ಬಳ್ಳಾರಿಯಲ್ಲಿ ಹಿರಿಯ ರಂಗಕರ್ಮಿ ಸುಭದ್ರಾ ಮನ್ಸೂರ್ ನಿಧನ
ಬಳ್ಳಾರಿ, ಜುಲೈ 16: ಖ್ಯಾತ ಹಿರಿಯ ಗಾಯಕಿ ಹಾಗೂ ರಂಗಕರ್ಮಿ ಸುಭದ್ರಾ ಮನ್ಸೂರ್ (81) ಅವರು ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ.
Recommended Video
ತೀವ್ರ ಉಸಿರಾಟದ ಸಮಸ್ಯೆ ಹಾಗೂ ಹೃದಯಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಸುಭದ್ರಮ್ಮ ಅವರು ಬಳ್ಳಾರಿ ಕೌಲ್ ಬಜಾರ್ ನ ರೇಡಿಯೋ ಪಾರ್ಕ್ ಬಳಿಯಿರುವ ತಮ್ಮ ಸ್ವಗೃಹದಲ್ಲಿ ನಿನ್ನೆ ರಾತ್ರಿ 12.45ಕ್ಕೆ ವಿಧಿವಶರಾಗಿರುವುದಾಗಿ ತಿಳಿದುಬಂದಿದೆ.
ನಿರಂತರ ರಂಗ ಚಟುವಟಿಕೆಯಲ್ಲಿ ಮೈಸೂರು ರಂಗಾಯಣ
12ರ ವಯಸ್ಸಿನಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಸುಭದ್ರಮ್ಮ ಅವರು ಏಣಗಿ ಬಾಳಪ್ಪ ನಾಟಕ ಕಂಪನಿ, ಮಾಸ್ಟರ್ ಹಿರಣ್ಣಯ್ಯ ನಾಟಕ ಕಂಪನಿ, ಬಾಗಲಕೋಟೆ ಬೆನಕಪ್ಪ ನಾಟಕ ಕಂಪನಿ ಸೇರಿದಂತೆ ಹಲವು ಕಂಪನಿಗಳಲ್ಲಿ ಕಲಾಸೇವೆ ಗೈದಿದ್ದರು. ಮಹಾಭಾರತದ ದ್ರೌಪತಿ, ಹೆಮರೆಡ್ಡಿ ಮಲ್ಲಮ್ಮನ ಪಾತ್ರಗಳಲ್ಲಿ ಮಿಂಚಿ ಪ್ರೇಕ್ಷಕರ ಅಭಿಮಾನ ಗಳಿಸಿದ್ದರು.
50 ವರ್ಷಗಳ ಕಾಲ ನಿರಂತರ ರಂಗಸೇವೆಯಲ್ಲಿ ತೊಡಗಿಕೊಂಡಿದ್ದರು. ಇವರ ಕಲಾಸೇವೆಗೆ ಹಲವು ಪ್ರಶಸ್ತಿಗಳೂ ಸಂದಿವೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೃಷ್ಣದೇವರಾಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕನ್ನಡ ವಿಶ್ವವಿದ್ಯಾಲಯ ವತಿಯಿಂದ ನಾಡೋಜ ಪ್ರಶಸ್ತಿ, ಗುಬ್ಬಿವೀರಣ್ಣ ಪ್ರಶಸ್ತಿ, ಚಿಂದೋಡಿಲೀಲಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುನಸ್ಕಾರಗಳಿಗೆ ಭಾಜನರಾಗಿದ್ದರು.
ಅವರು ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 3.30ಕ್ಕೆ ಬಲಿಜ ಸಮುದಾಯದ ವಿಧಿವಿಧಾನದ ಪ್ರಕಾರ ಅಂತ್ಯಸಂಸ್ಕಾರ ನಡೆಯಲಿರುವುದಾಗಿ ತಿಳಿದುಬಂದಿದೆ.