ಬಳ್ಳಾರಿ ಎಚ್ಎಲ್ಸಿ ಕಾಲುವೆಗೆ ಬಾಗಿನ ಅರ್ಪಿಸಿದ ಸೋಮಶೇಖರ ರೆಡ್ಡಿ
ಬಳ್ಳಾರಿ, ಆಗಸ್ಟ್ 03: ನಗರದ ಹೊರವಲಯದಲ್ಲಿರುವ ಎಚ್ಎಲ್ಸಿ ಕಾಲುವೆಗೆ ಶಾಸಕ ಸೋಮಶೇಖರ ರೆಡ್ಡಿ ಅವರು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಪಕ್ಷದ ಕಾರ್ಯಕರ್ತರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಮೊದಲಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಇದೇ ರೀತಿ ಮಳೆಯಾಗಲಿ. ಜಿಲ್ಲೆಯ ರೈತಾಪಿ ವರ್ಗ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಸಮೃದ್ಧಿಯ ಬೆಳೆ ಬೆಳೆಯುವಂತಾಗಲಿ ಎಂದು ಆಶಿಸಿದರು. ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಕೂಡ ಸದಾ ಹೀಗೆ ಭರ್ತಿಯಾಗಲಿ. ಬಳ್ಳಾರಿ ಮಹಾನಗರಕ್ಕೆ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಆ ವರುಣ ದೇವ ನೋಡಿಕೊಳ್ಳಬೇಕು ಎಂದು ಪ್ರಾರ್ಥಿಸಿದರು.
ಧಮ್ ಇದ್ರೆ ಒಬ್ಬರೇ ಬಳ್ಳಾರಿಗೆ ಬನ್ನಿ ಎಂದು ಜಮೀರ್ ಗೆ ರೆಡ್ಡಿ ಸವಾಲ್
ಮಹಾನಗರ ಪಾಲಿಕೆ ಆಯುಕ್ತ ತುಷಾರಮಣಿ, ಮಾಜಿ ಸದಸ್ಯರಾದ ಎಸ್.ಮಲ್ಲನಗೌಡ, ತೂರ್ಪು ಯಲ್ಲಪ್ಪ, ಶ್ರೀನಿವಾಸ ಮೋತ್ಕರ, ಶಾಸಕರ ಆಪ್ತ ಕಾರ್ಯದರ್ಶಿ ವೀರಶೇಖರ ರೆಡ್ಡಿ ಇದ್ದರು.
ಸಿಎಂಗಾಗಿ ಶಾಸಕ ಸೋಮಶೇಖರ ರೆಡ್ಡಿ ಪ್ರಾರ್ಥನೆ: ಇದೇ ಸಂದರ್ಭ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾ ಸೋಂಕಿನಿಂದ ಬೇಗ ಗುಣಮುಖರಾಗಿ ಬರಲಿ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಪ್ರಾರ್ಥಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತೂ ಮಾತನಾಡಿ, "ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿರುವುದು ನಮಗೆಲ್ಲ ಖುಷಿ ತಂದಿದೆ. ಅಂಜನಾದ್ರಿ ಬೆಟ್ಟದಲ್ಲಿ ವಾಯು, ಸುಗ್ರೀವ, ರಾಮನೂ ನೆಲೆಸಿದ್ದ ಎಂಬ ಪ್ರತೀತಿಯಿದೆ. ಹೀಗಾಗಿ, ಅಲ್ಲಿಂದ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಒಂದು ಕಲ್ಲನ್ನು ಒಯ್ಯಲಾಗಿದೆ. ಹೀಗಾಗಿ, ರಾಮಮಂದಿರದಲ್ಲೂ ಅಂಜನಾದ್ರಿ ಬೆಟ್ಟದ ಕಲ್ಲನ್ನು ನಾವು ನೋಡಬಹುದಾಗಿದೆ" ಎಂದಿದ್ದಾರೆ.