ವಿದೇಶದಿಂದ ಬಂದವರ ಪತ್ತೆಗೆ ಬಳ್ಳಾರಿಯ ಪ್ರತಿ ತಾಲೂಕಿಗೆ ರಾಪಿಡ್ ರೆಸ್ಪಾನ್ಸ್ ತಂಡ
ಬಳ್ಳಾರಿ, ಮಾರ್ಚ್ 20: ಕೊರೊನಾ ವೈರಸ್ ನಿಂದ ಪ್ರತಿದಿನ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳಬೇಕು, ರೋಗದ ಲಕ್ಷಣಗಳು ಏನಾದರೂ ಕಂಡುಬಂದರೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರು ಸೂಚಿಸಿದ್ದಾರೆ.
ಕೊರೊನಾ ವೈರಸ್ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಜಿಲ್ಲೆಯ ಸಹಾಯಕ ಆಯುಕ್ತರು ಹಾಗೂ ಎಲ್ಲಾ ತಾಲೂಕಿನ ತಹಶೀಲ್ದಾರ್, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಹಂಪಿಯಲ್ಲಿ ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧವಿದ್ದರೂ ಬಹಳ ಜನ ವಿವಿಧ ಮಾರ್ಗಗಳ ಮೂಲಕ ಬರುತ್ತಿದ್ದಾರೆ. ಅವರನ್ನು ಪತ್ತೆಹಚ್ಚಿ ಪರೀಕ್ಷೆಗೆ ಒಳಪಡಿಸಬೇಕಾಗಿದೆ. ಈಗಾಗಲೇ ವಿದೇಶಕ್ಕೆ ಹೋಗಿಬಂದ ಕೆಲವರು ಪರೀಕ್ಷೆಗೆ ಒಳಪಡದೇ ಅಸಡ್ಡೆ ತೋರಿಸುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊರೊನಾ; ಮೋಜು ಮಸ್ತಿಗೆ ಬರುವವರನ್ನು ವಾಪಸ್ ಕಳಿಸಿ ಎಂದ ಡಿಸಿ
ತಹಶೀಲ್ದಾರರ ನೇತೃತ್ವದಲ್ಲಿ ಪ್ರತಿ ತಾಲೂಕಿಗೆ ಒಂದರಂತೆ 3 ಜನರ ರಾಪಿಡ್ ರೆಸ್ಪಾನ್ಸ್ ತಂಡ ರಚಿಸಲಾಗಿದ್ದು, ಈ ತಂಡವು ವಿದೇಶದಿಂದ ಬಂದ ಪ್ರವಾಸಿಗರನ್ನು, ವಿದೇಶಕ್ಕೆ ಹೋಗಿ ಬಂದವರನ್ನು, ಪತ್ತೆ ಹಚ್ಚಿ ಅವರನ್ನು ಪರೀಕ್ಷಿಸಲಿದೆ. ಆಸ್ಪತ್ರೆಗೆ ದಾಖಲಿಸುವ, ಅವರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೊರೊನಾ ವೈರಸ್ ಗೆ ಯಾವುದೇ ರೀತಿಯ ಔಷಧವನ್ನು ಇದುವರೆಗೂ ಕಂಡುಹಿಡಿದಿಲ್ಲ. ಆ ಬಗ್ಗೆ ಹಲವು ಸುಳ್ಳು ವದಂತಿಗಳನ್ನು ಹರಡಿಸುತ್ತಿದ್ದು, ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳನ್ನೂ ರದ್ದುಪಡಿಸಲಾಗಿದೆ ಎಂದರು.