ಬಳ್ಳಾರಿಯಲ್ಲಿ ತಗ್ಗುತ್ತಿರುವ ರೆಡ್ಡಿ ಬ್ರದರ್ಸ್ ಪ್ರಾಬಲ್ಯ: ಶರಣರ ವಚನದೊಂದಿಗೆ ಕಾಂಗ್ರೆಸ್ ಲೇವಡಿ
ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ಸಮರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ದಿನದ ಹಿಂದೆ ಕೆಪಿಸಿಸಿ ಅಧ್ಯಕ್ಷರನ್ನು ರೌಡಿ ಕೊತ್ವಾಲನ ಶಿಷ್ಯ ಎಂದು ಬಿಜೆಪಿ ಲೇವಡಿ ಮಾಡಿತ್ತು.
ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷ ಸ್ಥಾನದ ಗೊಂದಲದ ಬಗ್ಗೆ ಬಿಜೆಪಿ ಟ್ವೀಟ್ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಮೊದಲು ನಿಮ್ಮ ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು ಲೇವಡಿ ಮಾಡಿದೆ.
ರೌಡಿ ಕೊತ್ವಾಲನ ಶಿಷ್ಯನಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ, ಖುದ್ದು ರೌಡಿಗೆ ಕಾರ್ಯಾಧ್ಯಕ್ಷ ಪಟ್ಟ!
ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊಹಮ್ಮದ್ ನಳಪಾಡ್ ಅತಿಹೆಚ್ಚು ಮತಗಳಿಸಿದ್ದರೂ, ಎರಡನೇ ಸ್ಥಾನ ಪಡೆದುಕೊಂಡಿದ್ದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಈ ವಿಚಾರದ ಬಗ್ಗೆ ಬಿಜೆಪಿ ಟ್ವೀಟ್ ಮಾಡಿತ್ತು.
ನಲಪಾಡ್ ಗೆ ಸ್ಪರ್ಧಿಸಲು ಅನುಮತಿ ನೀಡಿದ್ದೇಕೆ, ಅತಿಹೆಚ್ಚು ಮತ ಪಡೆದ ಮೇಲೆ ಅಮಾನತು ಮಾಡಿದ್ದೇಕೆ?
ಇನ್ನು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಸಚಿವ ಆನಂದ್ ಸಿಂಗ್ ಅವರ ಪ್ರಾಬಲ್ಯ ಹೆಚ್ಚುತ್ತಿದ್ದು, ರೆಡ್ಡಿ ಬ್ರದರ್ಸ್ ಹವಾ ಕಮ್ಮಿಯಾಗುತ್ತಿರುವುದರ ಬಗ್ಗೆ ಕಾಂಗ್ರೆಸ್ ಘಟಕ ಲೇವಡಿ ಮಾಡಿದೆ.
ಬಳ್ಳಾರಿಯಲ್ಲಿ ಆನಂದ್ ಸಿಂಗ್ ಪ್ರಾಬಲ್ಯ
ಬಳ್ಳಾರಿಯಲ್ಲಿ ಆನಂದ್ ಸಿಂಗ್ ಪ್ರಾಬಲ್ಯದ ಬಗ್ಗೆ ಕಾಂಗ್ರೆಸ್ ಮಾಡಿದ ಟ್ವೀಟ್ ಹೀಗಿದೆ, "ತನ್ನ ಮನೆಯೊಳಗಣ ಕಿಚ್ಚು ತನ್ನ ಮನೆಯ ಸುಡುವುದಲ್ಲದೆ ನೆರೆಮನೆಯ ಸುಡುವುದೆ ಕೂಡಲಸಂಗಮದೇವಾ. ಶರಣರ ಈ ಮಾತಿನಂತೆ, ಸಮನ್ವಯತೆ ಇಲ್ಲದ ಈ ಸರ್ಕಾರದೊಳಗಿನ ಕಿಚ್ಚು ರಾಜ್ಯದ ಅಭಿವೃದ್ಧಿ, ಹಿತಕ್ಕೆ ಮಾರಕವಾಗಿ ಪರಿಣಮಿಸಿದೆ. @BJP4Karnataka ಸರ್ಕಾರ ಭ್ರಷ್ಟಾಚಾರ, ಪ್ರತಿಷ್ಠೆ, ಅಧಿಕಾರದ ಕಿತ್ತಾಟದಲ್ಲಿ ಕಾಲ ಕಳೆಯುತ್ತಾ ರಾಜ್ಯದ ಹಿತ ಮರೆತಿದೆ".
ಸಿದ್ದರಾಮಯ್ಯ ಮತ್ತು ಡಿಕೆಶಿ ಬಣ
ಕೆಪಿಸಿಸಿ ಯುವ ಅಧ್ಯಕ್ಷ ಸ್ಥಾನದ ಬಗ್ಗೆ ಬಿಜೆಪಿ ಈ ರೀತಿ ಟ್ವೀಟ್ ಮಾಡಿತ್ತು, "ಸೋತವರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬಾರದು - @siddaramaiah ಬಣ ಅತೀ ಹೆಚ್ಚು ಮತ ಪಡೆದವರನ್ನು ಸ್ಥಾನಮಾನ ನೀಡದೇ ದೂರವಿರಿಸುವುದು ಸರಿಯಲ್ಲ - @DKShivakumar ಬಣ @INCKarnataka, ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವವರಿಗಾಗಿಯೇ ಪ್ರತ್ಯೇಕ ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಸಿ. ಏಕೆಂದರೆ ನಿಮ್ಮಲ್ಲಿರುವವರೆಲ್ಲರವರೇ!".
ಬಿಜೆಪಿಯ ವ್ಯಂಗ್ಯ
ಬಿಜೆಪಿಯ ವ್ಯಂಗ್ಯಕ್ಕೆ ಕೆಪಿಸಿಸಿ ಕೌಂಟರ್ ಕೊಟ್ಟಿದ್ದು ಹೀಗೆ, "@BJP4Karnataka ಯತ್ನಾಳ್, ಸಂತೋಷ್, ಸುನಿಲ್ ಕುಮಾರ್, ಅತೃಪ್ತರು, ಸಂತೃಪ್ತರು ಅಂತೆಲ್ಲ ಬಣಗಳಾಗಿ ನಿಮ್ಮೊಳಗಿನ ಬೆಂಕಿ ನಿಮ್ಮನ್ನಲ್ಲದೆ ರಾಜ್ಯವನ್ನೂ ಸುಡುತ್ತಿದೆ. ನಮ್ಮ ಪಕ್ಷದ ಬಗ್ಗೆ ಚಿಂತಿಸುವುದ ಬಿಟ್ಟು, ಅಡಳಿತದತ್ತ ಗಮನಹರಿಸಿದರೆ ರಾಜ್ಯಕ್ಕೆ ಕ್ಷೇಮ. ಅಂದಂಗೆ ನಿಮಗೆ "ಬ್ಲೂಬಾಯ್ಸ್ ಮೋರ್ಚಾ" ಎನ್ನುವುದೊಂದು ಅಗತ್ಯವಿದೆ, ಚಿಂತಿಸಿ!".
|
ರೌಡಿ ಕೊತ್ವಾಲನ ಶಿಷ್ಯನಿಗೆ ಕೆಪಿಸಿಸಿ ಪಟ್ಟ
"ರೌಡಿ ಕೊತ್ವಾಲನ ಶಿಷ್ಯನಿಗೆ @INCKarnataka ಪಟ್ಟ. ಸ್ವತಃ ರೌಡಿ ಆಗಿರುವವರಿಗೆ @IYCKarnataka ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ. ಹೆಚ್ಚು ಮತ ಪಡೆದರೂ ಆತನಿಗೆ ಸೋಲು, ಈಗ ಅದೇ ರೌಡಿ ನಾಯಕನಿಗೆ ಕಾರ್ಯಾಧ್ಯಕ್ಷ ಎಂಬ ಪಟ್ಟ ಕಟ್ಟಲು ಉತ್ಸಾಹ. ಕಾಂಗ್ರೆಸ್ ಪಕ್ಷದವರು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿದ್ದಾರೆ?" ಎಂದು ಬಿಜೆಪಿ ಟ್ವೀಟ್ ಮಾಡಿ ಕಾಂಗ್ರೆಸ್ ಕಾಲೆಳೆದಿತ್ತು.