ಬಳ್ಳಾರಿಯಲ್ಲಿ ವಿರಾಮ ಕೊಟ್ಟ ಮಳೆರಾಯ; ಸಹಜ ಸ್ಥಿತಿಯತ್ತ ಬದುಕು
ಬಳ್ಳಾರಿ, ಸೆಪ್ಟೆಂಬರ್ 23: ಕಳೆದ ಒಂದು ವಾರದಿಂದ ಬಿಡದೇ ಸುರಿಯುತ್ತಿದ್ದ ಮಳೆ ಎರಡು ದಿನಗಳಿಂದ ಬಿಡುವು ನೀಡಿದೆ. ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದ ಮಳೆ ತಣ್ಣಗಾಗಿದ್ದು, ಜಿಲ್ಲೆಯ ಜನರು ಕೊಂಚ ನಿರಾಳರಾಗಿದ್ದಾರೆ.
ಇನ್ನು ತುಂಗಭದ್ರಾ ಜಲಾಶಯದ ಒಳಹರಿವು ಹಾಗೂ ಹೊರಹರಿವು ಪ್ರಮಾಣವೂ ತಗ್ಗಿದ್ದು, ಮುಳುಗಡೆಯಾಗಿದ್ದ ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಜಲಾಶಯದಿಂದ ನದಿಗೆ 74,016 ಕ್ಯೂಸೆಕ್ ನೀರನ್ನು ಹರಿ ಬಿಡಲಾಗುತ್ತಿದೆ. ಎರಡು ಅಡಿ ಎತ್ತರದಲ್ಲಿ 20 ಕ್ರಸ್ಟ್ ಗೇಟ್ ಹಾಗೂ ಒಂದು ಅಡಿ ಎತ್ತರದಲ್ಲಿ 8 ಕ್ರಸ್ಟ್ ಗೇಟ್ ಮೂಲಕ ನೀರನ್ನು ಹರಿಸಲಾಗುತ್ತಿದೆ.
ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಜಲಾಶಯದಿಂದ ಕಾಲುವೆಗಳಿಗೆ 8,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಸದ್ಯ ಜಲಾಶಯಕ್ಕೆ 1,13,600 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದು ಒಟ್ಟು 1631.76 ಅಡಿ ಇದ್ದು, 96.122 ಟಿಎಂಸಿ ನೀರು ಸಂಗ್ರಹವಾಗಿದೆ. ನಿನ್ನೆ ಒಂದು ಲಕ್ಷಕ್ಕಿಂತ ಹೆಚ್ಚು ನೀರು ನದಿಗೆ ಹರಿಸಿದ್ದರಿಂದ ಕಂಪ್ಲಿ ಸೇತುವೆ ಸಂಚಾರವನ್ನು ನಿಷೇಧಿಸಲಾಗಿತ್ತು. ಈಗ ಹೊರಹರಿವು ತಗ್ಗಿದ್ದು, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ನೀರು; ಕಂಪ್ಲಿ ಸೇತುವೆ ಸಂಚಾರ ಬಂದ್
ಮುಳುಗಡೆಯಾಗಿದ್ದ ಸ್ಮಾರಕಗಳು ಸಹಜ ಸ್ಥಿತಿಗೆ
ಅಲ್ಲದೇ, ಹಂಪಿಯ ನದಿ ಪಾತ್ರದಲ್ಲಿ ಮುಳುಗಡೆಯಾಗಿದ್ದ ಸ್ಮಾರಕಗಳು ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಮೇಲೆ ಕಾಣತೊಡಗಿವೆ. ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ ಪರಿಣಾಮ ಹಂಪಿಯ ಹಲವು ಸ್ಮಾರಕಗಳು ಜಲಾವೃತಗೊಂಡಿದ್ದವು. ಪುರಂದರ ದಾಸರ ಮಂಟಪ, ಸಾಲುಮಂಟಪ, ಧಾರ್ಮಿಕ ವಿಧಿಗಳನ್ನು ಮಾಡುವ ಮಂಟಪಗಳು ಸೇರಿದಂತೆ ಹಲವು ಸ್ಮಾರಕಗಳು ಮುಳುಗಡೆಯಾಗಿದ್ದವು. ಇದೀಗ ನೀರಿನ ಪ್ರಮಾಣ ತಗ್ಗಿದ್ದು, ಎಲ್ಲವೂ ಸಹಜ ಸ್ಥಿತಿಯತ್ತ ಮರಳುತ್ತಿವೆ.
ಜಿಲ್ಲೆಯಲ್ಲಿ ಹೆಕ್ಟೇರ್ ಪ್ರದೇಶದ ಬೆಳೆ ನಾಶ
ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದ್ದು, ಹಲವು ಮನೆಗಳು, ಹೊಲಗದ್ದೆಗಳು ಜಲಾವೃತವಾಗಿದ್ದವು. ಮಳೆಯಿಂದ ಜಿಲ್ಲೆಯಲ್ಲಿ ಅಂದಾಜು 353.00 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಬಳ್ಳಾರಿ ಹಾಗೂ ಸಂಡೂರು ತಾಲೂಕಿನಲ್ಲಿ ಹೆಚ್ಚು ಪ್ರಮಾಣದ ಬೆಳೆನಷ್ಟ ಉಂಟಾಗಿದೆ ಎಂದು ಅಂದಾಜಿಸಿರುವುದಾಗಿ ಎಂದು ಕೃಷಿ ಇಲಾಖೆ ತಿಳಿಸಿದೆ. ಬಳ್ಳಾರಿ ತಾಲೂಕು ಶೇ.89ರಷ್ಟು ಬಿತ್ತನೆ ಗುರಿಯಲ್ಲಿ, ಶೇ.72.86ರಷ್ಟು ಪ್ರದೇಶ ವ್ಯಾಪ್ತಿಯಲ್ಲಿ ಬೆಳೆನಷ್ಟ ಉಂಟಾಗಿರುವುದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಸಂಡೂರು ತಾಲೂಕಿನಲ್ಲಿ ಶೇ.99.3ರಷ್ಟು ಬಿತ್ತನೆ ಗುರಿಯಲ್ಲಿ ಶೇ.40.72 ರಷ್ಟು ಪ್ರದೇಶದಲ್ಲಿ ಬೆಳೆನಷ್ಟ ಉಂಟಾಗಿರಬಹುದೆಂದು ಕೃಷಿ ಇಲಾಖೆಯು ಅಂದಾಜಿಸಿದೆ.
ಬಳ್ಳಾರಿ; ಏಕಾಏಕಿ ಕುಸಿದ ತುಂಗಭದ್ರಾ ನದಿ ಸೇತುವೆ ರಸ್ತೆ
ಏಕಾಏಕಿ ಕುಸಿದ ತುಂಗಭದ್ರಾ ನದಿ ಸೇತುವೆ ರಸ್ತೆ
ಇಂದು ಬೆಳಿಗ್ಗೆ ಹೂವಿನ ಹಡಗಲಿ ಮದಗಲಟ್ಟಿ ಸಮೀಪದ ತುಂಗಭದ್ರಾ ನದಿಗೆ ಕಟ್ಟಲಾಗಿರುವ ಸೇತುವೆ ಏಕಾಏಕಿ ಕುಸಿದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದ ಪರಿಣಾಮ ತುಂಗಭದ್ರಾ ನದಿಯ ನೀರಿನ ಮಟ್ಟವೂ ಹೆಚ್ಚಾಗಿತ್ತು. ಈ ನಡುವೆಯೇ ಇಂದು ಬೆಳಿಗ್ಗೆ ಬ್ರಿಡ್ಜ್ ಕುಸಿದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಸೇತುವೆ ಮೇಲೆ ಪ್ರಯಾಣಿಸುತ್ತಿದ್ದ ಲಾರಿ ಮತ್ತು ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಿಂದಾಗಿ ಈ ಮಾರ್ಗದ ಸಂಚಾರದಲ್ಲಿ ವ್ಯತ್ಯಯವಾಗಿದೆ.