ಹಂಪಿ ಉತ್ಸವ ಪ್ರಯುಕ್ತ ಶಿಲಾಶಿಲ್ಪ ಮತ್ತು ಕಾಷ್ಠಶಿಲ್ಪ ಶಿಬಿರ
ಬಳ್ಳಾರಿ, ಅಕ್ಟೋಬರ್ 17 : ನವೆಂಬರ್ 3ರಿಂದ 5ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಶಿಲಾಶಿಲ್ಪ ಶಿಬಿರ ಮತ್ತು ಕಾಷ್ಠ ಶಿಲ್ಪ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಅ.18ರಿಂದ 28ರವರೆಗೆ 11 ದಿನಗಳ ಕಾಲ ಹಂಪಿಯ ಶ್ರೀ ಅಮರಶಿಲ್ಪಿ ಜಕಣಾಚಾರ್ಯ ವೇದಿಕೆಯಲ್ಲಿ ಈ ಶಿಬಿರ ನಡೆಯಲಿದ್ದು, ಬೆಂಗಳೂರು, ಮೈಸೂರು, ಧಾರವಾಡ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 45ಕ್ಕೂ ಹೆಚ್ಚು ಪ್ರಧಾನ ಹಾಗೂ ಸಹಾಯಕ ಶಿಲ್ಪ ಕಲಾವಿದರು ಮತ್ತು ಕಾಷ್ಟ ಶಿಲ್ಪ ಕಲಾವಿದರು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.[ನವೆಂಬರ್ 3ರಿಂದ ಹಂಪಿ ಉತ್ಸವ : ಸಚಿವ ಸಂತೋಷ್ ಲಾಡ್]
ಹಂಪಿ ಉತ್ಸವದ ಶಿಲ್ಪ ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಶಿಲ್ಪ ಕಲಾವಿದರು 10 ದಿನದ ಅವಧಿಯಲ್ಲಿ ಸಂಪೂರ್ಣ ಕೆಲಸವನ್ನು ಮುಗಿಸಲಿದ್ದಾರೆ. ಶಿಲ್ಪಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಶಿಲ್ಪ ಮತ್ತು ಕಾಷ್ಟ ಶಿಲ್ಪ ಕಲಾವಿದರಿಗೆ ತರಲಿದ್ದು, ಸಾರಿಗೆ ವೆಚ್ಚವನ್ನು ಸರ್ಕಾರದಿಂದ ಕೊಡಲಾಗುತ್ತದೆ. ಹೊಸಪೇಟೆಯ ಶಿಲ್ಪಿ ಕೆ.ಸುರೇಶ ಅವರನ್ನು ಶಿಬಿರದ ನಿರ್ದೇಶಕರನ್ನಾಗಿ ನಿಯುಕ್ತಿಗೊಳಿಸಲಾಗಿದೆ. [ಬಳ್ಳಾರಿ ಎಸ್ ಐ ಗಾಯತ್ರಿ ಫೇಸ್ ಬುಕ್ ನಲ್ಲಿ ಬರೆದಿದ್ದೇನು?]
ಅಕ್ಟೋಬರ್ 18ರಂದು ಬೆಳಗ್ಗೆ 11.30ಕ್ಕೆ ಶಿಬಿರದ ಉದ್ಘಾಟನೆ ನಡೆಯಲಿದ್ದು, ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಅವರು ಚಾಲನೆ ನೀಡಲಿದ್ದಾರೆ.[ಹಂಪಿ ಉತ್ಸವಕ್ಕೆ ಹೋಗುವುದು ಹೇಗೆ? ನೆಲೆಸುವುದು ಎಲ್ಲಿ?]
ಜಿಪಂ ಹಂಗಾಮಿ ಅಧ್ಯಕ್ಷೆ ಪಿ.ದೀನಾ ಮಂಜುನಾಥ, ಸಂಸದರಾದ ಬಿ. ಶ್ರೀರಾಮುಲು, ಕರಡಿ ಸಂಗಣ್ಣ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಪಿ.ಟಿ.ಪರಮೇಶ್ವರ ನಾಯಕ, ಈ.ತುಕಾರಾಂ, ಅನಿಲ್ ಲಾಡ್, ಟಿ.ಎಚ್.ಸುರೇಶಬಾಬು, ಬಿ.ನಾಗೇಂದ್ರ, ಎಲ್.ಬಿ.ಪಿ.ಭೀಮಾನಾಯ್ಕ, ಬಿ.ಎಂ.ನಾಗರಾಜ, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ್, ವೆಂಕಟರಾವ್ ಘೋರ್ಪಡೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.[ಹಂಪಿ- ವಿಜಯನಗರ ಬೇರೆ ಬೇರೆ ಹೇಗೆ?]
ಹೊಸಪೇಟೆ ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ, ಹಂಪಿ ಗ್ರಾಪಂ ಅಧ್ಯಕ್ಷೆ ಎಚ್.ಭೀಮವ್ವ, ಜಿಪಂ ಸದಸ್ಯ ಪ್ರವೀಣಸಿಂಗ್, ತಾಪಂ ಸದಸ್ಯ ಪಾಲಪ್ಪ ಮತ್ತಿತರರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಶಿಬಿರದ ಸಮಾರೋಪ ಸಮಾರಂಭವು ಅ.28ರಂದು ಬೆಳಗ್ಗೆ 11.30ಕ್ಕೆ ಹಂಪಿಯ ಶ್ರೀ ಶಿವರಾಮ ಅವಧೂತ ಮಠದ ಮುಂಭಾಗ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ರಾಜೀನಾಮೆ ನೀಡಿದ್ದೇಕೆ? ಅನುಪಮಾ ಶೆಣೈ ಪತ್ರದಿಂದ ಬಹಿರಂಗ]