ಬಳ್ಳಾರಿಯಲ್ಲಿ ಒಂದೂವರೆ ಎಕರೆ ಈರುಳ್ಳಿ ಕಟಾವು ಮಾಡಿ ಕದ್ದೊಯ್ದ ಖದೀಮರು!
ಬಳ್ಳಾರಿ, ಏಪ್ರಿಲ್ 09: ಬಳ್ಳಾರಿಯಲ್ಲಿ ಲಾಕ್ ಡೌನ್ ನಡುವೆ, ಈರುಳ್ಳಿಯನ್ನು ರಾತ್ರೋರಾತ್ರಿ ಕಟಾವು ಮಾಡಿ ಕದ್ದೊಯ್ದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಯರ್ರಂಗಳಿ ಗ್ರಾಮ ಹೊರವಲಯದ ಒಂದೂವರೆ ಎಕರೆಯಲಿ ಬೆಳೆದ ಈರುಳ್ಳಿಯನ್ನು ಕಳ್ಳರು ಕಟಾವು ಮಾಡಿಕೊಂಡು ಕದ್ದೊಯ್ದಿದ್ದಾರೆ.
ಯರ್ರಂಗಳಿ ಗ್ರಾಮದ ಸುನೀಲಕುಮಾರ ಎಂಬ ರೈತನಿಗೆ ಈ ಹೊಲ ಸೇರಿದ್ದು, ಶನಿವಾರ ಹೊಲಕ್ಕೆ ಹೋಗಿ ಈರುಳ್ಳಿ ಬೆಳೆಯನ್ನು ನೋಡಿಕೊಂಡು ಬಂದಿದ್ದಾರೆ. ಭಾನುವಾರ ರಾತ್ರಿಯೊಳಗೆ ದುಷ್ಕರ್ಮಿಗಳು ಬಂದು ಕಟಾವು ಮಾಡಿಕೊಂಡು ಹೋಗಿದ್ದಾರೆ. ಈ ಮೊದಲು ಹೊಲದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿತ್ತು. ಆದರೆ, ವಿಪರೀತ ಮಳೆ ಸುರಿದ ಕಾರಣ ಮೆಣಸಿನಕಾಯಿ ಬೆಳೆ ಸಂಪೂರ್ಣ ಹಾಳಾಗಿ ಹೋಗಿತ್ತು. ಹೀಗಾಗಿ, ಅದನ್ನು ನಾಶಪಡಿಸಿ ಈರುಳ್ಳಿ ಬೆಳೆಯನ್ನು ಬೆಳೆದಿದ್ದರು.
ಆದರೆ, ಇನ್ನು ಒಂದೆರಡು ದಿನಗಳಲ್ಲಿ ಈರುಳ್ಳಿಯನ್ನು ಕಟಾವು ಮಾಡಬೇಕಿತ್ತು. ಲಾಕ್ ಡೌನ್ ಹಿನ್ನಲೆಯಲ್ಲಿ ಕೂಲಿಕಾರ್ಮಿಕರೂ ದೊರಕದ ಕಾರಣ ಕಟಾವಿಗೆ ವಿಳಂಬವಾಗಿತ್ತು. ಆದರೆ, ರಾತ್ರೋರಾತ್ರಿ ಈರುಳ್ಳಿ ಬೆಳೆಯನ್ನೇ ಕದ್ದೊಯ್ದಿದ್ದಾರೆ ಎಂದು ರೈತ ಸುನೀಲಕುಮಾರ್ ದೂರಿದ್ದಾರೆ. ಸಾಲಸೋಲ ಮಾಡಿ ಈರುಳ್ಳಿ ಬೆಳೆಯಲಾಗಿತ್ತು. ಉತ್ತಮ ಇಳುವರಿಯೇನೂ ಬಂದಿತ್ತಾದರೂ ಬೆಳೆ ನಮ್ಮ ಕೈಗೆಟುಕದೇ ಕಳ್ಳರ ಪಾಲಾಗಿದೆ. ಅತ್ತ ಸಾಲ ಮಾಡಿದ ಹಣ ತೀರಿಸಲಾಗಿಲ್ಲ, ಇತ್ತ ಬೆಳೆಯೂ ಕೈಗೆ ಸಿಕ್ಕಿಲ್ಲ ಎಂದು ಈ ರೈತ ಕಂಗಾಲಾಗಿದ್ದಾರೆ.