ತಂದೆಯಾಗಿ ಮಗಳ ಮದುವೆ ಮಾಡಿದ ಸಂತೋಷ ನನಗೆ: ಶ್ರೀರಾಮುಲು
ಬಳ್ಳಾರಿ, ಮಾರ್ಚ್ 06: ಮಗಳ ಮದುವೆಯನ್ನು ತುಂಬ ಇಷ್ಟ ಪಟ್ಟು ಮಾಡಿದ್ದೇನೆ, ದೇವರ ದಯೆಯಿಂದ ಯಾವುದೇ ವಿಘ್ನವಿಲ್ಲದೇ ಸರಾಗವಾಗಿ ಜರುಗಿದೆ. ಒಬ್ಬ ತಂದೆಯಾಗಿ ಮಗಳ ಮದುವೆ ಮಾಡಿದ ಖುಷಿ ಇದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಶ್ರೀರಾಮುಲು ಮಗಳ ಮದುವೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ನಿನ್ನೆ ನೂತನ ದಂಪತಿಗಳ ಭವ್ಯ ಮೆರವಣಿಗೆ ಮಾಡುವ ಮೂಲಕ , ನೂತನ ವಧು ರಕ್ಷಿತಾ, ವರ ಲಲಿತ ಸಂಜೀವ್ ರೆಡ್ಡಿ ಅವರಿಗೆ ಸ್ವಾಗತ ಕೋರಲಾಯಿತು.
ಬಳ್ಳಾರಿಯ ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನೂತನ ದಂಪತಿಗಳು ಶ್ರೀ ಕುಮಾರಸ್ವಾಮಿ ದೇವಾಲಯದಿಂದ ರಾಮುಲು ಮನೆಯವರೆಗೆ ಮೆರವಣಿಗೆ ಮಾಡಲಾಯಿತು.
ಕುದುರೆ ಸಾರೋಟದಲ್ಲಿ ಕುಳಿತು ವಧು-ವರರ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಹತ್ತಕ್ಕೂ ಹೆಚ್ಚು ಕಲಾತಂಡಗಳು, ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಇನ್ನು ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ನೇರವಾಗಿ ನೂತನ ವಧುವರರು ಬಳ್ಳಾರಿಗೆ ಆಗಮಿಸಿದ್ದಾರೆ. ಇದೇ ವೇಳೆಯಲ್ಲಿ ಮಾತನಾಡಿದ ಶ್ರೀರಾಮುಲು ಅವರು ರಾಜ್ಯದಾದ್ಯಂತ ಪ್ರತಿವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಿದ್ದೇನೆ, ಕಷ್ಟ ಕಾಲದಲ್ಲಿಯೂ ಕಾರ್ಯಕ್ರಮ ಬಿಟ್ಟಿಲ್ಲ, ಬಿಡುವುದಿಲ್ಲವೆಂದರು.