ಹೊಸಪೇಟೆ ಚಳಿಯನ್ನು ಹಿಮ್ಮೆಟ್ಟಿಸಿದ ರಾಜಕೀಯದ ಕಾವು
ಹೊಸಪೇಟೆ, ಫೆಬ್ರವರಿ 10 : ಬೇಸಿಗೆಯನ್ನು ಸ್ವಾಗತಿಸಲು ಸಜ್ಜಾಗಿರುವ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಬೆಳ್ಳಂಬೆಳಿಗ್ಗೆ ಭಾರೀ ಚಳಿ, 20 ಡಿಗ್ರಿ ಸೆಲ್ಶಿಯಸ್. ರಾಹುಲ್ ಗಾಂಧಿಯವರ ಆಗಮನದಿಂದ ಭಾರೀ ಕಾವಿನ ವಾತಾವರಣ ಸೃಷ್ಟಿಯಾಗಿದ್ದರೂ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದ ಜನ ನಿಧಾನವಾಗಿ ಬರುತ್ತಿದ್ದಾರೆ.
ಮುನ್ಸಿಪಾಲಿಟಿ ಮೈದಾನದಲ್ಲಿ ಭರ್ಜರಿ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 1 ಗಂಟೆಗೆ ರಾಹುಲ್ ಗಾಂಧಿ ಅವರು ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎಲ್ಲ ಸಿದ್ಧತೆಯ ಉಸ್ತುವಾರಿಯನ್ನು, ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಲಿರುವ, ವಿಜಯನಗರದ ಶಾಸಕ ಆನಂದ್ ಸಿಂಗ್ ಅವರೇ ವಹಿಸಿಕೊಂಡಿದ್ದಾರೆ.
In Pics : ಹೊಸಪೇಟೆಯಲ್ಲಿ ರಾಹುಲ್ ಭಾಷಣ ಕೇಳಲು ಬರುತ್ತಿರುವ ಜನಸ್ತೋಮ
ರಾಹುಲ್ ಗಾಂಧಿ ಅವರ ಭಾಷಣ ಕೇಳಲು ಎಲ್ಲೆಡೆಯಿಂದ ಜನ ತಂಡೋಪತಂಡವಾಗಿ ಬರುತ್ತಿದ್ದಾರೆ. ಬೆಂಗಳೂರಿನಲ್ಲಿ ನರೇಂದ್ರ ಮೋದಿ ಬಂದಾಗ ಇದ್ದದ್ದಕ್ಕಿಂತ (ಮೂರುವರೆ ಲಕ್ಷ) ಹೆಚ್ಚು ಜನರನ್ನು ಸೇರಿಸಲು ಕಾಂಗ್ರೆಸ್ ಭಾರೀ ಸಿದ್ಧತೆ ಮಾಡಿಕೊಂಡಿದೆ. ಸುತ್ತಮುತ್ತಲಿನ ಎಲ್ಲ ನಗರಗಳ ಸರಕಾರಿ ಬಸ್ಸುಗಳನ್ನು ಜನರನ್ನು ತರಲು ಬಳಸಲಾಗಿದೆ.
ಅಲ್ಲಿ ಸೇರಲಿರುವ ಜನರ ಬಾಯಾರಿಕೆ ನೀಗಿಸಲು ರಾಹುಲ್ ಗಾಂಧಿ ಚಿತ್ರವಿರುವ ನೀರಿನ ಬಾಟಲಿಗಳನ್ನು ನೀಡಲಾಗುತ್ತಿದೆ. ಕೃಷಿ ಹೊಂಡ, ಹಸಿವು ಮುಕ್ತ ಕರ್ನಾಟಕ ಮುಂತಾದ ಯೋಜನೆ ಸೇರಿದಂತೆ ಕರ್ನಾಟಕ ಸರಕಾರ ಮಾಡಿರುವ ಸಾಧನೆಯ ವಿಡಿಯೋ ಚಿತ್ರಣವನ್ನು ಜನರಿಗೆ ತೋರಿಸಲಾಗುತ್ತಿದೆ.
'ರಾಹುಲ್ ಗಾಂಧಿ ದೇಗುಲ ದರ್ಶನ ಹಿಂದೆ ರಾಜಕೀಯ ಇಲ್ಲ'!
ಪ್ರತಿಭಟನೆ : ದಲಿತರಿಗೆ ಒಳಮೀಸಲಾತಿ ನೀಡಬೇಕೆಂಬ ಎ.ಜೆ. ಸದಾಶಿವ ಆಯೋಗ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಬಾಬು ಜಗಜೀವನರಾಮ್ ಜನಜಾಗೃತಿ ವೇದಿಕೆಯಿಂದ ಪ್ರತಿಭಟನೆ ಮಾಡಲಾಗುತ್ತಿತ್ತು. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದ 20 ಪ್ರತಿಭಟನಕಾರರನ್ನು ಬಂಧಿಸಲಾಗಿದೆ.