮಂಡಳಿ ಹಾಗೂ ಸ್ಪೂರ್ತಿ ವೇದಿಕೆಯಿಂದ ಕನ್ನಡ ಜ್ಯೋತಿಯನ್ನು ತರಲಾಗುತ್ತಿತ್ತು. ಕೊರೊನಾ ಹಿನ್ನಲೆಯಲ್ಲಿ ಈ ಬಾರಿ ವಡಕರಾಯನ ದೇವಸ್ಥಾನದಿಂದ ತಾಲೂಕು ಕಚೇರಿಯವರೆಗೆ ಕನ್ನಡ ಜ್ಯೋತಿಯನ್ನು 10 ಜನರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ತರಲು ವಿಕಾಸ ಯುವಕ ಮಂಡಳಿ ಹಾಗೂ ಸ್ಪೂರ್ತಿ ವೇದಿಕೆಯ ಸದಸ್ಯರಿಗೆ ಸೂಚಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುನಂದಾ, ಕಳೆದ ಬಾರಿ ವಿಜೃಂಭಣೆಯಿಂದ, ಹುಮ್ಮಸ್ಸಿನಿಂದ ಕಾರ್ಯಕ್ರಮಗಳನ್ನು ಆಚರಣೆ ಮಾಡುತ್ತಿದ್ದೆವು, ಈ ಬಾರಿ ಸರಳತೆಯಿಂದ, ಸುರಕ್ಷಿತವಾಗಿ ಆಚರಿಸಬೇಕಾಗಿದೆ ಎಂದು ಮನವಿ ಮಾಡಿದರು.
ವಾಲ್ಮೀಕಿ ಸಮುದಾಯದ ಮುಖಂಡರಾದ ಗುಜ್ಜಲ ಶಿವರಾಮಪ್ಪ ಮಾತನಾಡಿ, ವಾಲ್ಮೀಕಿ ಜಯಂತಿಗೆ 4 ವರ್ಷದಿಂದಲೂ ಅಡಚಣೆ ಬರುತ್ತಲಿದೆ. ಈ ಬಾರಿ ಸಮುದಾಯದವರು ಸರ್ಕಾರದ ಸೂಚನೆಯಂತೆ ಸರಳವಾಗಿ ಪೂಜೆ ನೆರವೇರಿಸಿ, ಜನವರಿಯಲ್ಲಿ ಅದ್ಧೂರಿಯಾಗಿ ಹಲವು ಶಾಸಕರನ್ನು ಆಹ್ವಾನಿಸಿ ಆಚರಿಸಲಾಗುತ್ತದೆ ಎಂದರು.
Recommended Video
ಈ ಸಂದರ್ಭದಲ್ಲಿ ಹೊಸಪೇಟೆ ನಗರಸಭೆ ಪೌರಾಯುಕ್ತೆ ಜಯಲಕ್ಷ್ಮೀ, ತಾಲೂಕು ಪಂಚಾಯತಿ ಇಒ ಆರ್.ಕೆ.ಶ್ರೀಕುಮಾರ್, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ವಸಂತ್ ಕುಮಾರ್, ಸಿಪಿಐ ಶ್ರೀನಿವಾಸ ಮೇಟಿ, ವಿವಿಧ ಇಲಾಖೆಯ ಅಧಿಕಾರಿಗಳು, ವಾಲ್ಮೀಕಿ ಸಮುದಾಯದ ಮುಖಂಡರು ಸೇರಿದಂತೆ ಕನ್ನಡ ಪರ ಹೋರಾಟ ಸಮಿತಿಗಳ ಮುಖಂಡರು ಇದ್ದರು.