ಟಪಾಲ್ ಗಣೇಶ್- ಶರದ್ ಪವಾರ್ ಭೇಟಿ, ಬಳ್ಳಾರಿ ರಾಜಕೀಯ ಬಿರುಸು
ಬಳ್ಳಾರಿ, ಫೆಬ್ರವರಿ 15: ರಾಜ್ಯ ರಾಜಕೀಯ ದಿನೇ ದಿನೇ ಚುರುಕುಗೊಳ್ಳುತ್ತಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಹೆಚ್ಚುತ್ತಿದೆ.
ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಸಿಗದೆ ಇರುವವರು, ಪ್ರಾದೇಶಿಕ ಪಕ್ಷಗಳಿಂದ ಸ್ಪರ್ಧಿಸಲು ಆಸಕ್ತಿ ಹೊಂದಿರುವವರು ವಿವಿಧ ಪಕ್ಷಗಳನ್ನು ಭೇಟಿ ಮಾಡಿ, ತಮ್ಮ ಅಭ್ಯರ್ಥಿತನವನ್ನು ಮತ್ತು ಪರಿಚಯ ಪತ್ರವನ್ನು ಮುಖಂಡರ ಕೈಗೆ ನೀಡುತ್ತಿದ್ದಾರೆ.
ಜೆಡಿಎಸ್ ಬಲದಿಂದ ಎನ್ ಸಿಪಿಗೆ ಕರ್ನಾಟಕದಲ್ಲಿ ಗೆಲ್ಲುವ ವಿಶ್ವಾಸ
ಆರ್ ಟಿಐ ಕಾರ್ಯಕರ್ತ, ಗಣಿ ಅಕ್ರಮ ಮತ್ತು ಬಳ್ಳಾರಿಯ ರೆಡ್ಡಿ ಸಹೋದರರ ವಿರುದ್ಧ ಹೋರಾಟ ನಡೆಸುತ್ತಿರುವ ಟಪಾಲ್ ಗಣೇಶ್ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರನ್ನು ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಗುರುವಾರ ಭೇಟಿ ಮಾಡಿ, ಬಳ್ಳಾರಿ ಜಿಲ್ಲೆಯ ರಾಜಕೀಯ ಕುರಿತು ಚರ್ಚೆ ನಡೆಸಿದ್ದಾರೆ.
ಎನ್ ಸಿಪಿಯ ನಾಯಕರು ಗಣಿಧಣಿಗಳ ಪ್ರಸ್ತುತ ಸ್ಥಿತಿಗತಿ, ಜನಪರ ಹೋರಾಟಗಳು, ಬಳ್ಳಾರಿ ಜಿಲ್ಲೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಟಪಾಲ್ ಗಣೇಶ್ ಅವರಿಂದ ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ - ಸೋನಿಯಾಗಾಂಧಿ ಅವರು 1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ನಂತರ ಜಿಲ್ಲೆಯಲ್ಲಿ ಉಂಟಾಗಿರುವ ರಾಜಕೀಯ ಬದಲಾವಣೆ ಕುರಿತು ಮಾಹಿತಿ ಪಡೆದಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಆಯ್ದ ಕೆಲವೇ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದೆ. ಹೈದರಾಬಾದ್ - ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಕಷ್ಟಸಾಧ್ಯ ಎಂದು ಮೂಲಗಳು ಖಚಿತಪಡಿಸಿವೆ. ಟಿಕೆಟ್ ಗಾಗಿ ಅನೇಕರು ಸಂಪರ್ಕ ಮಾಡುತ್ತಿದ್ದಾರೆ. ಹಲವರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಕೆಲ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎನ್ ಸಿಪಿ ನಿರ್ಧರಿಸಿದೆ.