ಕೋವಿಡ್ ನಿಯಮಗಳೊಂದಿಗೆ ಶ್ರೀಕುಮಾರಸ್ವಾಮಿ ಜಾತ್ರೆ ಆರಂಭ
ಬಳ್ಳಾರಿ, ನವೆಂಬರ್ 30: ಐದು ವರ್ಷಗಳಿಗೆ ಎರಡು ಬಾರಿ ನಡೆಯುವ ಪ್ರಸಿದ್ಧ ಶ್ರೀ ಕುಮಾರಸ್ವಾಮಿ ಜಾತ್ರೆಯು ನ.30ರಿಂದ ಆರಂಭಗೊಂಡಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.
ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆಯುವ ಪ್ರಸಿದ್ಧ ಕುಮಾರಸ್ವಾಮಿ ಜಾತ್ರೆಯು ನ.30 ಹಾಗೂ ಡಿಸೆಂಬರ್ 1 ಎರಡು ದಿನ ನಡೆಯಲಿದೆ. ಕೊರೊನಾ ಸೋಂಕಿನ ಕಾರಣದಿಂದ ಹಲವು ನಿರ್ಬಂಧನೆಗಳನ್ನು ವಿಧಿಸಿ ಜಾತ್ರೆಯನ್ನು ನಡೆಸಲು ಅವಕಾಶ ನೀಡಲಾಗಿದೆ. ಜಾತ್ರೆಗೆ ಬರುವವರು ಮುಖಗವಸನ್ನು ಕಡ್ಡಾಯವಾಗಿ ಧರಿಸಬೇಕಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಿಸಿ, ಸ್ಯಾನಿಟೈಸರ್ ಬಳಸಿ ನಂತರ ದೇವಸ್ಥಾನದ ಒಳಗೆ ಬರಬೇಕಿದೆ. ದೇವಸ್ಥಾನದಲ್ಲಿ ಪ್ರಸಾದ, ಕಾಯಿ, ಮಂಗಳಾರತಿಗೆ ಅವಕಾಶ ನೀಡುವುದಿಲ್ಲ.
ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆದ ಚಾಮುಂಡೇಶ್ವರಿ ದೇವಿಯ ರಥೋತ್ಸವ
ಐದು ವರ್ಷಕ್ಕೆ ಎರಡು ಬಾರಿ ಜಾತ್ರೆ ನಡೆಯುತ್ತದೆ. ಕಾರ್ತೀಕ ಹುಣ್ಣಿಮೆಯಂದು ಜಾತ್ರೆ ನಡೆಯುವುದು ವಿಶೇಷ. ಈ ಬಾರಿ 60 ವರ್ಷ ಮೇಲ್ಪಟ್ಟವರಿಗೆ 10 ವರ್ಷದ ಒಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ ದೇವಸ್ಥಾನದಲ್ಲಿ ಪ್ರವೇಶಕ್ಕೆ ಅನುಮತಿ ನೀಡಲಾಗಿಲ್ಲ. ವಾಹನ ನಿಲುಗಡೆಗೂ ಅವಕಾಶವಿಲ್ಲ. ನಂದಿಹಳ್ಳಿಯಿಂದ ಭಕ್ತರು ಕಾಲ್ನಡಿಗೆಯಲ್ಲಿ ತೆರಳಬೇಕಾಗಿದೆ. ದೇವಸ್ಥಾನದ ಆವರಣದಲ್ಲಿ ಅಂಗಡಿ, ಹೋಟೆಲ್ ಗಳಿಗೆ ಅವಕಾಶ ನೀಡಿಲ್ಲ.
ಡಿ.1ರಂದು ನಡೆಯುವ, ದೇವಸ್ಥಾನದ ಮೇಲೆ ವಿಶೇಷ ಪಟ ಏರಿಸುವ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಲು ವಿಜಯ ಸರ್ಕಲ್, ಪುರಸಭೆ ಬಸ್ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಿರುವುದಾಗಿ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಬಳ್ಳಾರಿಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು: ನ.29ರ ವರದಿಯಂತೆ ಬಳ್ಳಾರಿಯಲ್ಲಿ ಇದುವರೆಗೂ ಒಟ್ಟು 38232 ಕೊರೊನಾ ಪ್ರಕರಣಗಳು ದಾಖಲಾಗಿವೆ. 37406 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 245 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಒಟ್ಟು 581 ಮಂದಿ ಸಾವನ್ನಪ್ಪಿದ್ದಾರೆ.