ಬಳ್ಳಾರಿ; ತಿರುವು ಪಡೆದುಕೊಂಡ ಡಿವೈಎಸ್ ಪಿ ರಾಜೀನಾಮೆ ವಿಚಾರ!
ಬಳ್ಳಾರಿ, ಅಕ್ಟೋಬರ್ 24: ಬಳ್ಳಾರಿ ಜಿಲ್ಲೆಯ ಹಂಪಿ ಡಿವೈಎಸ್ ಪಿ ಕಾಶಿಗೌಡ ರಾಜೀನಾಮೆ ನೀಡಿದ್ದು, ಸಭೆಯೊಂದರಲ್ಲಿ ಐಜಿಪಿ ನಂಜುಂಡಸ್ವಾಮಿ ಮತ್ತು ಡಿವೈಎಸ್ಪಿ ನಡುವೆ ಮಾತಿನ ಚಕಮಕಿ ನಡೆದು ಈ ಸಂಬಂಧ ಡಿವೈಎಸ್ಪಿ ಕಾಶಿಗೌಡ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ಇದೀಗ ರಾಜೀನಾಮೆ ವಿಚಾರವಾಗಿ ಜಿಲ್ಲಾ ಎಸ್ ಪಿ ಸೈದುಲ್ಲಾ ಅದಾವತ್ ಪ್ರತಿಕ್ರಿಯೆ ನೀಡಿದ್ದಾರೆ.
"ನನಗೆ ಅವರು ರಾಜೀನಾಮೆ ನೀಡಿಲ್ಲ. ಅವರು ಶಿಷ್ಟಾಚಾರ ಅನುಸರಿಸಿ ರಾಜೀನಾಮೆ ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.
ಹಂಪಿ ಡಿವೈಎಸ್ಪಿ ರಾಜೀನಾಮೆ: ಐಜಿಪಿ ನಂಜುಂಡಸ್ವಾಮಿ ವಿರುದ್ಧ ಆಡಿಯೋ ವೈರಲ್
ಈ ಕುರಿತು ಸಂಪೂರ್ಣ ಮಾಹಿತಿ ನೀಡಿರುವ ಅವರು, "ಹಂಪಿಯಲ್ಲಿ ಬಳ್ಳಾರಿ ವಲಯದ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆಯನ್ನು ಅ. 22ರಂದು ನಡೆಸಲಾಗಿತ್ತು. ಆ ಸಭೆಯಲ್ಲಿ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಎಸ್ಪಿಗಳು, ಡಿವೈಎಸ್ಪಿ, ಸಿಪಿಐಗಳು ಭಾಗಿಯಾಗಿದ್ದರು. ಅಕ್ರಮ ಚಟುವಟಿಕೆ ಸಲುವಾಗಿಯೇ ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿಯವರು ಎಲ್ಲಾ ಹಂತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ನಿಜ. ನನ್ನನ್ನೂ ಒಳಗೊಂಡಂತೆ ಎಲ್ಲಾ ಹಂತದ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದ್ದಾರೆ. ಆದರೆ ಪ್ರತ್ಯೇಕವಾಗಿ ಹಂಪಿಯ ಡಿವೈಎಸ್ಪಿ ಕಾಶಿಯವರನ್ನೇ ಗುರಿಯನ್ನಾಗಿಸಿಕೊಂಡು ಹೇಳಿಲ್ಲ" ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
"ನನಗೆ ರಾಜೀನಾಮೆ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವಂತೆ ಯಾವ ಘಟನೆಯೂ ನಡೆದಿಲ್ಲ. ಜೊತೆಗೆ ಕಾಶೀಗೌಡ ಅವರು ಯಾವುದೇ ರೀತಿ ಅಧಿಕೃತವಾಗಿ ರಾಜೀನಾಮೆ ಕೊಟ್ಟಿಲ್ಲ. ಒಂದೊಮ್ಮೆ ಅಧಿಕೃತವಾಗಿ ರಾಜೀನಾಮೆ ಕೊಟ್ಟಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ.