ಭ್ರಷ್ಟಾಚಾರದ ವಿರುದ್ಧ ಬಳ್ಳಾರಿ-ಬೆಂಗಳೂರು ಪಾದಯಾತ್ರೆ
ಬಳ್ಳಾರಿ, ಮಾರ್ಚ್ 22 : ಬಳ್ಳಾರಿಯ ಆರ್ಟಿಐ ಕಾರ್ಯಕರ್ತ, ಅಣ್ಣಾ ಫೌಂಡೇಶನ್ನ ಸಂಚಾಲಕ ರಾಜಶೇಖರ ಮುಲಾಲಿ ಅವರ ನೇತೃತ್ವದ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ, ಭ್ರಷ್ಟಾಚಾರ ಮುಕ್ತ ಚುನಾವಣೆಗಾಗಿ' ಬಳ್ಳಾರಿಯಿಂದ ಬೆಂಗಳೂರು' ಪಾದಯಾತ್ರೆ ನಾಳೆ ಮಾರ್ಚ್ 23ರ ಶುಕ್ರವಾರ ನಗರದ ಎಚ್ಆರ್ಜಿ (ಮೋತಿ) ವೃತ್ತದಿಂದ ಪ್ರಾರಂಭ ಆಗಲಿದೆ.
ರಾಜಶೇಖರ ಮುಲಾಲಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ಜಿಲ್ಲಾಧಿಕಾರಿ ಡಾ.ರಾಂಪ್ರಸಾತ್, ವಿ.ಮನೋಹರ್, ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್, ನಿವೃತ್ತ ಪ್ರಾಧ್ಯಾಪಕ ವಸ್ತ್ರದ್, ಕಮ್ಮರಚೇಡು ಕಲ್ಯಾಣ ಶ್ರೀಗಳು, ನಂದಿಪುರ ಮಹೇಶ್ವರ ಶ್ರೀಗಳು ಸೇರಿದಂತೆ ರೈತ ಮುಖಂಡರು ಇವರ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.
ದಿಟ್ಟ ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಸಂದರ್ಶನ
ಮಾರ್ಗಮಧ್ಯೆ ಬಳ್ಳಾರಿ ಜಿಲ್ಲೆಯ ಗಡಿ ಮತ್ತು ಚಿತ್ರದುರ್ಗ ಜಿಲ್ಲೆಯ ಗಡಿಯ ಮಧ್ಯದ ಆರು ಕಿಮೀ ಮಾರ್ಗವು ಆಂಧ್ರಕ್ಕೆ ಸೇರಿದ್ದಾಗಿರುವ ಕಾರಣ ಆಡಳಿತಾತ್ಮಕ ಮತ್ತು ತಾಂತ್ರಿಕ ಕಾರಣಗಳಿಗಾಗಿ ಈ ಅಂತರವನ್ನು ವಾಹನದಲ್ಲಿಯೇ ಕ್ರಮಿಸಲಾಗುತ್ತದೆ. ಮುಂದಿನ ಮಾರ್ಗವನ್ನು ನಡಿಗೆ ಮೂಲಕವೇ ಕ್ರಮಿಸಲಾಗುತ್ತದೆ ಎಂದರು.
ಹಲಕುಂದಿ, ಶಿರೇಕೊಳ, ರಾಂಪುರ, ಹಾನಗಲ್ಲು ಕ್ರಾಸ್, ಹಿರಿಯೂರು, ಶಿರಾ, ಚೆಳ್ಳಕೆರೆ, ನೆಲಮಂಗಲ, ಬೆಂಗಳೂರು ಗ್ರಾಮೀಣ, ಯಶವಂತಪುರ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳು ನಡೆಯಲಿವೆ. ಏಪ್ರಿಲ್ 3 ಅಥವಾ 4 ರಂದು ಬೆಂಗಳೂರು ತಲುಪುವ ನಿರೀಕ್ಷೆ ಇದೆ. ಸಮಾರೋಪ ಸಮಾರಂಭದಲ್ಲಿನಿವೃತ್ತ ನ್ಯಾಯಾಧೀಶ, ವಿಶ್ರಾಂತ ಲೋಕಾಯುಕ್ತ ಸಂತೋಷ್ ಹೆಗಡೆ, ಸ್ವಾತಂತ್ರ್ಯ ಹೋರಾಟಗಾರ ದೊರೈಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ, ಸಾರ್ವಜನಿಕ ಸಭೆಯ ನಂತರ ರಾಜ್ಯಪಾಲರನ್ನು ಭೇಟಿ ಮಾಡಿ, ನನ್ನ ಪಾದಯಾತ್ರೆಯ ಜಾಗೃತಿ ಸಮಾವೇಶಗಳ ಮಾಹಿತಿ ನೀಡುವೆ ಎಂದರು.
ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ತು ಕೊಟ್ಯಂತರ ಹಣ
ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು 900ಕ್ಕೂ ಹೆಚ್ಚಿನ ಜನರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಮಾರ್ಗಮಧ್ಯೆ ಅನೇಕರು ಹೆಜ್ಜೆ ಹಾಕಲಿದ್ದಾರೆ. ನಮ್ಮ ಈ ಪ್ರಯತ್ನವನ್ನು ಕೆಲ ಸಂಘಟನೆಗಳು ಸ್ವಾಗತಿಸಿ, ಅಭಿನಂದಿಸಿದ್ದು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಆಸಕ್ತಿ ತೋರಿವೆ. ಆಸಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಅಷ್ಟೇ, ಅವರ ಊಟ, ವಸತಿ ವ್ಯವಸ್ಥೆಯನ್ನು ಪಾದಯಾತ್ರೆಯ ಸಂಚಾಲಕರೇ ಭರಿಸಲಿದ್ದಾರೆ. ನಾವು, ಯಾರಿಂದಲೂ ಏನನ್ನೂ ದೇಣಿಗೆಯಾಗಿ, ಕೊಡುಗೆಯಾಗಿ, ದಾನವಾಗಿ ಪಡೆಯುತ್ತಿಲ್ಲ, ಸಂಗ್ರಹಿಸುತ್ತಿಲ್ಲ ಎಂದು ಮಾಹಿತಿ ನೀಡಿದರು.
ಪಾದಯಾತ್ರೆ ಉದ್ಘಾಟನೆಯ ಸಂದರ್ಭದಲ್ಲಿ ವ್ಯಕ್ತಿಪರಿಚಯ, ಮುಂದಿನ ಹೋರಾಗಳನ್ನು ಒಳಗೊಂಡ ಮಾಹಿತಿಯ ಸಿಡಿಯನ್ನು ಬಿಡುಗಡೆ ಮಾಡಲಾಗುತ್ತದೆ. ಓರ್ವ ನಿವೃತ್ತ ಐಪಿಎಸ್ ಅಧಿಕಾರಿ 300 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಗಳಿಸಿದ್ದಾನೆ. ಈ ಕುರಿತಾದ ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಮಾರ್ಗಮಧ್ಯದಲ್ಲಿ ಭ್ರಷ್ಟಾಚಾರದ ವಿವಿಧ ದಾಖಲೆಗಳನ್ನು ಬಿಡುಗಡೆ ಮಾಡಲು ಕಾನೂನಿನ ತಜ್ಞರ ಸಲಹೆಯನ್ನು ಕೋರಿದ್ದೇನೆ. ಕಾನೂನು ತಜ್ಞರ ಒಪ್ಪಿಗೆಯ ನಂತರ, ದಾಖಲೆಗಳನ್ನು ಬಿಡುಗಡೆ ಮಾಡುವೆ ಎಂದರು.
ಎಚ್.ವೈ. ಮೇಟಿ ಪ್ರಕರಣದ ವರದಿ ಮಾಡಿದ ಪತ್ರಕರ್ತರನ್ನು ರಾಜ್ಯಸರ್ಕಾರ ವಿಚಾರಣೆ ನೆಪದಲ್ಲಿ ತೊಂದರೆ ನೀಡಿದೆ. ಪತ್ರಕರ್ತರಿಗೆ ತೊಂದರೆ ಆದಲ್ಲಿ ನಾನು ತೀವ್ರವಾಗಿ ಪ್ರತಿಭಟಿಸುವೆ. ಪತ್ರಕರ್ತರ ರಕ್ಷಣೆ ನಮ್ಮ ಹೋರಾಟದ ಒಂದು ಭಾಗ. ಅನೇಕ ಪತ್ರಕರ್ತರು ಪಾದಯಾತ್ರೆಯಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಲು ಆಸಕ್ತಿ ತೋರಿದ್ದಾರೆ ಎಂದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಪಾದಯಾತ್ರೆಯ ಸಂಪೂರ್ಣ ಮಾಹಿತಿಯನ್ನು ಫೇಸ್ಬುಕ್ ಮತ್ತು ಯೂಟ್ಯೂಬ್ ಮಾಹಿತಿ ಜಾಲದಲ್ಲಿ ಲೈವ್ ಆಗಿ ನೀಡಲಾಗುತ್ತದೆ. ಆಸಕ್ತರು ಭೇಟಿ ನೀಡಿ, ನಮ್ಮನ್ನು ಯಾವುದೇ ಸಂದರ್ಭದಲ್ಲಿ ಸಂಪರ್ಕ ಮಾಡಬಹುದಾಗಿದೆ. ನಮ್ಮ ಯಾತ್ರೆಯ ಮಾಹಿತಿ ಪಡೆಯಬಹುದಾಗಿದೆ ಎಂದರು. ಪಾದಯಾತ್ರೆಯ ಸಂಚಾಲಕ ಬದ್ರಿನಾಥ್, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಸಂಸ್ಥಾಪಕ ಅಧ್ಯಕ್ಷ, ಬೆಂಗಳೂರಿನ ಶ್ರೀನಿವಾಸ ಗೌಡ, ಜಿ.ಎಲ್. ಹನುಮಂತರೆಡ್ಡಿ, ನಿವೃತ್ತ ಮೇಜರ್ ಕೆ. ಲಕ್ಷ್ಮಣ, ಕೆ.ಎಲ್. ನಾರಾಯಣ ಇನ್ನಿತರರು ಈ ಸಂದರ್ಭದಲ್ಲಿದ್ದರು.