ಪ್ರತ್ಯೇಕ ಜಿಲ್ಲೆಗಾಗಿ ಸಚಿವ ಸ್ಥಾನದ ತ್ಯಾಗಕ್ಕೂ ಸಿದ್ಧ ಎಂದ ಆನಂದ್ ಸಿಂಗ್
ಬಳ್ಳಾರಿ, ನವೆಂಬರ್ 18: ವಿಜಯನಗರ ಪ್ರತ್ಯೇಕ ಜಿಲ್ಲೆಯ ಹೋರಾಟಕ್ಕೆ ಇಂದು ತಾತ್ವಿಕ ಅಂತ್ಯ ಕಂಡಿದ್ದು, ದಶಕಗಳ ಹೋರಾಟದ ಫಲವಾಗಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರತ್ಯೇಕ ಜಿಲ್ಲೆ ಘೋಷಣೆ ಕುರಿತು ಒಪ್ಪಿಗೆ ನೀಡಲಾಗಿದೆ.
ಇದೇ ಸಂತೋಷದಲ್ಲಿ ಇದ್ದ ಅರಣ್ಯ ಸಚಿವ ಆನಂದ್ ಸಿಂಗ್, ಇಂದು ಬೆಂಗಳೂರಿನಿಂದ ನೇರವಾಗಿ ಹೊಸಪೇಟೆಗೆ ಆಗಮಿಸಿದ ಸಚಿವರಿಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.
ವಿಜಯನಗರ ಜಿಲ್ಲೆ ರಚನೆಗೆ ಕಂಪ್ಲಿ ಶಾಸಕ ಜೆ.ಎನ್ ಗಣೇಶ ಸ್ವಾಗತ
ಬಳಿಕ ಮಾತನಾಡಿದ ಆನಂದ್ ಸಿಂಗ್, ಪ್ರತ್ಯೇಕ ವಿಜಯನಗರ ಜಿಲ್ಲೆಗಾಗಿ ಸಚಿವ ಸ್ಥಾನದ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು. ಸಿಎಂ ಯಡಿಯೂರಪ್ಪನವರು ರಾಜೀನಾಮೆ ಕೇಳಿದರೆ ಆನಂದದಿಂದ ಕೊಡುವೆ. ಜಿಲ್ಲೆಯಾಗೋದು ನನಗೆ ಮುಖ್ಯ ವಿಜಯನಗರ ಜಿಲ್ಲೆಯ ಮುಂದೆ ಸಚಿವ ಸ್ಥಾನ ತೃಣಕ್ಕೆ ಸಮಾನವೆಂದರು.
ವಿಜಯನಗರ ಜಿಲ್ಲೆ ಘೋಷಣೆ ಮಾಡಿದ ಯಡಿಯೂರಪ್ಪ "ವಿಜಯನಗರದ ವೀರಪುತ್ರ' ಎಂದು ಹಾಡಿ ಹೊಗಳಿದ್ದಾರೆ. ಮನೆಯಲ್ಲಿ ಅಣ್ಣ-ತಮ್ಮಂದಿರು ಬೇರೆಯಾದರೆ ನೋವು ಇರುತ್ತದೆ. ಜಿಲ್ಲೆ ವಿಭಜನೆ ಆದರೆ ಭಿನ್ನಾಭಿಪ್ರಾಯ ಇರೋದಿಲ್ವಾ..? ಎಂದು ಮರು ಪ್ರಶ್ನಿಸಿದರು.
ಶಾಸಕ ಸೋಮಶೇಖರ ರೆಡ್ಡಿ ಜೊತೆಗೆ ಮಾತನಾಡುವೆ. ಈಗಾಗಲೇ ಸಿಎಂ ಯಡಿಯೂರಪ್ಪ ಕೂಡ ರೆಡ್ಡಿ ಜೊತೆ ಮಾತನಾಡಿದ್ದಾರೆ. ಜಿಲ್ಲೆಯ ವಿಚಾರದಲ್ಲಿ ಪ್ರತಿಷ್ಠೆ ಬೇಡ. ನಾವೆಲ್ಲರೂ ಅಣ್ಣ ತಮ್ಮಂದಿರು ಎನ್ನುವ ಮೂಲಕ ಸೋಮಶೇಖರ ರೆಡ್ಡಿ ಮನವೊಲಿಸುವ ಪ್ರಯತ್ನವನ್ನು ಆನಂದ್ ಸಿಂಗ್ ಮಾಡಿದರು.