ಪೋಷಕರ ಮೂಢ ನಂಬಿಕೆ, ಮಗುವಿನ ಸ್ಥಿತಿ ಗಂಭೀರ
ಬಳ್ಳಾರಿ, ಡಿ.4 : ಪೋಷಕರ ಮೂಢ ನಂಬಿಕೆಯಿಂದಾಗಿ ನವಜಾತ ಶಿಶುವೊಂದು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಮಗು ಅಳಲಿಲ್ಲ ಎಂದು ಕಾಯಿಸಿದ ಸೂಜಿಯಿಂದ ಮಗುವಿಗೆ ಪೋಷಕರು ಬರೆ ಎಳೆದಿದ್ದು, ಮಗು ಜೀವಕ್ಕೆ ಅಪಾಯ ತಂದೊಡ್ಡಿದೆ. ಮಗುವನ್ನು ಸದ್ಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಇಟಿಗಿ ಗ್ರಾಮದಲ್ಲಿ ಏಳು ದಿನಗಳ ಹಿಂದೆ ಹುಟ್ಟಿದ ಮಗುವಿನ ಹೊಟ್ಟೆ ಮೇಲೆ ಪೋಷಕರು ಕಾಸಿದ ಸೂಜಿಯಿಂದ ಬರೆ ಎಳೆದಿದ್ದಾರೆ. ಇದರಿಂದ ಅಸ್ವಸ್ಥಗೊಂಡಿರುವ ಮಗುವನ್ನು ವಿಮ್ಸ್ಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿದೆ. [ಮೂಢನಂಬಿಕೆ ವಿರುದ್ಧ ಸಚಿವ ಕಾರ್ಯಕ್ರಮ]
ಹುಟ್ಟಿದ ಮಗು ಅಳಲಿಲ್ಲ ಎಂದು, ಬರೆ ಎಳೆದರೆ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ ಎಂಬ ಮೂಢ ನಂಬಿಕೆಗಳಿಗೆ ಜೋತು ಬಿದ್ದು ಪೋಷಕರು ಮಗುವಿಗೆ ಬರೆ ಹಾಕಿದ್ದಾರೆ. ನಾಲ್ಕಾರು ಬರೆಗಳನ್ನು ಹಾಕಿದ್ದರಿಂದ ನೋವಿನ ತೀವ್ರತೆಗೆ ಮಗುವಿಗೆ ಜ್ವರ ಬಂದಿದೆ. [ಬಾಲಕಿಗೆ ಹಿಂದೆ ನೀಡಿದ ಮೌಲ್ವಿ]
ಮೂರು ದಿನ ಮಗು ಜ್ವರದಿಂದ ಬಳಲುತ್ತಿದ್ದರು ಆಸ್ಪತ್ರೆಗೆ ದಾಖಲು ಮಾಡದೆ ಮನೆಯಲ್ಲಿಯೇ ನಾಟಿ ಔಷಧ ನೀಡಿದ್ದಾರೆ. ಜ್ವರ ತೀವ್ರವಾಗಿ, ಮಗುವಿನ ರಕ್ತದೊತ್ತಡ ಪ್ರಮಾಣವೂ ಗಣನೀಯವಾಗಿ ಕುಸಿದು ಕೋಮಾ ಸ್ಥಿತಿಗೆ ತಲುಪಿದಾಗಲೇ ವಿಮ್ಸ್ಗೆ ದಾಖಲು ಮಾಡಿದ್ದಾರೆ. ಮಗುವಿಗೆ ಬರೆ ಹಾಕಿದ ಪೋಷಕರು ಈಗ ಅದನ್ನು ಉಳಿಸಿಕೊಳ್ಳು ಹೋರಾಟ ನಡೆಸುತ್ತಿದ್ದಾರೆ.
ಇಂತಹ ಪ್ರಕರಣ ಸಾಮಾನ್ಯ : ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಇಂತಹ ಸಂಪ್ರದಾಯವಿದ್ದು ವಾರಕ್ಕೆ ಸುಮಾರು ಮೂರು ಮಕ್ಕಳು ಇಂಥ ಬರೆ ಹಾಕಿಸಿಕೊಂಡು ವಿಮ್ಸ್ನಲ್ಲಿ ಚಿಕಿತ್ಸೆಗೆ ದಾಖಲಾಗುತ್ತವೆ. ಆದರೆ, ಈ ಪ್ರಕರಣದಲ್ಲಿ ಮಗು ತೀವ್ರವಾಗಿ ಅಸ್ವಸ್ಥಗೊಂಡಿದೆ ಎಂದು ವಿಮ್ಸ್ ವೈದ್ಯರು ಹೇಳಿದ್ದಾರೆ.
ಬರೆ ಎಳೆಯದಂತೆ ಪಾಲಕರಿಗೆ ಮಾಹಿತಿ ನೀಡುತ್ತಲೇ ಇದ್ದೇವೆ. ಆದರೆ, ಪಾಲಕರು ಮೌಢ್ಯಕ್ಕೆ ಮರುಳಾಗಿ ಮಕ್ಕಳಿಗೆ ಬರೆ ಎಳೆಯುವುದನ್ನು ಮುಂದುವರಿಸಿದ್ದಾರೆ. ಗ್ರಾಮೀಣ ಪ್ರದೇಶದ ನವಜಾತ ಶಿಶುಗಳೇ ಇಂಥ ಮೌಢ್ಯಕ್ಕೆ ಹೆಚ್ಚು ಬಲಿಯಾಗುತ್ತವೆ ಎನ್ನುತ್ತಾರೆ ವೈದ್ಯರು.