ಬಳ್ಳಾರಿಯ ಖ್ಯಾತ ವೈದ್ಯ ಬಿ.ಕೆ.ಶ್ರೀನಿವಾಸ್ ಮೂರ್ತಿ ನಿಧನ
ಬಳ್ಳಾರಿ, ಡಿಸೆಂಬರ್ 3: ಬಳ್ಳಾರಿ ನಗರದ ಖ್ಯಾತ ವೈದ್ಯ ಡಾ.ಬಿ.ಕೆ.ಶ್ರೀನಿವಾಸ ಮೂರ್ತಿ(84) ಅವರು ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಗುರುವಾರ ಸಂಜೆ ಬಳ್ಳಾರಿ ನಗರಕ್ಕೆ ಅವರ ಪಾರ್ಥಿವ ಶರೀರ ತರಲಾಗುವುದು ಎಂದು ತಿಳಿದುಬಂದಿದೆ. ರಾಜ್ಯೋತ್ಸವ, ಮಂತ್ರಾಲಯ ಮಠದ ಶ್ರೇಷ್ಠ ಪ್ರಶಸ್ತಿಗೆ ಡಾ.ಬಿ.ಕೆ.ಶ್ರೀನಿವಾಸ ಮೂರ್ತಿ ಭಾಜನರಾಗಿದ್ದಾರೆ.
ಮಕ್ಕಳಾದ ಡಾ.ಸುಂದರ್ ಮತ್ತು ಡಾ. ಶ್ರೀಕಾಂತ್, ರಮಾ, ಕಮಲಾ ಮತ್ತು ಪತ್ನಿ ಶಾಂತಾಮೂರ್ತಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕೇಂದ್ರದ ಮಾಜಿ ಸಚಿವೆ ದಿ.ಸುಷ್ಮಾ ಸ್ವರಾಜ್ ಅವರಿಗೆ ಡಾ.ಬಿ.ಕೆ.ಶ್ರೀನಿವಾಸ ಮೂರ್ತಿ ಆಪ್ತರಾಗಿದ್ದರು. ಸತತ 12 ವರ್ಷಗಳ ಕಾಲ ವರಮಹಾಲಕ್ಷ್ಮೀ ಪೂಜೆ ವೈದ್ಯ ಶ್ರೀನಿವಾಸ ಮೂರ್ತಿ ಅವರ ನಿವಾಸದಲ್ಲೇ ನಡೆಯುತ್ತಿತ್ತು. ಬಳ್ಳಾರಿಯಲ್ಲಿ ದಿ.ಸುಷ್ಮಾ ಸ್ವರಾಜ್ ಅವರು ಜನಾರ್ಧನ್ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪೂಜೆ ಮಾಡುತ್ತಿದ್ದರು.
ವೈದ್ಯರ ನಿಧನದ ಸುದ್ದಿ ಆಘಾತಕಾರಿ: ಶ್ರೀರಾಮುಲು
ಡಾ.ಬಿ.ಕೆ.ಶ್ರೀನಿವಾಸ ಮೂರ್ತಿ ಅವರ ನಿಧನಕ್ಕೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ತೀವ್ರ ಸಂತಾಪ ಸೂಚಿಸಿದ್ದು, ""ಬಳ್ಳಾರಿ ಭಾಗದ ಸುಪ್ರಸಿದ್ಧ ವೈದ್ಯರು, ಆತ್ಮೀಯರೂ ಆದ ಶ್ರೀಯುತ ಬಿ.ಕೆ ಶ್ರೀನಿವಾಸ ಮೂರ್ತಿ ಅವರ ನಿಧನದ ಸುದ್ದಿ ಆಘಾತಕಾರಿ.''
""ಬಿ.ಕೆ.ಎಸ್ ಎಂದೇ ಹೆಸರಾಗಿದ್ದ ಅವರು, ನಮ್ಮೆಲ್ಲರ ಆತ್ಮೀಯರೂ ಹೌದು. ಕೇಂದ್ರ ಸಚಿವರಾಗಿದ್ದ ದಿವಂಗತ ಶ್ರೀಮತಿ ಸುಷ್ಮಾ ಸ್ವರಾಜ್ ಅವರು, ಸತತ 12 ವರ್ಷ ಲಕ್ಷ್ಮಿ ಪೂಜೆಯನ್ನು ಶ್ರೀ ಬಿ.ಕೆ.ಎಸ್ ಅವರ ಬಳ್ಳಾರಿಯ ನಿವಾಸದಲ್ಲೇ ನೆರವೇರಿಸಿದ್ದರು.''
""ಶ್ರೀ ಬಿ ಕೆ ಎಸ್ ಅವರ ನಿಧನ ವೈಯಕ್ತಿಕವಾಗಿ ತೀವ್ರ ನೋವಿನ ವಿಷಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಬಂಧು ಬಳಗದವರಿಗೆ ದುಃಖ ಭರಿಸುವ ಶಕ್ತಿ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.'' ಎಂದು ಸಚಿವ ಶ್ರೀರಾಮುಲು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ಡಾ. ಬಿ.ಕೆ.ಎಸ್ ರವರ ಮನೆಯ ವರಮಹಾಲಕ್ಷ್ಮಿ ಪೂಜೆ ಇಡೀ ದೇಶದ ಗಮನ ಸೆಳೆದಿತ್ತು. ಅವರಿಗೆ ಸದ್ಗತಿ ದೊರಕಲಿ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಇನ್ನು ವೈದ್ಯ ಡಾ.ಬಿ.ಕೆ.ಶ್ರೀನಿವಾಸ ಮೂರ್ತಿ ಅವರ ನಿಧನಕ್ಕೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಗ್ರಾಮೀಣ ಶಾಸಕ ಬಿ.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ವಿಪ್ರ ಸಮಾಜದ ಮುಖಂಡರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.