ನಾನು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಅಂದ್ರು ಕಿಚ್ಚ ಸುದೀಪ್
ಬಳ್ಳಾರಿ, ಮೇ. 07 : ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ. ಸೋಮಶೇಖರರೆಡ್ಡಿ, ಗ್ರಾಮೀಣ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಣ್ಣ ಫಕ್ಕೀರಪ್ಪ ಅವರ ಪರವಾಗಿ ಚಿತ್ರನಟ ಕಿಚ್ಚ ಸುದೀಪ್ ಅವರು ನಗರ ಮತ್ತು ಗ್ರಾಮೀಣ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ರೋಡ್ ಶೋ ನಡೆಸಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಸುದೀಪ್ ಅವರು ನಗರ ಕ್ಷೇತ್ರದ ಶ್ರೀರಾಂಪುರ ಕಾಲನಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿ, ಬಿ. ಶ್ರೀರಾಮುಲು ನನ್ನ ಹಳೆಯ ಸ್ನೇಹಿತ ಮತ್ತು ಬಂಧು. ನಾನು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ನನಗೆ ಎಲ್ಲಾ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುವುದರಲ್ಲಿ ತಪ್ಪೇನಿಲ್ಲ ಎಂದರು.
ಶ್ರೀರಾಮುಲು ವಿರುದ್ಧ ಪ್ರಚಾರ ಮಾಡೋಲ್ಲ ಎಂದ ಕಿಚ್ಚ ಸುದೀಪ್
ಕಲಾವಿದನಾಗಿ ನಾನು ತಮ್ಮಲ್ಲಿ ಸ್ನೇಹಿತರ ಪರವಾಗಿ ಚುನಾವಣಾ ಪ್ರಚಾರ ಮಾಡಲು ಬಳ್ಳಾರಿಗೆ ಬಂದಿರುವೆ. ಇದರಲ್ಲಿ ತಪ್ಪೇನಿಲ್ಲ. ಜಿ. ಸೋಮಶೇಖರರೆಡ್ಡಿ ಮತ್ತು ಸಣ್ಣ ಫಕ್ಕೀರಪ್ಪ ಅವರಿಗೆ ನಿಮ್ಮ ಅಮೂಲ್ಯವಾದ ಮತ ಹಾಕಿ, ಗೆಲ್ಲಿಸಿ ಎಂದರು.
ನಟ ಕಿಚ್ಚ ಸುದೀಪ್ ಅವರನ್ನು ನೋಡಲು ಜನರು ಉರಿ ಬಿಸಿಲನ್ನೂ ಲೆಕ್ಕಿಸದೇ ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಶಿಳ್ಳೆ ಹಾಕಿ, ಕೇಕೆ ಹಾಕಿ, ಹೂವುಗಳನ್ನು ತೂರಿ, ಹೂವಿನ ಹಾರಗಳನ್ನು ಹಾಕಿ ಅಭಿಮಾನಿಗಳು ಸುದೀಪ್ ಅವರನ್ನು ಸ್ವಾಗತಿಸಿದ್ದು, ವಿಶೇಷವಾಗಿತ್ತು.