ಬಳ್ಳಾರಿಯ ಏಕಶಿಲಾ ಬೆಟ್ಟದಲ್ಲಿ ಬಾನೆತ್ತರಕ್ಕೆ ಹಾರಿದ 65 ಅಡಿ ಉದ್ದದ ಕನ್ನಡ ಧ್ವಜ
ಬಳ್ಳಾರಿ, ನವೆಂಬರ್ 1: ರಾಜ್ಯದಲ್ಲೆಡೆ 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ, ಆದರೆ ನಾಡ ಹಬ್ಬದ ದಿನವೇ ಯುವಕರ ತಂಡವೊಂದು ಇತಿಹಾಸ ಪ್ರಸಿದ್ಧ ಬಳ್ಳಾರಿಯ ಏಕಶಿಲಾ ಬೆಟ್ಟದ ತುತ್ತತುದಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸ್ಮರಣೀಯವಾಗಿ ಆಚರಿಸಿದ್ದಾರೆ.
65ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಗಣಿನಗರಿ ಬಳ್ಳಾರಿಯ ಏಕಶಿಲಾ ಬೆಟ್ಟದಲ್ಲಿ 65 ಅಡಿ ಉದ್ದದ ಕನ್ನಡ ಬಾವುಟವನ್ನು ಭಾನೆತ್ತರಕ್ಕೆ ಹಾರಿಸಲಾಯಿತು.
ಕುಂದಾನಗರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: ಎಂಇಎಸ್ಗೆ ಮುಖಭಂಗ
ಬಳ್ಳಾರಿಯ ಕೋಟೆ ಮುಖ್ಯದ್ವಾರದ ಬಾಗಿಲ ಎದುರೇ ನವಕರ್ನಾಟಕ ಯುವಶಕ್ತಿ ಸಂಘಟನೆಯ ಮುಖಂಡರಾದ ಸಿದ್ಮಲ್ ಮಂಜುನಾಥ್, ಕಪ್ಪಗಲ್ಲು ಚಂದ್ರಶೇಖರ್ ಆಚಾರ್ ನೇತೃತ್ವದಲ್ಲಿ ಬೆಳ್ಳಂಬೆಳಿಗ್ಗೆ ಕನ್ನಡ ತಾಯಿ ಭುವನೇಶ್ವರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ, ಕೋಟೆಯ ಪ್ರವೇಶ ದ್ವಾರದ ಬಳಿಯೇ 65 ಅಡಿ ಉದ್ದದ ಕನ್ನಡ ಧ್ವಜವನ್ನು ಪ್ರದರ್ಶಿಸಿದರು. ಆ ಧ್ವಜವನ್ನು ಹಿಡಿದೇ ಕೋಟೆಯ ಮೇಲಕ್ಕೆ ಸಾಗಿದರು.
ನವಕರ್ನಾಟಕ ಯುವಶಕ್ತಿ ಸಂಘಟನೆಯ ಮುಖಂಡ ಕಪ್ಪಗಲ್ಲು ಚಂದ್ರಶೇಖರ ಆಚಾರ್ ಅವರು ಮಾತನಾಡಿ, 50ನೇ ವರ್ಷದ ಸಂದರ್ಭದಲ್ಲಿ 50 ಅಡಿ ಉದ್ದದ ಧ್ವಜಾರೋಹಣ ಮಾಡಲಾಗಿತ್ತು. ಅಂದಿನಿಂದ ಈವರೆಗೂ ಧ್ವಜಾರೋಹಣ ಮುಂದುವರಿಸುತ್ತಾ ಬರಲಾಗಿದೆ. ಈ ಬಾರಿ ಕೂಡ 65 ಅಡಿ ಉದ್ದದ ಕನ್ನಡ ಬಾವುಟವನ್ನು ಹಾರಿಸಲಾಗಿದೆ ಎಂದು ತಿಳಿಸಿದರು.