ತಪ್ಪಿಲ್ಲ ಕುಡಿಯುವ ನೀರಿಗೆ ಬವಣೆ; ಸಿರುಗುಪ್ಪ ಗ್ರಾಮಸ್ಥರ ಪ್ರತಿಭಟನೆ
ಬಳ್ಳಾರಿ, ಜುಲೈ 20: ಬಿಸಿಲನಾಡು ಬಳ್ಳಾರಿಯಲ್ಲಿ ಈ ವರ್ಷವೂ ಕುಡಿಯುವ ನೀರಿನ ಬವಣೆ ತಪ್ಪಿದಂತೆ ಕಾಣುತ್ತಿಲ್ಲ. ಇದನ್ನು ಕೇಳಬೇಕಾದ ಜನಪ್ರತಿನಿಧಿಗಳೂ ರಾಜಕೀಯದಾಟದಲ್ಲಿ ಮುಳುಗಿ ಹೋಗಿದ್ದಾರೆ. ಇವರನ್ನು ಮತ ಹಾಕಿ ವಿಧಾನಸೌಧಕ್ಕೆ ಕಳಿಸಿದ ಜನರು ಮಾತ್ರ ಕನಿಷ್ಠ ಕುಡಿಯುವ ನೀರಿಗೂ ಹೋರಾಟ ಮಾಡುವಂತಾಗಿದೆ.
ಜಲನರ್ತನವಿಲ್ಲದೆ ಖಾಲಿ ಖಾಲಿಯಾದ ಚಿಕ್ಲಿಹೊಳೆ...
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ವಿಪರೀತ ಬವಣೆ ಉಂಟಾಗಿದೆ. ಮುನ್ನ ಹದಿನೈದು ದಿನಗಳಿಗೆ ಒಮ್ಮೆಯಾದರೂ ನೀರು ಬರುತ್ತಿತ್ತು. ಈಗ ಅದೂ ಕಾಣೆಯಾಗಿದೆ. ದಿನೇ ದಿನೇ ನೀರಿನ ಹಾಹಾಕಾರ ಹೆಚ್ಚಿದೆ. ಹೀಗಾಗಿ ಇದರಿಂದ ರೋಸಿ ಹೋದ ಜನರು ನಿನ್ನೆ ನೀರಿಗಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಬದುಕಲು ಅವಶ್ಯಕವಾಗಿರುವ ಕುಡಿಯುವ ನೀರನ್ನೂ ಪೂರೈಕೆ ಮಾಡಲು ಸಾಧ್ಯವಾಗದ ಜನಪ್ರತಿನಿಧಿಗಳು ನಮಗ್ಯಾಕೆ ಎಂದು ಪ್ರಶ್ನೆ ಮಾಡಿದರು. ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಸತತ ಎರಡು ವರ್ಷಗಳಿಂದ ಕುಡಿಯುವ ನೀರಿಗೆ ಭಾರೀ ಸಮಸ್ಯೆಯಿದೆ. ಆದರೆ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ, ಹೀಗೆ ಮುಂದುವರೆದರೇ, ನಮ್ಮ ಗತಿ ಏನು ಎಂದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಕೂಡಲೇ ನೀರು ಪೂರೈಕೆ ಮಾಡಲೇಬೇಕೆಂದು ಒತ್ತಾಯಿಸಿದ್ದಾರೆ.