ಬಳ್ಳಾರಿಯಲ್ಲಿ ಗಣಿ ಮಾಲೀಕರ ಮಗ ನಿಗೂಢವಾಗಿ ನಾಪತ್ತೆ
ಬಳ್ಳಾರಿ, ನವೆಂಬರ್ 20: ಗಣಿನಾಡು ಬಳ್ಳಾರಿಯಲ್ಲಿ ಗಣಿ ಮಾಲೀಕರ ಮಗ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ನಾಪತ್ತೆ ಪ್ರಕರಣ ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.
ಕಳೆದ 24 ದಿನಗಳಿಂದ ಹೊಸಪೇಟೆ ಮೂಲದ ಬನಶಂಕರಿ ಮೈನ್ಸ್ ಮಾಲೀಕನ ಮಗ ಪ್ರದೀಪ್ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಕಳೆದ ತಿಂಗಳ 26ರಂದು ಮಧ್ಯಾಹ್ನ 3.30ರ ಸುಮಾರಿಗೆ ಮನೆಯಿಂದ ಹೊರಟಿದ್ದ ಪ್ರದೀಪ್ ಮನೆಗೆ ವಾಪಸ್ಸಾಗಿಲ್ಲ. ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಯುವಕ 24 ದಿನಗಳು ಕಳೆದರೂ ಮರಳಿಲ್ಲ. ಆತನ ಸುಳಿವು ಕೂಡ ದೊರೆತಿಲ್ಲ.
13 ವರ್ಷದಿಂದ ಪ್ರೀತಿಸಿ ಮದುವೆ ದಿನವೇ ನಾಪತ್ತೆಯಾದ ವರ
ಯುವಕನ ನಾಪತ್ತೆ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿವೆ. ಮತ್ತೊಬ್ಬ ಗಣಿಯ ಮಾಲೀಕರ ಮಗಳ ಜೊತೆಯಲ್ಲಿ ಪ್ರದೀಪ್ ವ್ಯವಹಾರ ಹೊಂದಿದ್ದು, ಅವರೇ ಮಗನನ್ನು ಅಪಹರಣ ಮಾಡಿಸಿದ್ದಾರೆ ಎನ್ನುವ ಆರೋಪವನ್ನು ಯುವಕನ ಕುಟುಂಬಸ್ಥರು ಮಾಡುತಿದ್ದಾರೆ. ಈ ಸಂಬಂಧ ಹೊಸಪೇಟೆಯ ಚಿತ್ತವಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಪ್ರಕರಣ ದಾಖಲಾಗಿ ತಿಂಗಳು ಕಳೆಯುತ್ತಿದ್ದರೂ ಪೊಲೀಸರು ಮಗನನ್ನು ಹುಡುಕಿ ಕೊಡುತ್ತಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರಿಂದ ಕೇಸ್ ಮುಚ್ಚುವ ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ.