ಅಪಘಾತವಾದ ಕಾರಿನಲ್ಲಿದ್ದರೇ ಆರ್.ಅಶೋಕ್ ಪುತ್ರ? ಉತ್ತರ ಸಿಗದ ಪ್ರಶ್ನೆಗಳು
Recommended Video
ಬಳ್ಳಾರಿ, ಫೆಬ್ರವರಿ 13: ಜಿಲ್ಲೆಯ ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿ ಬಳಿ ಆಗಿರುವ ಕಾರು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಸಚಿವ ಆರ್.ಅಶೋಕ್ ಪುತ್ರ ಶರತ್ ಇದ್ದರು ಎಂಬ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ.
ಫೆಬ್ರವರಿ 10 (ಸೋಮವಾರ) ಸಂಜೆ ವೇಳೆಗೆ ಬೆಂಜ್ (ಕೆ.ಎ.05 ಎಂಡಬ್ಲು 0357) ಕಾರು ಮರಿಯಮ್ಮನಹಳ್ಳಿ ಸಮೀಪ ದರ್ಗಾ ಪೆಟ್ರೋಲ್ ಬಂಕ್ ಬಳಿ ವೇಗವಾಗಿ ಬಂದು ಅಂಗಡಿಯೊಂದರ ಬಳಿ ನಿಂತಿದ್ದ ರವಿ ನಾಯ್ಕ ಎಂಬಾತನಿಗೆ ಡಿಕ್ಕಿ ಹೊಡೆದಿದೆ, ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿ ಸಹ ಆಗಿದೆ. ಘಟನೆಯ ಪರಿಣಾಮವಾಗಿ ರವಿ ನಾಯ್ಕ ಹಾಗೂ ಕಾರಿನಲ್ಲಿದ್ದ ಸಚಿನ್ ಎಂಬುವರಿಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಆದರೆ ಈ ಕಾರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪುತ್ರ ಶರತ್ ಇದ್ದರು ಎಂದು ಸುದ್ದಿಯಾಗಿತ್ತು. ಪ್ರತ್ಯಕ್ಷದರ್ಶಿಗಳು ಆರ್.ಅಶೋಕ್ ಪುತ್ರ ಇದ್ದರೆಂದು ತಿಳಿಸಿದ್ದಾಗಿ ಕೆಲವು ಪತ್ರಿಕೆಗಳು, ಮಾಧ್ಯಮಗಳು ಈಗಾಗಲೇ ವರದಿ ಸಹ ಮಾಡಿವೆ.
ಬಳ್ಳಾರಿ ಅಪಘಾತ ಪ್ರಕರಣ: ಸ್ಫೋಟಕ ಮಾಹಿತಿ ಹೊರಹಾಕಿದ ವೈದ್ಯ
ಆದರೆ ಬಳ್ಳಾರಿ ಜಿಲ್ಲಾ ಪೊಲೀಸ್ ಎಸ್ಪಿ ಬಾಬಾ ನೀಡಿರುವ ಹೇಳಿಕೆ ಪ್ರಕಾರ, ಆರ್.ಅಶೋಕ್ ಪುತ್ರ ಕಾರಿನಲ್ಲಿ ಇರಲೇ ಇಲ್ಲ. ಆರ್.ಅಶೋಕ್ ಪುತ್ರ ಇದ್ದರು ಎನ್ನುವುದು ಕೇವಲ ಊಹಾಪೋಹ ಎಂದು ಅವರು ಹೇಳಿದ್ದಾರೆ. ಆದರೆ ಅವರ ಹೇಳಿಕೆ ಹಲವಾರು ಅನುಮಾನಗಳನ್ನು ಸೃಷ್ಟಿಸುತ್ತಿದೆ.
ಎಲ್ಲಿದ್ದಾರೆ ಆರ್.ಅಶೋಕ್ ಪುತ್ರ ಶರತ್?
ಆರ್.ಅಶೋಕ್ ಪುತ್ರ ಕಾರಿನಲ್ಲಿ ಇಲ್ಲ ಎಂದು ಪೊಲೀಸರು ಹೇಳಿದ ಮೇಲೆ ಅಶೋಕ್ ಪುತ್ರ ಈಗ ಎಲ್ಲಿದ್ದಾರೆ? ಅವರೇಕೆ ಮಾಧ್ಯಮಗಳ ಮುಂದೆ ಬರುತ್ತಿಲ್ಲ? ಅವರು ಕಾರಿನಲ್ಲಿ ಇರಲೇ ಇಲ್ಲವೆಂದ ಮೇಲೆ ಹೆದರಿಕೆ ಏಕೆ? ಮಾಧ್ಯಮಗಳ ಮುಂದೆ ಬಂದು ವಿವಾದಕ್ಕೆ ನೇರವಾಗಿ ತೆರೆಯೇ ಎಳೆದು ಬಿಡಬಹುದಲ್ಲವೇ?
ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ
ಸರ್ಕಾರಿ ಆಸ್ಪತ್ರೆಗಳಲ್ಲಿ ರಾತ್ರಿ ಸಮಯ ಅದೂ ಮಧ್ಯರಾತ್ರಿ ಸಮಯ ಮರಣೋತ್ತರ ಪರೀಕ್ಷೆಗಳು ಆಗುವುದೇ ಇಲ್ಲ, ಆದರೆ ಅಪಘಾತದಲ್ಲಿ ಮರಣಹೊಂದಿದ ರವಿ ನಾಯ್ಕ ಹಾಗೂ ಸಚಿನ್ ಮರಣೋತ್ತರ ಪರೀಕ್ಷೆ ನಡೆದಿದ್ದ ಮಧ್ಯರಾತ್ರಿ 1 ಗಂಟೆ ಮೇಲೆ. ಶವ ಹಸ್ತಾಂತರಿಸಿದ್ದು ಅದೇ ರಾತ್ರಿ 3:30 ಕ್ಕೆ.
ಬಳ್ಳಾರಿ ಅಪಘಾತ ಪ್ರಕರಣದಲ್ಲಿ ಆರ್ ಅಶೋಕ ಮಗ; ಎಸ್ ಪಿ ಕೊಟ್ಟ ಸ್ಪಷ್ಟನೆ ಹೀಗಿದೆ
ಅನುಮಾನ ಮೂಡಿಸಿದ ವೈದ್ಯರ ಹೇಳಿಕೆ
ಮರಣೋತ್ತರ ಪರೀಕ್ಷೆ ನಡೆಸಿದ ಹೊಸಪೇಟೆ ತಾಲ್ಲೂಕು ಆಸ್ಪತ್ರೆ ವೈದ್ಯ ಮಹಂತಪ್ಪ ಮಾಧ್ಯಮಗಳ ಬಳಿ ಆರ್.ಅಶೋಕ್ ಹೆಸರು ಪ್ರಸ್ತಾಪ ಮಾಡಿದ್ದಾರೆ. 'ಕಾರು ಅಪಘಾತದಲ್ಲಿ ಮೃತಪಟ್ಟ ಬೆಂಗಳೂರು ಮೂಲದ ಸಚಿನ್ ಸಚಿವ ಆರ್ .ಆಶೋಕ್ ಸಂಬಂಧಿ ಎಂದು ಮರಿಯಮ್ಮನಹಳ್ಳಿ ಸಬ್ ಇನ್ಸ್ಪೆಕ್ಟರ್ ಹೇಳಿದ ಕಾರಣ ಮಧ್ಯರಾತ್ರಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು' ಎಂದು ಹೇಳಿದ್ದಾರೆ. ಸಚಿವರ ಪುತ್ರ ಕಾರಿನಲ್ಲಿ ಇಲ್ಲದೇ ಹೋಗಿದ್ದರೆ, ವೈದ್ಯರ ಬಳಿ ಆರ್.ಅಶೋಕ್ ಹೆಸರನ್ನು ತೆಗೆಯುವ ಅವಶ್ಯಕತೆ ಏನಿತ್ತು?
ದೋಷಗಳಿಂದ ತುಂಬಿರುವ ಎಫ್ಐಆರ್
ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ಹಲವು ದೋಷಗಳಿಂದ ಕೂಡಿದ್ದು, ಎಫ್ಐಆರ್ ಸಹ ಅನುಮಾನಕ್ಕೆ ಕಾರಣವಾಗಿದೆ. ಅಪಘಾತ ಆಗಿರುವುದು ಬೆಂಜ್ ಕಾರ್ ಆದರೆ ಎಫ್ಐಆರ್ ನಲ್ಲಿ ಆಡಿ ಕಾರೆಂದು ಉಲ್ಲೇಖಿಸಲಾಗಿದೆ. ಕಾರಿನಲ್ಲಿ ನಾಲ್ಕೇ ಜನ ಇದ್ದುದುದಾಗಿ ಎಫ್ಐಆರ್ ನಲ್ಲಿ ಇದೆ. ಇದರಲ್ಲಿ ಅಶೋಕ್ ಪುತ್ರ ಶರತ್ ಹೆಸರಿಲ್ಲ. ಆದರೆ ಪ್ರತ್ಯಕ್ಷದರ್ಶಿಗಳು ಕೆಲವರು ಹೇಳಿರುವಂತೆ ಕಾರಿನಲ್ಲಿ ಐವರಿದ್ದರು ಎನ್ನಲಾಗಿದೆ.
ಬಳ್ಳಾರಿಯಲ್ಲಿ ಕಾರು ಅಪಘಾತ; ಕಾರಿನಲ್ಲಿದ್ದುದು ಆರ್ ಅಶೋಕ್ ಮಗ?
ಹೆಸರು ಹೇಳಲಿಚ್ಛಿಸದ ಪೊಲೀಸ್ ಸಿಬ್ಬಂದಿ ಒಬ್ಬರ ಮಾಹಿತಿ
'ಆರ್.ಅಶೋಕ್ ಪುತ್ರ ಶರತ್ ಕಾರಿನಲ್ಲಿ ಇದ್ದರು. ಘಟನೆ ನಡೆದ ನಂತರ ಬೇರೊಂದು ಕಾರಿನಲ್ಲಿ ಆತನನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ಎಫ್ಐಆರ್ ನಲ್ಲಿ ಸಹ ಆತನ ಹೆಸರು ಇಲ್ಲದಂತೆ ಮಾಡಿದ್ದಾರೆ' ಎಂದು ಕನ್ನಡದ ದಿನಪತ್ರಿಕೆಯೊಂದು ಪೊಲೀಸ್ ಸಿಬ್ಬಂದಿಯೊಬ್ಬರ ಹೇಳಿಕೆಯನ್ನು ಪಡೆದು ಸುದ್ದಿ ಪ್ರಕಟಿಸಿದೆ.
ಆರ್.ಅಶೋಕ್ ಹೇಳಿಕೆಯಲ್ಲೂ ಭಿನ್ನತೆ
ಘಟನೆ ಬಗ್ಗೆ ಮೊದಲಿಗೆ ಪ್ರತಿಕ್ರಿಯಿಸಿದ್ದ ಆರ್.ಅಶೋಕ್ 'ಕಾನೂನು ಎಲ್ಲರಿಗೂ ಒಂದೇ' ಎಂದು ಹೇಳಿದ್ದರು. ಆದರೆ ನಂತರ 'ನನ್ನ ಪುತ್ರ ಕಾರಿನಲ್ಲಿ ಇರಲಿಲ್ಲ' ಎಂದರು. ಹೇಳಿಕೆಯಲ್ಲಿನ ಈ ಬದಲಾವಣೆ ಸಹ ಅನುಮಾನಕ್ಕೆ ಕಾರಣವಾಗಿದೆ.