ನೂತನ ವಿಜಯನಗರ ಜಿಲ್ಲೆಗೆ 371ಜೆ ಸೌಲಭ್ಯ:ಆನಂದ್ ಸಿಂಗ್ ಹರ್ಷ
ಬಳ್ಳಾರಿ,ಫೆಬ್ರವರಿ 25: ನೂತನ ಜಿಲ್ಲೆ ವಿಜಯನಗರಕ್ಕೆ ಸಂವಿಧಾನ 371ಜೆ ವಿಧಿಯಲ್ಲಿ ಎಲ್ಲಾ ಸವಲತ್ತು ಸಿಗುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೈದರಾಬಾದ್ ಕರ್ನಾಟಕಕ್ಕೆ ನೀಡುವ ವಿಶೇಷ ಸ್ಥಾನವನ್ನು ಇನ್ನುಮುಂದೆ ನೂತನ ವಿಜಯನಗರ ಪಡೆಯಲಿದೆ. ಭಾರಿ ಪರ ವಿರೋದದ ನಡುವೆಯೂ ಅಖಂಡ ಬಳ್ಳಾರಿ ಜಿಲ್ಲಾ ವಿಭಜನೆ ಮಾಡಿ ನೂತನ ವಿಜಯನಗರ ಜಿಲ್ಲೆಯಾಗಿ ಸರ್ಕಾರ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ 31 ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಉದಯಿಸಿತ್ತು.
ವಿಭಜನೆ-ರಚನೆ ಬಳಿಕ ಹೇಗಿರಲಿವೆ ಬಳ್ಳಾರಿ-ವಿಜಯನಗರ ಜಿಲ್ಲೆಗಳು?
ಆದರೆ ಹೈದರಾಬಾದ್ ಕರ್ನಾಟಕಕ್ಕೆ ನೀಡುವ ವಿಶೇಷ ಸ್ಥಾನಮಾನ ಆರ್ಟಿಕಲ್ 371 ಜೆ ಗೆ ಒಳಪಟ್ಟಿರಲಿಲ್ಲ, ಅಲ್ಲದೇ ನೂತನ ಜಿಲ್ಲಾ ರಚನೆ ಹಿನ್ನೆಲೆಯಲ್ಲಿ 371 ಜೆ ಕೈ ತಪ್ಪಲಿದೆ ಎನ್ನುವ ಆತಂಕ ಸಹ ಇಲ್ಲಿನ ಜನರಿಗೆ ಇತ್ತು.
ಆದರೆ ಈಗ ಆ ಆತಂಕ ದೂರವಾಗಿದ್ದು ನೂತನ ಜಿಲ್ಲೆಯನ್ನು ಆರ್ಟಿಕಲ್ 371 ಜೆ ಗೆ ಸೇರಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.ಈ ಭಾಗದ ಜನತೆಯ ಹೋರಾಟಕ್ಕೆ ಸಂದ ಧಿಗ್ವಿಜಯವಾಗಿದೆಂದು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆನಂದ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.
ನೂತನ ವಿಜಯನಗರ ಜಿಲ್ಲೆಯನ್ನು ಆರ್ಟಿಕಲ್ 371 ಜೆ ಗೆ ಸೇರಿಸಿ ಇಂದು ರಾಜ್ಯಪಾಲರು ಆದೇಶ ಹೊರಡಿಸಿರುವ ಕುರಿತಾಗಿ ಮಾತನಾಡಿದ ಅವರು, ಇದರಿಂದ ಹೈದರಾಬಾದ್ ಕರ್ನಾಟಕಕ್ಕೆ ನೀಡುವ ವಿಶೇಷ ಸ್ಥಾನವನ್ನು ಇನ್ನು ಮುಂದೆ ವಿಜಯನಗರ ಜಿಲ್ಲೆ ಕೂಡ ಪಡೆಯಲಿದೆ ಎಂದು ಹೇಳಿದರು.
ಇತ್ತೀಚೆಗಷ್ಟೇ ನೂತನವಾಗಿ ವಿಜಯ ನಗರ ಜಿಲ್ಲೆಯಾಗಿದೆ. ಇದರಿಂದ ನಮ್ಮ ದಶಕಗಳ ಕನಸು ನನಸಾಗಿದೆ ಎಂಬ ಸಂತೋಷವಿದೆ.
ಇದರೊಂದಿಗೆ ನೂತನ ಜಿಲ್ಲೆಗೆ ಹೈದರಾಬಾದ್ ಕರ್ನಾಟಕಕ್ಕೆ ನೀಡುವ ವಿಶೇಷ ಸ್ಥಾನ ಸಿಕ್ಕಿದೆ. ವಿಶೇಷವಾಗಿ ಈ ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಗುರಿಯಾಗಿದೆ. ಪ್ರಸ್ತುತ ಈ ಕನಸು ನನಸಾಗುವುದಕ್ಕೆ ದಿನಕೂಡಿ ಬಂದಿದ್ದು, ಈ ಆದೇಶದಿಂದ ನನಗೆ ಅತೀವ ಸಂತೋಷ ನೀಡಿದೆ ಎಂದು ಹೇಳಿದರು.