ಮೇಕೆದಾಟು ಯೋಜನೆ; ಮತ್ತೊಮ್ಮೆ ನಿಲುವು ಸ್ಪಷ್ಟಪಡಿಸಿದ ಸಿಎಂ
ಬಳ್ಳಾರಿ, ಅಕ್ಟೋಬರ್ 04; " ಮೇಕೆದಾಟು ಯೋಜನೆ ಮಾಡುವುದು ನಮ್ಮ ಕೈಯಲ್ಲಿ ಇದೆ. ನಮ್ಮ ನಿಲುವಿಗೆ ನಮ್ಮ ಸರಕಾರ ಬದ್ಧವಾಗಿದೆ. ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ನಿಲುವು ಗೊತ್ತಿರುವ ವಿಚಾರ. ಅವರು ರಾಜಕಾರಣವನ್ನು ಬೆರೆಸುತ್ತಾರೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮುಖ್ಯಮಂತ್ರಿಗಳು ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. "ಮೇಕೆದಾಟು ಯೋಜನೆ ವಿಚಾರವಾಗಿ ನಮ್ಮ ನಿಲುವು ಬದಲಾಗುವುದಿಲ್ಲ. ತಮಿಳುನಾಡಿಗೆ ಯಾವುದೇ ತೀರ್ಮಾನ ಮಾಡಲು ಅಧಿಕಾರ ಇಲ್ಲ, ಕಾನೂನಾತ್ಮಕ ಹೋರಾಟದಿಂದ ಮೇಕೆದಾಟು ಯೋಜನೆ ಹಾಗೆಯೇ ಆಗುತ್ತದೆ" ಎಂದು ಸ್ಪಷ್ಟಪಡಿಸಿದರು.
ಮೇಕೆದಾಟು ಪಾದಯಾತ್ರೆಗೆ ಪೊಲೀಸರಿಂದ ಅಡ್ಡಿ, ರೈತರ ಪ್ರತಿಭಟನೆ
"ತುಂಗಾಭದ್ರಾ ಜಲಾಶಯದ ನೀರು ವ್ಯರ್ಥವಾಗಿ ಸಮುದ್ರ ಸೇರದಂತೆ ಸಮಾನಂತರ ಜಲಾಶಯ ನಿರ್ಮಾಣ ಕಾರ್ಯ ಮಾಡಲಾಗುವುದು. ಬಳ್ಳಾರಿ ನಗರದ ನಿರಂತರ ಕುಡಿಯುವ ನೀರು ಯೋಜನೆಯ ದೋಷಗಳ ಬಗ್ಗೆ ತಿಳಿದುಕೊಂಡು ತೀರ್ಮಾನ ಕೈಗೊಳ್ಳಲಾಗುವುದು" ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ವಿಡಿಯೋ; ಮೇಕೆದಾಟು ಯೋಜನೆ ಬಗ್ಗೆ ಪ್ರಜ್ವಲ್ ಪ್ರಶ್ನೆ, ಕೇಂದ್ರದ ಉತ್ತರ
"ಈ ಭಾಗದಲ್ಲಿ ಬೃಹತ್ ಸ್ಟೀಲ್ ಕಂಪನಿಗಳು ಭೂಮಿ ಪಡೆದಿವೆ. ಆದರೆ ಹತ್ತು ವರ್ಷಗಳಿಂದ ಕಾರ್ಯಾಚರಣೆ ಆರಂಭಿಸಿಲ್ಲ. ಈ ಬಗ್ಗೆ ಪುನರ್ ಪರಿಶೀಲನೆ ಮಾಡುತ್ತೇವೆ. ಏನೇನು ಕಾರಣ ಇವೆ ನೋಡಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇವೆ" ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಮೇಕೆದಾಟು ಯೋಜನೆ; ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದ ಕುಮಾರಸ್ವಾಮಿ
ತಮಿಳುನಾಡು ಸರ್ಕಾರ ಕರ್ನಾಟಕದ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದೆ. ತಮಿಳುನಾಡು ಜೊತೆಗೆ ಪುದುಚೇರಿ ರಾಜ್ಯವೂ ಯೋಜನೆ ವಿರೋಧಿಸುತ್ತಿದೆ. ಯೋಜನೆ ಜಾರಿಯಾದರೆ ರಾಜ್ಯಕ್ಕೆ ಹರಿದು ಬರುವ ಕಾವೇರಿ ನೀರಿನಲ್ಲಿ ಕೊರತೆ ಉಂಟಾಗಲಿದೆ ಎಂಬುದು ಉಭಯ ರಾಜ್ಯಗಳ ವಾದ.
ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿಯೂ ಯೋಜನೆಯನ್ನು ತಮಿಳುನಾಡು ವಿರೋಧಿಸಿದೆ.
ತಮಿಳುನಾಡು ಸರ್ಕಾರದ ಗುಂಡಾರ್ ಯೋಜನೆಗೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆಗೆ ಕರ್ನಾಟಕ ಸಲ್ಲಿಸಿದ್ದ ಪ್ರಸ್ತಾವನೆಗೆ ತಮಿಳುನಾಡು, ಪುದುಚೇರಿ ವಿರೋಧ ವ್ಯಕ್ತಪಡಿಸಿದವು. ಆದ್ದರಿಂದ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಯನ್ನು ಮುಂದೂಡುತ್ತೇವೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.
ಮೇಕೆದಾಟು ಯೋಜನೆ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ನದಿ ಪಾತ್ರದ ರಾಜ್ಯಗಳ ಒಪ್ಪಿಗೆ ಇಲ್ಲದೇ ಯೋಜನೆ ಜಾರಿಗೊಳಿಸುವುದು ಅಸಾಧ್ಯವಾಗಿದೆ. ಕರ್ನಾಟಕ ಸರ್ಕಾರದ ಯೋಜನೆ ಜಾರಿಗೊಳಿಸಲು ತಮಿಳುನಾಡು, ಪುದುಚೇರಿ ರಾಜ್ಯಗಳ ಒಪ್ಪಿಗೆ ಪಡೆಯಬೇಕಿದೆ.
ಲೋಕಸಭೆ ಅಧಿವೇಶನ ನಡೆಯುವಾಗ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇಕೆದಾಟು ಯೋಜನೆ ಬಗ್ಗೆ ಪ್ರಶ್ನೆ ಹೇಳಿದ್ದರು. ಆಗ ಉತ್ತರ ನೀಡಿದ್ದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್, "ಮೇಕೆದಾಟು ಯೋಜನೆ ಡಿಪಿಆರ್ಗೆ ಕೇಂದ್ರ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೆ ಕಾವೇರಿ ಕಣಿವೆಯ ಕೆಳಹಂತದ ರಾಜ್ಯಗಳ ಒಪ್ಪಿಗೆ ಅಗತ್ಯವಿದೆ. ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಒಪ್ಪಿಗೆ ಪಡೆಯಬೇಕು. ಕರ್ನಾಟಕ ಡಿಪಿಆರ್ ಸಲ್ಲಿಕೆ ಮಾಡಿದಾಗಲೇ ಇದನ್ನು ಸ್ಪಷ್ಟಪಡಿಸಲಾಗಿತ್ತು" ಎಂದು ಹೇಳಿದ್ದರು.
ಮತ್ತೊಂದು ಕಡೆ ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಯೋಜನೆ ಕುರಿತ ಡಿಪಿಆರ್ಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿಯೂ ಸಿಕ್ಕಿಲ್ಲ. ಕೇಂದ್ರ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಕರ್ನಾಟಕ ಭಾವಿಸಿದರೂ ಸಹ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತಂದು ಅನುಮತಿ ಪಡೆಯಬೇಕಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಮತ್ತು ಅಲ್ಲಿನ ಪ್ರತಿಪಕ್ಷ ಬಿಜೆಪಿ ಯೋಜನೆಗೆ ವಿರೋಧವನ್ನು ವ್ಯಕ್ತಪಡಿಸುತ್ತಿವೆ. ತಮಿಳುನಾಡು ಬಿಜೆಪಿ ಯೋಜನೆ ವಿಚಾರದಲ್ಲಿ ತಮಿಳುನಾಡು ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ ಎಂದು ಹೇಳಿದೆ.