ಪಾಕ್ ಪರ ಘೋಷಣೆ; ಸೋಮಶೇಖರ್ ರೆಡ್ಡಿ, ಶ್ರೀರಾಮುಲು ವಾಗ್ದಾಳಿ
ಬಳ್ಳಾರಿ, ಫೆಬ್ರವರಿ 21: ನಿನ್ನೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಯುವತಿ ಅಮೂಲ್ಯ ವಿರುದ್ಧ ಬಿಜೆಪಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
"ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ಪಾಕಿಸ್ತಾನದಲ್ಲಿ ಬಿಟ್ಟು ಬರಬೇಕು. ಅಲ್ಲಿ ಬೇಕಾದರೆ ಪಾಕಿಸ್ತಾನ ಜಿಂದಾಬಾದ್ ಎನ್ನಲಿ. ರಾಜ್ಯ, ಕೇಂದ್ರ ಸರ್ಕಾರ ಈ ಕೆಲಸ ಮಾಡಲಿ. ಪಾಕಿಸ್ತಾನ್ ಜಿಂದಾಬಾದ್ ಎಂದ ಯುವತಿ ಮೇಲೆ ದೇಶ ದ್ರೋಹ ಕೇಸ್ ಹಾಕಿ. ಭಾರತ್ ಮಾತಾಕಿ ಜೈ ಅನ್ನೋವರೆಗೂ ಹೊರಗೆ ಬಿಡಬೇಡಿ" ಎಂದು ಆಗ್ರಹಿಸಿದ್ದಾರೆ. "ಕೆಲ ದೇಶದ್ರೋಹಿಗಳು ಆಕೆಗೆ ಪ್ರಚೋದನೆ ಕೊಟ್ಟು ಪಾಕಿಸ್ತಾನ ಜಿಂದಾಬಾದ್ ಎನ್ನಿಸಿದ್ದಾರೆ" ಎಂದು ಸೋಮಶೇಖರ್ ರೆಡ್ಡಿ ದೂರಿದ್ದಾರೆ.
ಇಲ್ಲಿ ಅನ್ನ ತಿಂದು ಪಾಕ್ ಪರ ಘೋಷಣೆ ಕೂಗ್ತಾರೆ ಎಂದು ಗುಡುಗಿದ ಶೋಭಾ
ನಾಯಕರನ್ನು ಮೊದಲು ಬಂಧಿಸಬೇಕು: "ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ಮೊದಲು ಪಾಕಿಸ್ತಾನಕ್ಕೆ ಕಳಿಸಬೇಕು. ನಂತರ ಅವರ ಪಕ್ಕದಲ್ಲಿ ಕುಳಿತು ಅವರು ಆಡುವ ಮಾತಿಗೆ ಕುಮ್ಮಕ್ಕು ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಪ್ರತಿಕ್ರಿಯಿಸಿದ್ದಾರೆ ಸಚಿವ ಶ್ರೀರಾಮುಲು.
"ಹುಬ್ಬಳ್ಳಿಯಲ್ಲಿ ಕೆಲ ಯುವಕರು ಪಾಕಿಸ್ತಾನಕ್ಕೆ ಜೈ ಎಂದಿದ್ದರು. ಈಗ ಬೆಂಗಳೂರಿನಲ್ಲಿ ಅಮೂಲ್ಯ ಎನ್ನುವ ಯುವತಿ ಮತ್ತೆ ಈ ರೀತಿ ಘೋಷಣೆ ಕೂಗಿದ್ದಾರೆ. ನಾವ್ಯಾರೂ ಕೈ ಕಟ್ಟಿ ಕುಳಿತಿಲ್ಲ. ಈ ರೀತಿ ಹೇಳಿಕೆ ನೀಡುವವರಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಓಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ನಾಯಕರು ಈ ರೀತಿ ಹೇಳಿಕೆ ನೀಡುವವರಿಗೆ ಬೆಂಬಲ ನೀಡುತ್ತಾರೆ. ಹೀಗೆ ಮಾಡುವ ಕಾಂಗ್ರೆಸ್ ವಿರುದ್ಧ ನಾವು ಕೈ ಕಟ್ಟಿ ಕೂರಬೇಕಾ" ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.