ಒಂದೇ ಒಂದು ಕರೆಗೆ ಬಂತು ಔಷಧಿ: ಉಳಿಯಿತು ಬಳ್ಳಾರಿ ಕ್ಯಾನ್ಸರ್ ರೋಗಿ ಜೀವ
ಬಳ್ಳಾರಿ, ಏಪ್ರಿಲ್ 29: ಬಳ್ಳಾರಿಯ ತುಂಬೆಲ್ಲಾ ಹುಡುಕಾಡಿದರೂ ಸಿಗದ ಔಷಧಿಯೊಂದು ಕ್ಯಾನ್ಸರ್ ರೋಗಿಯೊಬ್ಬರಿಗೆ ಬರೀ ಒಂದು ಫೋನ್ ಕರೆಯ ಮೂಲಕ ಸಕಾಲದಲ್ಲಿ ದೊರೆತು ಅತ್ಯಮೂಲ್ಯ ಜೀವ ಉಳಿಸಿದೆ.
Recommended Video
ಹೌದು, ಈ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಅದ್ಹೇಗೆ ಇವರಿಗೆ ಔಷಧಿ ದೊರಕಿತು ಅಂತ ನಿಮ್ಮ ಪ್ರಶ್ನೆಯಾದರೆ, ಬೆಂಗಳೂರು ಉತ್ತರ ಪೂರ್ವ ವಲಯದ ಕಚೇರಿಯಲ್ಲಿ ಸ್ಥಾಪಿಸಿದ ಸಹಾಯವಾಣಿಯೇ ಉತ್ತರವಾಗಿದೆ. ಈ ಸಹಾಯವಾಣಿಗೆ ನಿನ್ನೆ ಸಂಜೆ ಕರೆ ಮಾಡಿದ ಬಳ್ಳಾರಿಯ ಕ್ಯಾನ್ಸರ್ ರೋಗಿಯೊಬ್ಬರಿಗೆ ಇಂದು ಮಧ್ಯಾಹ್ನದೊಳಗೆ ಬೆಂಗಳೂರಿನಿಂದ ಔಷಧಿ ತಲುಪಿದೆ.
ಬೆಂಗಳೂರಿನಿಂದ ಬಳ್ಳಾರಿಗೆ ಔಷಧಿ
ಬೆಂಗಳೂರಿನಿಂದ ಬಳ್ಳಾರಿಗೆ ತಮ್ಮ ಮೋಟಾರ್ ಸೈಕಲ್ಗಳ ಮೂಲಕ ಆಗಮಿಸಿದ ಬೆಂಗಳೂರು ರೈಡ್ಸ್ ರಿಪಬ್ಲಿಕ್ ಮೋಟಾರ್ ಸೈಕಲ್ ಕ್ಲಬ್ನ ಮೋಹನ್ ಮಲ್ಲಪ್ಪ, ಶ್ರೀಧರ್ ಮತ್ತು ಮೋಹನ್ ಕೃಷ್ಣ ಅವರು ಬಳ್ಳಾರಿಯ ಕ್ಯಾನ್ಸರ್ ರೋಗಿ ಮನೆಗೆ ನೇರವಾಗಿ ತೆರಳಿ ಅತ್ಯಮೂಲ್ಯ ಜೀವ ಉಳಿಸುವ ಔಷಧಿ ನೀಡಿ ಧನ್ಯತೆ ಮೆರೆದಿದ್ದಾರೆ. ಔಷಧಿ ಸ್ವೀಕರಿಸಿದ ಕ್ಯಾನ್ಸರ್ ರೋಗಿ, ಜೀವಕ್ಕೆ ಅಗತ್ಯವಿದ್ದ ಔಷಧಿ ಒದಗಿಸಿಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಐದು ವರ್ಷದ ಮಗುವಿಗೆ ರೈಲಿನಲ್ಲಿ ಔಷಧಿ ತರಿಸಿದ ಕೇಂದ್ರ ಸಚಿವ
ತಂಡವನ್ನು ಶ್ಲಾಘಿಸಿದ ಐಜಿಪಿ
ನಂತರ ಇಲ್ಲಿನ ಐಜಿಪಿ ನಂಜುಂಡಸ್ವಾಮಿ ಅವರನ್ನು ಭೇಟಿ ಮಾಡಿ ಬೆಂಗಳೂರಿಗೆ ಮರಳಿದ್ದಾರೆ. ಐಜಿಪಿ ನಂಜುಂಡಸ್ವಾಮಿ ಅವರು ಸಹ ರೈಡ್ಸ್ ರಿಪಬ್ಲಿಕ್ ಮೋಟಾರ್ಸೈಕಲ್ ಕ್ಲಬ್ ಕರ್ನಾಟಕ ಪೊಲೀಸ್ ತಂಡದೊಂದಿಗೆ ಮಾಡುತ್ತಿರುವ ಸೇವಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸೇವೆಗೆ ಜೊತೆಯಾದ ತಂಡ
ಬೆಂಗಳೂರು ಉತ್ತರ ಪೂರ್ವ ವಲಯದ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು, (ಸಹಾಯವಾಣಿ ಸಂಖ್ಯೆ: 080-49778888, 08049777888, 08042240048) ಈ ಸಹಾಯವಾಣಿಗೆ ಕ್ಯಾನ್ಸರ್ ರೋಗಿ ತಮ್ಮ ಔಷಧಿಯ ಅಗತ್ಯತೆ ಕುರಿತು ಕೇಳಿಕೊಂಡಿದ್ದರು. ಕರ್ನಾಟಕ ಪೊಲೀಸ್ ಹಾಗೂ ರೈಡ್ಸ್ ರಿಪಬ್ಲಿಕ್ ಮೋಟಾರ್ ಸೈಕಲ್ ಕ್ಲಬ್ ಬೆಂಗಳೂರು ಸೇವೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿದೆ.
ಎಸ್ಕಾರ್ಟ್ ವಾಹನದಲ್ಲಿ ಮಹಿಳೆಗೆ ಮಾತ್ರೆ ತಲುಪಿಸಿದ ಉಪ ಸಭಾಪತಿ
ಸಕಾಲಕ್ಕೆ ಔಷಧಿ ತಲುಪಿಸುವ ಕಾರ್ಯ
ಸಹಾಯವಾಣಿಗೆ ಕರೆ ಬಂದಾಗ ರೋಗಿಗಳಿಗೆ ಅತ್ಯವಶ್ಯಕವಿರುವ ಔಷಧಿ ಹೆಸರು ಬರೆದುಕೊಂಡು, ನಂತರ ತಮ್ಮಲ್ಲಿಯೇ ಇರುವ ವೈದ್ಯರ ತಂಡವೊಂದಕ್ಕೆ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಈ ಔಷಧಿ ಬೆಂಗಳೂರು ಹೊರತುಪಡಿಸಿ ಬೇರೆಡೆ ಸಿಗುವುದಿಲ್ಲ ಎಂದು ವೈದ್ಯರ ತಂಡ ತಿಳಿಸಿದರೆ ರೈಡ್ಸ್ ರಿಪಬ್ಲಿಕ್ ಮೋಟಾರ್ ಸೈಕಲ್ ಕ್ಲಬ್ ಸದಸ್ಯರು ಸಂಬಂಧಿಸಿದ ರೋಗಿಯ ವಿಳಾಸಕ್ಕೆ ಔಷಧಿಯನ್ನು ಸಕಾಲದಲ್ಲಿ ತಲುಪಿಸುತ್ತಾರೆ ಎಂದು ಬೆಂಗಳೂರು ಉತ್ತರ ಪೂರ್ವ ವಲಯದ ಡಿಸಿಪಿ ಭೀಮಾಶಂಕರ ಗುಳೇದ ತಿಳಿಸಿದರು.
ಅದರಂತೆ ಬಳ್ಳಾರಿಯ ಕ್ಯಾನ್ಸರ್ ರೋಗಿ ಕೂಡ ನಮ್ಮ ಸಹಾಯವಾಣಿಗೆ ಕರೆ ಮಾಡಿದ್ದರು. ಅದನ್ನು ಪರಿಶೀಲಿಸಿ ಔಷಧಿಯನ್ನು ಕಳುಹಿಸಿಕೊಡಲಾಗಿದ್ದು, ಅವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.