ಮಾಜಿ ದೇವದಾಸಿಯರ ಬದುಕು ರೂಪಿಸಿದ ಚಿಕ್ಕಿ ಘಟಕ
ಬಳ್ಳಾರಿ, ಅಕ್ಟೋಬರ್ 30 : 2020ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಚಿಕ್ಕಿ ಘಟಕದ ಮೂಲಕ ಬದುಕು ರೂಪಿಸಿಕೊಂಡ ಮಾಜಿ ದೇವದಾಸಿಯರು ನಡೆಸುತ್ತಿರುವ ಕೂಡ್ಲಿಗಿಯ ದೇವದಾಸಿ ಸ್ವಾಲಂಬನಾ ಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.
ಮಾಜಿ ದೇವದಾಸಿಯರು ಚಿಕ್ಕಿ ಘಟಕದಿಂದ ಬದುಕು ರೂಪಿಸಿಕೊಂಡು ಸ್ವಾಲಂಬಿಗಳಾಗಿದ್ದಾರೆ. ಇತರರಿಗೆ ಮಾದರಿಯಾಗಿರುವ ಇವರ ಕಾರ್ಯವನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ಮಾಜಿ ದೇವದಾಸಿಯರ ಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಮೂಲಕ ಅವರ ಕಾರ್ಯವನ್ನು ಪ್ರೋತ್ಸಾಹಿಸಿದೆ.
ರಾಜ್ಯೋತ್ಸವ ಪ್ರಶಸ್ತಿ; ಪ್ರೊ. ನ ವೆಂಕೋಬರಾವ್ ಪರಿಚಯ
ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಬಳ್ಳಾರಿ ಜಿಲ್ಲಾಡಳಿತ ಕೈಗೊಂಡ ವಿಶಿಷ್ಠ ಪ್ರಯತ್ನಕ್ಕೆ ಇದರಿಂದಾಗಿ ಯಶಸ್ಸು ಸಿಕ್ಕಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ ಅಭಿವೃದ್ಧಿ ನಿರೀಕ್ಷಕರ ಸಹಯೋಗದೊಂದಿಗೆ ಜಿಲ್ಲಾಡಳಿತದ ಈ ಕಾರ್ಯ ಕೈಗೊಂಡಿತ್ತು.
65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ: ಪುರಸ್ಕೃತರ ಪಟ್ಟಿ
ಕೂಡ್ಲಿಗಿ ಪಟ್ಟಣದ ಊರಮ್ಮ ದೇವಿ ದೇವಾಲಯದ ಮಾಜಿ ದೇವದಾಸಿಯವರ ಪೈಕಿ ಅಣ್ಣಮ್ಮ ಸೇರಿದಂತೆ 15ಜನರನ್ನು ಗುರುತಿಸಿ ಸ್ವಸಹಾಯ ಸಂಘ ರಚನೆ ಮಾಡಲಾಯಿತು. ಇದಕ್ಕೆ ದೇವದಾಸಿ ಸ್ವಾಲಂಬನಾ ಕೇಂದ್ರವೆಂದು ಹೆಸರಿಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳಾ ಅಭಿವೃದ್ಧಿ ನಿಗಮದಿಂದ ಕಡಿಮೆ ಬಡ್ಡಿ ದರದಲ್ಲಿ 12 ಲಕ್ಷ ರೂ. ಸಾಲ ಸೌಲಭ್ಯ ನೀಡಿ ಚಿಕ್ಕಿ ಘಟಕ ನಿರ್ಮಾಣ ಮಾಡಲಾಯಿತು.
ಈ ಮಾಜಿ ದೇವದಾಸಿಯರು ತಯಾರಿಸಿದ ಶೇಂಗಾ ಚಿಕ್ಕಿಗಳನ್ನು ಗರ್ಭಿಣಿಯರು, ಬಾಣಂತಿಯರು ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ವಿತರಿಸುವುದಕ್ಕಾಗಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಚಿಕ್ಕಿಗಳಿಗೆ ಸಂಬಂಧಿಸಿದ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದೇವದಾಸಿ ಸ್ವಾಲಂಬನಾ ಕೇಂದ್ರಕ್ಕೆ ನೀಡುತ್ತಿದೆ.
ದೇವದಾಸಿ ಪದ್ಧತಿ ನಿರ್ಮೂಲನೆಗೆ ಹೋರಾಡುವೆ: ನಟ ಚೇತನ್
ಕೂಡ್ಲಗಿಯಲ್ಲೇ ಅಧಿಕ : ಬಳ್ಳಾರಿ ಜಿಲ್ಲೆಯಲ್ಲಿ 10,540 ಮಾಜಿ ದೇವದಾಸಿಯರು ಇದ್ದಾರೆ. ಈ ಪೈಕಿ ಕೂಡ್ಲಿಗಿಯಲ್ಲಿಯೇ ಇವರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಚಿಕ್ಕಿ ತಯಾರಿಕಾ ಘಟಕವನ್ನು ಬಳ್ಳಾರಿ ಜಿಲ್ಲಾಡಳಿತ ಸ್ಥಾಪಿಸುವುದರ ಮೂಲಕ ಇವರಿಗೆ ಉದ್ಯೊಗ ಕಲ್ಪಿಸಿ ಸ್ವಾವಲಂಬಿ ಜೀವನಕ್ಕೆ ಸಹಕಾರ ನೀಡಿದೆ. ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಚಿಕ್ಕಿ ತಯಾರಿಕಾ ಘಟಕದಲ್ಲಿ ಯಂತ್ರಗಳನ್ನು ಅಳವಡಿಸುವ ಚಿಂತನೆಯೂ ಇದೆ.
ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಪೌಷ್ಠಿಕ ಆಹಾರ ಮೆನುವಿನಲ್ಲಿ ಶೇಂಗಾ ಚಿಕ್ಕಿಯೂ ಒಂದಾಗಿದೆ. ಇವರು ತಯಾರಿಸುವ ಚಿಕ್ಕಿಗಳನ್ನು ಕೂಡ್ಲಿಗಿ ತಾಲೂಕಿನಲ್ಲಿ 300ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮಾಸಿಕ 7 ಲಕ್ಷ ಚಿಕ್ಕಿ ಬೇಡಿಕೆಯಿರುವುದರಿಂದ ಪ್ರಾರಂಭಿಕ ಹಂತದಲ್ಲಿ ನಿತ್ಯ 4 ಸಾವಿರ ಚಿಕ್ಕಿಗಳನ್ನು ತಯಾರಿಸುವಲ್ಲಿ ಮಾಜಿ ದೇವದಾಸಿಯರು ನಿರತರಾಗಿದ್ದಾರೆ.
ಮುಂದಿನ ದಿನಗಳಲ್ಲಿ ಉದ್ಯೋಗಿನಿ ಯೋಜನೆಯಡಿ ಇನ್ನು ಹೆಚ್ಚಿನ ಸಾಲ ಸೌಲಭ್ಯ ಒದಗಿಸಿ ಘಟಕಕ್ಕೆ ಚಿಕ್ಕಿ ತಯಾರಿಸುವ ಯಂತ್ರಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ಇನ್ನು ಹೆಚ್ಚಿನ ಮಟ್ಟದಲ್ಲಿ ಮಾಜಿ ದೇವದಾಸಿಯರಿಗೆ ತರಬೇತಿ ನೀಡಿ, ಚಿಕ್ಕಿ ಘಟಕದಲ್ಲಿ ಕೆಲಸ ನೀಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೇಳಿದೆ.
"ಮಾಜಿ ದೇವದಾಸಿಯರು ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳಲಿ ಎಂಬ ಸದುದ್ದೇಶದಿಂದ ಅವರಿಗೆ ತರಬೇತಿ ನೀಡಿ ಕೂಡ್ಲಿಗಿಯಲ್ಲಿ ಚಿಕ್ಕಿ ಘಟಕ ಆರಂಭಿಸಿ ಅನುಕೂಲ ಮಾಡಿಕೊಡಲಾಗಿತ್ತು. ಅವರ ಸ್ವಾಲಂಬನಾ ಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ" ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಹೇಳಿದ್ದಾರೆ.
ಚಿತ್ರ ವರದಿ : ರಾಮಲಿಂಗಪ್ಪ ಬಿ.ಕೆ, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ, ಬಳ್ಳಾರಿ